ಒಂದಿಂಚೂ ಕದಲಬೇಡಿ, ನಿಮ್ಮ ಜೊತೆ ನಾವಿದ್ದೇವೆ: ರೈತರಿಗೆ ರಾಹುಲ್ ಗಾಂಧಿ ಭರವಸೆ
"ಕೃಷಿ ಕಾಯ್ದೆಯನ್ನು ಹಿಂಪಡೆದು ಕಸದ ಬುಟ್ಟಿಗೆ ಎಸೆದುಬಿಡಿ"
ಹೊಸದಿಲ್ಲಿ,ಜ.29: ಕೇಂದ್ರ ಸರಕಾರದ ವಿವಾದಾತ್ಮಕ ಕೃಷಿ ಕಾಯ್ದೆಗಳ ಕುರಿತು ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಬೆಂಬಲ ಸೂಚಿಸಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹಲವಾರು ದಿನಗಳಿಂದ ಕೇಂದ್ರ ಸರಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಇದೀಗ ಪ್ರತಿಭಟನಾನಿರತ ರೈತರನ್ನು ಉತ್ತರಪ್ರದೇಶ ಸರಕಾರವು ತೆರವುಗೊಳಿಸುತ್ತಿರುವ ಬೆನ್ನಲ್ಲೇ ರಾಹುಲ್ ಗಾಂಧಿ "ಒಂದಿಂಚೂ ಕದಲಬೇಡಿ, ನಿಮ್ಮೊಂದಿಗೆ ನಾವಿದ್ದೇವೆ ಎಂದು ಹೇಳಿಕೆ ನೀಡಿದ್ದಾರೆ.
"ರೈತರು ಹೋರಾಟದಿಂದ ಯಾವುದೇ ಕಾರಣಕ್ಕೂ ಒಂದಿಂಚೂ ಹಿಂದೆ ಸರಿಯಬಾರದು. ನಿಮ್ಮೊಂದಿಗೆ ನಾವಿದ್ದೇವೆ. ಈ ಎಲ್ಲಾ ಗೊಂದಲಗಳಿಗೂ ಪರಿಹಾರವೆಂದರೆ ಕೃಷಿ ಕಾಯ್ದೆಯನ್ನು ಹಿಂದೆಗೆದುಕೊಂಡು, ಅದನ್ನು ಕಸದ ಬುಟ್ಟಿಗೆ ಎಸೆಯುವುದಾಗಿದೆ. ಯಾವುದೇ ಕಾರಣವಿಲ್ಲದೇ ಲಕ್ಷಾಂತರ ಮಂದಿ ಬಂದು ಪ್ರತಿಭಟನೆ ನಡೆಸುವುದಿಲ್ಲ"
"ಕೊರೋನ ಸಾಂಕ್ರಾಮಿಕದ ಸಂದರ್ಭದಲ್ಲಿ ಶ್ರೀಮಂತಿಕೆಯನ್ನುಹೆಚ್ಚಿಸಿಕೊಂಡ ಕೆಲವರಿಗಾಗಿ ಪ್ರಧಾನಿ ಮೋದಿ ಕೆಲಸ ಮಾಡುತ್ತಿದ್ದಾರೆ. ರೈತರ ಪ್ರತಿಭಟನೆಯು ಹಲವಾರು ಕಡೆಗಳಿಗೆ ಹರಡುತ್ತಿದೆ. ದೇಶವು ತನ್ನ ಸ್ಥಿರತೆಯನ್ನು ಕಳೆದುಕೊಳ್ಳುತ್ತಿದೆ. ಕೆಂಪುಕೋಟೆಗೆ ನುಗ್ಗಲು ಹೊರಗಿನವರನ್ನು ಅನುಮತಿಸಿದ್ದು ಯಾರೆಂದು ಗೃಹ ಸಚಿವರೇ ಸ್ಪಷ್ಟಪಡಿಸಬೇಕಾಗಿದೆ. ಸರಕಾರವು ರೈತರ ನೋವನ್ನು ಅರ್ಥೈಸಿಕೊಳ್ಳುವ ಬದಲು ಅವರನ್ನು ಹತ್ತಿಕ್ಕಲು ಹೊರಟಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾಗಿ timesofindia.com ವರದಿ ಮಾಡಿದೆ.