ರೈತರಿಗೆ ಕೈ ಮುಗಿಯುತ್ತೇನೆ, ನೂತನ ಕೃಷಿ ಕಾಯ್ದೆ ಜಾರಿಗೆ ಅವಕಾಶ ಕೊಡಿ: ಗೋವಿಂದ ಕಾರಜೋಳ

ಬಾಗಲಕೋಟೆ, ಜ.26: ರೈತ ಸಮುದಾಯವನ್ನು ಕೈ ಮುಗಿದು ಪ್ರಾರ್ಥನೆ ಮಾಡುತ್ತೇವೆ. ನೂತನ ಕೃಷಿ ಕಾಯ್ದೆ ಅನುಷ್ಠಾನಕ್ಕೆ ಅವಕಾಶ ಮಾಡಿಕೊಡಿ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಮನವಿ ಮಾಡಿದ್ದಾರೆ.
ಮಂಗಳವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರದ ಕೃಷಿ ಕಾಯ್ದೆಗೆ ರಾಜಕೀಯ ಪ್ರೇರಿತ ಹೋರಾಟ ಸಲ್ಲ. ಕೃಷಿ ಕಾಯ್ದೆಯಿಂದ ರೈತರಿಗೆ ತೊಂದರೆ ಆದರೆ, ಮುಂದಿನ ದಿನಗಳಲ್ಲಿ ತಿದ್ದುಪಡಿ ಮಾಡಬಹುದು. ಸಾರ್ವಜನಿಕ ಹಿತಕ್ಕಾಗಿ ಹಲವು ಬಾರಿ ದೇಶದ ಸಂವಿಧಾನವನ್ನೇ ತಿದ್ದುಪಡಿ ಮಾಡಿದ್ದೇವೆ. ಇನ್ನು ಕಾಯ್ದೆ ತಿದ್ದುಪಡಿ ಸಾಧ್ಯವಿಲ್ಲವೇ ಎಂದು ತಿಳಿಸಿದ್ದಾರೆ.
ರಾಜ್ಯದಲ್ಲೆ 100 ರೈತರ ಪೈಕಿ 95 ಮಂದಿ ಕಾಯ್ದೆಯನ್ನು ಸ್ವಾಗತಿಸಿದ್ದಾರೆ. ಒಂದೆರಡು ರಾಜ್ಯಗಳಲ್ಲಿ ಮಾತ್ರ ಅದಕ್ಕೆ ವಿರೋಧ ಎದುರಾಗಿದೆ. ರೈತರನ್ನು ದಲ್ಲಾಳಿಗಳ ಶೋಷಣೆಯಿಂದ ತಪ್ಪಿಸಿ ಮಾರುಕಟ್ಟೆಯಲ್ಲಿ ಮುಕ್ತ ಅವಕಾಶ ಕಲ್ಪಿಸಬೇಕು ಎಂಬುದು ಕಾಯ್ದೆಯ ಆಶಯವಾಗಿದೆ. ಈ ಹಿಂದೆ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಕೃಷಿ ಕಾಯ್ದೆ ತಿದ್ದುಪಡಿಯನ್ನು ಉಲ್ಲೇಖಿಸಿದ್ದ ಕಾಂಗ್ರೆಸ್, ಈಗ ವಿರೋಧ ವ್ಯಕ್ತಪಡಿಸುತ್ತಿರುವುದು ಅಚ್ಚರಿ ಮೂಡಿಸಿದೆ ಎಂದು ಟೀಕಿಸಿದ್ದಾರೆ.





