ಬಿಜೆಪಿಗೆ ಸೇರಲು ದಿಲ್ಲಿಗೆ ದೌಡಾಯಿಸಿದ ತೃಣಮೂಲ ಕಾಂಗ್ರೆಸ್ ನ ಐವರು ಮುಖಂಡರು

ಹೊಸದಿಲ್ಲಿ: ತೃಣಮೂಲ ಕಾಂಗ್ರೆಸ್ ನ ಐವರು ನಾಯಕರು ಬಿಜೆಪಿಗೆ ಸೇರ್ಪಡೆಯಾಗಲು ಇಂದು ಸಂಜೆ 4 ಗಂಟೆಗೆ ವಿಶೇಷ ವಿಮಾನದಲ್ಲಿ ದಿಲ್ಲಿಗೆ ದೌಡಾಯಿಸಿದ್ದಾರೆ. ಈ ನಾಯಕರು ರವಿವಾರ ಹೌರಾದಲ್ಲಿ ನಡೆಯುವ ರ್ಯಾಲಿಯ ವೇಳೆ ಬಿಜೆಪಿ ಸೇರುವ ಯೋಜನೆ ಇತ್ತು. ಆದರೆ, ಇದೀಗ ಆ ಯೋಜನೆಯ ಬದಲಾಗಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ ಸಮ್ಮುಖದಲ್ಲಿ ಬಿಜೆಪಿಯ ಮುಖ್ಯ ಕಚೇರಿಯಲ್ಲಿ ಕಮಲ ಮುಡಿಯಲು ಈ ನಾಯಕರು ಮುಂದಾಗಿದ್ದಾರೆ.
ಶಾ ಅವರು ರವಿವಾರ ಹೌರಾದಲ್ಲಿ ರ್ಯಾಲಿಯಲ್ಲಿ ಭಾಗವಹಿಸುವ ಕಾರ್ಯಕ್ರಮವಿತ್ತು. ಈ ವೇಳೆ ತೃಣಮೂಲ ಕಾಂಗ್ರೆಸ್ ನ ಐವರು ನಾಯಕರು ಬಿಜೆಪಿಗೆ ಸೇರಬೇಕಾಗಿತ್ತು. ಆದರೆ, ಶಾ ಕೋಲ್ಕತಾದ ಪ್ರವಾಸವನ್ನು ದಿಢೀರನೇ ರದ್ದುಪಡಿಸಿ, ಪರ್ಯಾಯ ಯೋಜನೆ ರೂಪಿಸಿದ್ದಾರೆ.
ಇತ್ತೀಚೆಗೆ ಅರಣ್ಯ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ರಾಜೀವ್ ಬ್ಯಾನರ್ಜಿ, ತೃಣಮೂಲ ಕಾಂಗ್ರೆಸ್ ನ ಬಾಲಿ ಶಾಸಕಿ ವೈಶಾಲಿ ದಾಲ್ಮಿಯಾ, ಉತ್ತರಪಾರ ಶಾಸಕ ಪ್ರಬೀರ್ ಘೋಷಾಲ್, ಹೌರಾ ಮಾಜಿ ಮೇಯರ್ ರಥಿನ್ ಚಕ್ರವರ್ತಿ ಹಾಗೂ ಮಾಜಿ ಶಾಸಕ ರಾಣಾಘಟ್ ಪಾರ್ಥ ಸಾರಥಿ ಚಟರ್ಜಿ ಬಿಜೆಪಿ ಸೇರಲು ಸಜ್ಜಾಗಿದ್ದಾರೆ.





