ಕೆಎಸ್ಸಾರ್ಟಿಸಿ ನಿಗಮಗಳ ವಿಲೀನ ಇಲ್ಲ: ಸಾರಿಗೆ ಸಚಿವ ಲಕ್ಷ್ಮಣ ಸವದಿ

ಮಂಗಳೂರು, ಜ.30: ಕೆಎಸ್ಸಾರ್ಟಿಸಿ ನಾಲ್ಕು ನಿಗಮಗಳ ವಿಲೀನ ಕುರಿತು ಯಾವುದೇ ಪ್ರಸ್ತಾಪ ಇಲ್ಲ ಎಂದು ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಸ್ಪಷ್ಟಪಡಿಸಿದ್ದಾರೆ.
ಮಂಗಳೂರಿನ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮೀಣ ಸಾರಿಗೆಯ ನೌಕರರಿಗೆ ಒಟಿ(ಓವರ್ ಟೈಮ್) ಭತ್ತೆ ನೀಡಲು ಸೂಚನೆ ನೀಡಲಾಗಿದೆ ಎಂದರು.
ಮಂಗಳೂರಿನಲ್ಲಿ ಸಂಚಾರಕ್ಕೆ ಬಾಕಿ ಇರುವ 26 ನರ್ಮ್ ನಗರ ಸಾರಿಗೆ ಓಡಾಟ ಆರಂಭಿಸುವ ಬಗ್ಗೆ ಕೋರ್ಟ್ ತಡೆ ತೆರವಿಗೆ ಪ್ರಯತ್ನ ನಡೆಸಲಾಗುವುದು. ವಿವಿಧ ಸಾರಿಗೆ ಸಮಸ್ಯೆಗಳ ಇತ್ಯರ್ಥಕ್ಕೆ ಸಾರಿಗೆ ಇಲಾಖೆ, ಖಾಸಗಿ ಬಸ್ ಮಾಲಕರು ಹಾಗೂ ಜನಪ್ರತಿನಿಧಿಗಳ ಜೊತೆ ಸಭೆ ನಡೆಸಿ ತ್ವರಿತ ಕ್ರಮ ಕೈಗೊಳ್ಳುವುದಾಗಿ ಅವರು ಭರವಸೆ ನೀಡಿದರು.
ಕೆಎಸ್ಸಾರ್ಟಿಸಿ ನಾಲ್ಕು ನಿಗಮಗಳ ಸಾರಿಗೆ ಸಿಬ್ಬಂದಿಗೆ ಬಾಕಿಯುಳಿದ ಅರ್ಧ ವೇತನವನ್ನು ಶೀಘ್ರ ಬಿಡುಗಡೆಗೊಳಿಸಲಾಗುವುದು. ಅಲ್ಲದೆ ಜನವರಿ ತಿಂಗಳ ವೇತನವನ್ನೂ ಇಷ್ಟರಲ್ಲೇ ಬಿಡುಗಡೆಗೊಳಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ಕೊರೋನ ಲಾಕ್ಡೌನ್ ವೇಳೆ 2 ತಿಂಗಳ ಕಾಲ ಸಾರಿಗೆ ಸಂಚಾರ ಸ್ಥಗಿತವಾಗಿತ್ತು. ಆದರೂ ಸರಕಾರ ಸಾರಿಗೆ ನೌಕರರಿಗೆ 2 ತಿಂಗಳ 650 ಕೋಟಿ ರೂ. ವೇತನ ಪಾವತಿಸಿದೆ. ನಂತರ ಹಂತ ಹಂತವಾಗಿ ಸಾರಿಗೆ ಸಂಚಾರ ಆರಂಭವಾದ ಬಳಿಕ 7 ತಿಂಗಳ ವೇತನವನ್ನು ಶೇ.75 ಸರಕಾರ ಹಾಗೂ ಶೇ.25 ನಿಗಮ ಸೇರಿಸಿ ನೀಡಿದೆ. ಇಲ್ಲಿವರೆಗೆ 1,760 ಕೋಟಿ ರೂ. ಮೊತ್ತವನ್ನು ಸರಕಾರದಿಂದ ಪಡೆದು 1.30 ಲಕ್ಷ ಸಾರಿಗೆ ಸಿಬ್ಬಂದಿಗೆ ವೇತನ ನೀಡಲಾಗಿದೆ. ಡಿಸೆಂಬರ್ನಲ್ಲಿ ಅರ್ಧ ಸಂಬಳ ಮಾತ್ರ ನೀಡಲಾಗಿದೆ. ಅದನ್ನು ಕೂಡ ಮೂರ್ನಾಲ್ಕು ದಿನಗಳಲ್ಲಿ ಭರ್ತಿಯಾಗಿ ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
ನಾಲ್ಕು ದಿನಗಳ ಕಾಲ ಸಾರಿಗೆ ಸಿಬ್ಬಂದಿ ನಡೆಸಿದ ಮುಷ್ಕರ ಬಳಿಕ ಅವರ 10 ಬೇಡಿಕೆಗಳಲ್ಲಿ 9 ಭರವಸೆ ಈಡೇರಿಸಲು ಕ್ರಮ ಕೈಗೊಳ್ಳಲಾಗಿದೆ. ಈ ಬಗ್ಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದ್ದು, ಕೆಲವೇ ದಿನಗಳಲ್ಲಿ ಸಾರಿಗೆ ನೌಕರರ ಬೇಡಿಕೆ ಈಡೇರಲಿದೆ ಎಂದರು.







