ಕೊರೋನ ವೈರಸ್ ವಿರುದ್ಧ ಲಸಿಕೆ ಸ್ವೀಕರಿಸಿದ್ದ ಆಶಾ ಕಾರ್ಯಕರ್ತೆ ನಿಧನ
ಸಾವಿಗೆ ಲಸಿಕೆಯೇ ಕಾರಣ ಎಂದು ಆರೋಪಿಸಿದ ಮೃತ ಮಹಿಳೆಯ ಕುಟುಂಬ
ಹೈದರಾಬಾದ್: ಕೆಲವೇ ದಿನಗಳ ಮೊದಲು ಕೊರೋನ ವೈರಸ್ ವಿರುದ್ಧ ಲಸಿಕೆ ಪಡೆದಿದ್ದ ಮಾನ್ಯತೆ ಪಡೆದಿರುವ ಸಾಮಾಜಿಕ ಆರೋಗ್ಯ ಕಾರ್ಯಕರ್ತೆ(ಆಶಾ) ರವಿವಾರ ಬೆಳಗ್ಗೆ ನಿಧನರಾದರು. ಬ್ರೈನ್ ಸ್ಟ್ರೋಕ್ ನಿಂದ ಮಹಿಳೆ ಸಾವನ್ನಪ್ಪಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಮೃತಪಟ್ಟಿರುವ ಆಶಾ ಕಾರ್ಯಕರ್ತೆಯನ್ನು ವಿಜಯ ಲಕ್ಷ್ಮೀ(42 ವರ್ಷ) ಎಂದು ಗುರುತಿಸಲಾಗಿದೆ. ಜನವರಿ 19ರಂದು ಲಸಿಕೆ ಸ್ವೀಕರಿಸಿದ ತಕ್ಷಣ ಅನಾರೋಗ್ಯ ಪೀಡಿತರಾಗಿದ್ದರು. ಹೀಗಾಗಿ ಅವರನ್ನು ಜನವರಿ 21ರಂದು ಗುಂಟೂರು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ವೈದ್ಯರು ರವಿವಾರ ಮಹಿಳೆ ಮೃತಪಟ್ಟಿದ್ದಾರೆಂದು ಘೋಷಿಸಿದರು. ಮಹಿಳೆಯ ಸಾವಿನ ಹಿಂದಿನ ಕಾರಣ ಕಂಡುಹಿಡಿಯಲು ಶವವನ್ನು ಶವಪರೀಕ್ಷೆಗೆ ಕಳುಹಿಸಲಾಗಿದೆ.
ಕೊರೋನ ವೈರಸ್ ವಿರುದ್ಧ ಲಸಿಕೆ ಸ್ವೀಕರಿಸಿದ್ದರಿಂದಲೇ ವಿಜಯ ಲಕ್ಷ್ಮೀ ಮೃತಪಟ್ಟಿರುವುದಾಗಿ ಕುಟುಂಬ ಸದಸ್ಯರು ಆರೋಪಿಸಿದ್ದಾರೆ. ಮೃತ ಮಹಿಳೆಯ ಕುಟುಂಬದವರನ್ನು ಆಸ್ಪತ್ರೆಯಲ್ಲಿ ಭೇಟಿಯಾಗಿರುವ ಜಿಲ್ಲಾಧಿಕಾರಿ ಸ್ಯಾಮುಯೆಲ್ ಆನಂದ್ ಕುಮಾರ್, ಆಶಾ ಕಾರ್ಯಕರ್ತೆಯ ಮಗನಿಗೆ ಸರಕಾರಿ ಉದ್ಯೋಗ, ವಾಸಕ್ಕಾಗಿ ಸ್ಥಳ ಹಾಗೂ ಸರಕಾರದಿಂದ ಆರ್ಥಿಕ ಪರಿಹಾರ ನೀಡುವುದಾಗಿ ಭರವಸೆ ನೀಡಿದರು.