ಹುಣಸೋಡು ದುರಂತದಲ್ಲಿ ಮೃತಪಟ್ಟ 6 ಜನರ ಪೈಕಿ ಐವರ ಗುರುತು ಪತ್ತೆ

ಶಿವಮೊಗ್ಗ, ಜ.24: ಗುರುವಾರ ರಾತ್ರಿ ಹುಣಸೋಡಿನ ಕಲ್ಲು ಕ್ವಾರಿಯಲ್ಲಿ ಸಂಭವಿಸಿದ ದುರ್ಘಟನೆಯಲ್ಲಿ ಮೃತಪಟ್ಟ ಆರು ಮಂದಿ ಪೈಕಿ ಐದು ಮಂದಿಯ ಗುರುತು ಪತ್ತೆ ಹಚ್ಚಲಾಗಿದೆ ಎಂದು ಪೊಲೀಸ್ ವರಿಷ್ಟಾಧಿಕಾರಿ ಕೆ.ಎಂ.ಶಾಂತರಾಜು ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಹುಣಸೋಡಿನಲ್ಲಿ ನಡೆದ ಸ್ಫೊಟದಲ್ಲಿ ಈವರೆಗೆ 6 ಜನರು ಮೃತರಾಗಿರುವುದು ತಿಳಿದು ಬಂದಿದ್ದು, 5 ಜನರ ಮೃತದೇಹಗಳನ್ನು ಅವರ ಸಂಬಂಧಿಕರು ಗುರುತಿಸಿದ್ದಾರೆ ಎಂದು ತಿಳಿಸಿದ್ದಾರೆ.
ಆಂದ್ರ ಪ್ರದೇಶದ ಅನಂತಪುರಂ ಜಿಲ್ಲೆಯ ರಾಯದುರ್ಗ ವಾಸಿಗಳಾದ ಪವನ್ ಕುಮಾರ್ (29), ಜಾವೀದ್ (28), ಚೆಲಿಮಾನು ರಾಜು (24) ಹಾಗೂ ಭದ್ರಾವತಿಯ ಅಂತರಗಂಗೆ ನಿವಾಸಿಗಳಾದ ಪ್ರವೀಣ (36),ಮಂಜುನಾಥ (35) ಎಂಬವರನ್ನು ಗುರುತು ಪತ್ತೆ ಹಚ್ಚಲಾಗಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಯ ನಂತರ ಅವರ ವಾರಸುದಾರರಿಗೆ ಹಸ್ತಾಂತರಿಸಲಾಗಿದೆ. ಇನ್ನೊಂದು ಮೃತದೇಹದ ಗುರುತು ಪತ್ತೆಯಾಗುವುದು ಬಾಕಿ ಇದ್ದು ತನಿಖೆ ಮುಂದುವರಿದಿದೆ ಎಂದು ಎಸ್ಪಿ ತಿಳಿಸಿದ್ದಾರೆ.





