ಟ್ರಾಕ್ಟರ್ ರ್ಯಾಲಿಗೆ ಡೀಸೆಲ್ ನಿರಾಕರಿಸುವ ಮೂಲಕ ಬಿಜೆಪಿ ರೈತರ ವಿರುದ್ಧ ಪಿತೂರಿ ನಡೆಸುತ್ತಿದೆ: ಅಖಿಲೇಶ್
ಲಕ್ನೋ, ಜ. 25: ಟ್ರಾಕ್ಟರ್ ರ್ಯಾಲಿಗೆ ಡೀಸೆಲ್ ಒದಗಿಸದಂತೆ ನಿರ್ದೇಶನ ನೀಡುವ ಮೂಲಕ ಬಿಜೆಪಿ ರೈತರ ವಿರುದ್ಧ ಪಿತೂರಿ ನಡೆಸುತ್ತಿದೆ ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಸೋಮವಾರ ಆರೋಪಿಸಿದ್ದಾರೆ.
‘‘ಇಂದು ಸಂವಿಧಾನ, ಗಣರಾಜ್ಯ-ಪ್ರಜಾಪ್ರಭುತ್ವ ಹಾಗೂ ಸ್ವಾತಂತ್ರ ಅಪಾಯದಲ್ಲಿದೆ’’ ಎಂದು ಸೋಮವಾರ ಟ್ವಿಟ್ಟರ್ನಲ್ಲಿ ಹಂಚಿಕೊಂಡ ‘ಗಣತಂತ್ರ ದಿವಸದ ಮಹಾಘೋಷಣೆ’ ಶೀರ್ಷಿಕೆಯ ದಾಖಲೆಯಲ್ಲಿ ಯಾದವ್ ಹೇಳಿದ್ದಾರೆ. ಗಣರಾಜ್ಯೋತ್ಸವದ ದಿನ ರೈತರು ಟ್ರಾಕ್ಟರ್ ರ್ಯಾಲಿ ನಡೆಸದಿರಲು ಟ್ರಾಕ್ಟರ್ಗಳಿಗೆ ಡೀಸೆಲ್ ಒದಗಿಸದಂತೆ ತೈಲ ಪಂಪ್ಗಳಿಗೆ ಬಿಜೆಪಿ ನಿರ್ದೇಶನ ನೀಡಿದೆ ಎಂಬ ಸುದ್ದಿ ಸ್ವೀಕರಿಸಿದ್ದೇವೆ ಎಂದು ಅವರು ಹೇಳಿದ್ದಾರೆ.
ಬಿಜೆಪಿ ಅತಿ ಕೀಳು ಮಟ್ಟದಲ್ಲಿ ರೈತರ ವಿರುದ್ಧ ಪಿತೂರಿ ನಡೆಸುತ್ತಿದೆ. ‘ಡೀಸೆಲ್ ಬಂಧಿ’ಗೆ ಪ್ರತಿಯಾಗಿ ರೈತರು ಬಿಜೆಪಿಗೆ ‘ನಾಕಾಬಂಧಿ’ ನಡೆಸಿದರೆ, ಅನಂತರ ಏನು ನಡೆಯಲಿದೆ ? ಎಂದು ಅವರು ಪ್ರಶ್ನಿಸಿದ್ದಾರೆ. ದ್ವೇಷ ಹಾಗೂ ಅವಿಶ್ವಾಸದ ಬದಲು ಸಮಾಜ, ರಾಜ್ಯ ಹಾಗೂ ದೇಶವನ್ನು ಪರಸ್ಪರ ಪ್ರೀತಿ ಹಾಗೂ ನಂಬಿಕೆಯಿಂದ ಬಲಪಡಿಸಬೇಕು. ನಾವು ನಿಜವಾದ ಅಭಿವೃದ್ಧಿ ಹಾಗೂ ಉತ್ತಮ ಕೆಲಸಕ್ಕೆ ಸ್ಫೂರ್ತಿಯಾಗಬೇಕು. ಶಾಂತಿ ಹಾಗೂ ಸೌಹಾರ್ದ ನಮ್ಮ ಮಂತ್ರವಾಗಬೇಕು ಎಂದು ಅವರು ಹೇಳಿದರು. ಏಕತೆ ಇಲ್ಲದೇ ಇದ್ದರೆ, ಶಾಂತಿ ಇಲ್ಲ. ಶಾಂತಿ ಇಲ್ಲದೇ ಇದ್ದರೆ, ಅಭಿವೃದ್ಧಿ ಇಲ್ಲ ಎಂಬುದು ನಮಗೆಲ್ಲ ಗೊತ್ತಿದೆ. ಪ್ರತಿಯೊಬ್ಬರೂ ಸಂಘಟಿತರಾಗಬೇಕು. ಅಲ್ಲದೆ, ದಾರಿತಪ್ಪಿಸುವಿಕೆ ಹಾಗೂ ದಿಗ್ಭ್ರಮೆಗೊಳಿಸುವುದನ್ನು ತಪ್ಪಿಸಬೇಕು. ಶಾಂತಿ ಹಾಗೂ ಸೌಹಾರ್ದ ಸ್ಥಾಪಿಸಲು ಪ್ರಯತ್ನಿಸಬೇಕು ಎಂದು ಅವರು ಹೇಳಿದರು.