ಕೊಲೆ ಪ್ರಕರಣ: ನಾಲ್ವರ ಬಂಧನ

ಶಿವಮೊಗ್ಗ(ಜ.28): ನಗರದ ಎನ್.ಟಿ.ರಸ್ತೆಯಲ್ಲಿರುವ ಸುಂದರ್ ಆಶ್ರಯ ಬಾರ್ ಮುಂಭಾಗದಲ್ಲಿ ಬುಧವಾರ ರಾತ್ರಿ ಸಂಭವಿಸಿದ ಗಲಾಟೆ ಹಾಗೂ ಕೊಲೆ ಪ್ರಕರಣ ಸಂಬಂಧ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಕರಣ ಕುರಿತು ಪತ್ರಿಕಾಗೋಷ್ಟಿ ಮಾಹಿತಿ ನೀಡಿದ ಜಿಲ್ಲಾ ರಕ್ಷಣಾಧಿಕಾರಿ ಕೆ.ಎಂ ಶಾಂತರಾಜು,ಶಿವಮೊಗ್ಗ ನಗರದವರಾದ ಮುಹಮದ್ ಸಮೀರ್(21), ಆದಿಲ್ ಪಾಷಾ (27), ಪ್ರತಾಪ್ (24), ಸಕ್ಲೈನ್ ಮುಸ್ತಾಕ್ (21) ಎಂಬವರನ್ನು ಬಂಧಿಸಲಾಗಿದೆ. ಇದರಲ್ಲಿ ಆದಿಲ್ ಮತ್ತು ಪ್ರತಾಪ್ ರೌಡಶೀಟರ್ಗಳಾಗಿರುವುದಾಗಿ ತಿಳಿಸಿದರು.
ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಹೆಚ್.ಟಿ ಶೇಖರ್ ,ಶಿವಮೊಗ್ಗ ಉಪವಿಭಾಗ ಡಿವೈಎಸ್ ಪಿ ಉಮೇಶ್ ಈಶ್ವರ್ ನಾಯಕ್ ಮಾರ್ಗದರ್ಶನದಲ್ಲಿ ದೊಡ್ಡಪೇಟೆ ಠಾಣೆ ವೃತ್ತ ನಿರೀಕ್ಷಕ ವಸಂತ್ ಕುಮಾರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ನಾಲ್ವರನ್ನು ಬಂಧಿಸಲಾಗಿದೆ ಎಂದರು.
ಗಲಾಟೆ ನಡೆದಾಗ ಸ್ಥಳದಲ್ಲಿ ೮-೯ ಜನ ಇರಬಹುದು ಎಂದು ಹೇಳಲಾಗುತ್ತಿದೆ. ಆ ಆಧಾರದ ಮೇಲೆ ಇನ್ನೂ ಕೆಲವರು ತಲೆಮರೆಸಿಕೊಂಡಿದ್ದು, ತನಿಖೆ ನಡೆಯುತ್ತಿದೆ. ಘಟನೆ ನಡೆದ ಕೆಲವೆ ಗಂಟೆಗಳಲ್ಲಿ ಪ್ರಕರಣವನ್ನು ಭೇದಿಸಲಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ಎಸ್.ಪಿ. ಎಚ್ಟಿ. ಶೇಖರ್ ಇದ್ದರು.
ಬಿಗಿ ಬಂದೋಬಸ್ತ್
ಈಗಷ್ಟೇ ಶಿವಮೊಗ್ಗ ನಗರ ತಣ್ಣಗಾಗುತ್ತಿದ್ದು, ಅದರ ಮಧ್ಯೆ ಕೊಲೆ ನಡೆದಿದ್ದು ಮುಂಜಾಗೃತಾ ಕ್ರಮವಾಗಿ ಪೊಲೀಸ್ ಇಲಾಖೆಯು ಬಿಗಿ ಬಂದೋಬಸ್ತ್ ಮಾಡಿದೆ. ಅಮೀರ್ ಅಹ್ಮದ್ ವೃತ್ತದ ಬಳಿ ಡಿಎಆರ್ ವಾಹನ ಸೇರಿದಂತೆ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ ಎಂದರು.
ಎಲ್ಲ ಬಾರ್ ಮಾಲೀಕರು ಸಿಸಿ ಕ್ಯಾಮೆರಾ ಅಳವಡಿಸಿಕೊಳ್ಳಿ. ಯಾವುದೇ ರೀತಿಯ ಗಲಾಟೆಗಳು ನಡೆದಲ್ಲಿ ತಕ್ಷಣ ಸಂಬಂಧಪಟ್ಟ ಪೊಲೀಸ್ ಠಾಣೆಗೆ ಮಾಹಿತಿ ನೀಡಿ. ಇದರಿಂದ ಆಗಬಹುದಾದ ಅನಾಹುತಗಳನ್ನು ತಡೆಯಲು ಸಹಕಾರಿಯಾಗುತ್ತದೆ. ಎಲ್ಲರೂ ಸಹಕರಿಸಲು ಕೋರಿಕೆ.
- ಕೆ.ಎಂ.ಶಾಂತರಾಜು, ಎಸ್.ಪಿ. ಶಿವಮೊಗ್ಗ







