ಸಂಚಾರದ ಅಗತ್ಯಕ್ಕೆ ತಕ್ಕಂತೆ ಬಸ್ ವ್ಯವಸ್ಥೆ ಕಲ್ಪಿಸಿ: ಡಿಸಿಎಂ ಲಕ್ಷ್ಮಣ ಸವದಿ

ಮಂಗಳೂರು, ಜ.30: ಸಾರ್ವಜನಿಕರ ಸುಗಮ ಪ್ರಯಾಣಕ್ಕೆ ಅವಶ್ಯಕತೆಗೆ ತಕ್ಕಂತೆ ಬಸ್ ಸಂಚಾರ ಪ್ರಾರಂಭಿಸಬೇಕು ಎಂದು ಕೆಎಸ್ಸಾರ್ಟಿಸಿ ಅಧಿಕಾರಿಗಳಿಗೆ ಉಪ ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸಂಗಪ್ಪ ಸವದಿ ಸೂಚನೆ ನೀಡಿದ್ದಾರೆ.
ನಗರದ ಸರ್ಕ್ಯೂಟ್ ಹೌಸ್ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಮಂಗಳೂರು ಹಾಗೂ ಪುತ್ತೂರು ವಿಭಾಗಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಕೋವಿಡ್ ಸೋಂಕಿನ ನಿಯಂತ್ರಣಕ್ಕಾಗಿ ದೇಶದಾದ್ಯಂತ ಲಾಕ್ಡೌನ್ ಘೋಷಿಸಿದ ಹಿನ್ನೆಲೆಯಲ್ಲಿ 150ಕ್ಕೂ ಹೆಚ್ಚು ಮಾರ್ಗಗಳ ಸಾರಿಗೆ ಬಸ್ಗಳನ್ನು ನಿಲ್ಲಿಸಲಾಗಿತ್ತು. ಸೋಂಕು ಗಣನೀಯವಾಗಿ ಕಡಿಮೆಯಾಗಿದ್ದು, ಜನಜೀವನ ಯಥಾಸ್ಥಿತಿಗೆ ಬಂದಿದೆ. ವಾಣಿಜ್ಯ ಚಟುವಟಿಕೆಗಳು ಚುರುಕುಗೊಂಡಿವೆ. ಶಾಲಾ-ಕಾಲೇಜುಗಳು ಪ್ರಾರಂಭವಾಗಿದ್ದು, ಜನ ಸಂಚಾರ ಯಥಾಸ್ಥಿತಿಗೆ ಬಂದಿದೆ. ಜನಸಾಮಾನ್ಯರು ಸೇರಿದಂತೆ ವಿದ್ಯಾರ್ಥಿಗಳ ಅವಶ್ಯಕತೆಗೆ ತಕ್ಕಂತೆ ಬಸ್ಗಳನ್ನು ಪುನರಾರಂಭಿಸಬೇಕೆಂದು ತಿಳಿಸಿದರು.
ಕೋವಿಡ್ ಸೋಂಕಿನಿಂದಾಗಿ ಬಸ್ ಸಂಚಾರ ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ ಕೆಎಸ್ಸಾರ್ಟಿಸಿ ನಾಲ್ಕು ನಿಗಮಗಳಿಂದ ನಾಲ್ಕು ಸಾವಿರ ಕೋಟಿಗೂ ಹೆಚ್ಚು ಹಾನಿ ಉಂಟಾಗಿದೆ. ನಷ್ಟ ಭರಿಸಲು ಸರಕಾರದಿಂದ ಸಹಾಯಧನ ಪಡೆಯುವುದು ಸೇರಿದಂತೆ ಇಲಾಖೆಯಲ್ಲಾಗುವ ಸೋರಿಕೆ ಹಾಗೂ ಅನಾವಶ್ಯಕ ವೆಚ್ಚಗಳನ್ನು ಕಡಿತಗೊಳಿಸುವುದರೊಂದಿಗೆ ಹಾನಿ ಸರಿದೂಗಿಸಲಾಗುವುದು ಎಂದರು.
ಜಿಲ್ಲೆಯಲ್ಲಿರುವ 2 ವಿಭಾಗದ ಬಸ್ ಡಿಪೋಗಳಲ್ಲಿ 9 ಲಕ್ಷಕ್ಕಿಂತ ಹೆಚ್ಚು ಕಿ.ಮೀ ಸಂಚರಿಸುವ ಬಸ್ಗಳು ಹಾಗೂ ಬಸ್ಗಳ ಸ್ಥಿತಿಗತಿಗಳು ಸೇರಿದಂತೆ ಮತ್ತಿತರ ಮಾಹಿತಿ ಪಡೆದು ಮಾತನಾಡಿ ಮುಂದಿನ ಬಜೆಟ್ನಲ್ಲಿ ಜಿಲ್ಲೆಗೆ ಅಗತ್ಯವಿರುವ ಹೊಸ ಬಸ್ಗಳನ್ನು ನೀಡಲಾಗುವುದು ಎಂದರು.
ಜಿಲ್ಲೆಯಲ್ಲಿ ಹೊಸದಾಗಿ ಬಸ್ ನಿಲ್ದಾಣ, ಡಿಪೋ ಸೇರಿದಂತೆ ಮತ್ತಿತರ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಹೊಸದಾಗಿ ಕ್ರಿಯಾ ಯೋಜನೆಗಳ ಬಗ್ಗೆ ಮಾಹಿತಿ ಪಡೆದ ಅವರು, ಅವುಗಳ ಅಗತ್ಯವಿರುವ ಅನುದಾನವನ್ನು ಮುಂದಿನ ಬಜೆಟ್ನಲ್ಲಿ ಕಲ್ಪಿಸಲಾಗುವುದು ಎಂದು ತಿಳಿಸಿದರು.
ಸಾರಿಗೆ ನೌಕರರಿಗೆ ಕಳೆದ ಕೋವಿಡ್-19 ಸಮಯದಲ್ಲಿ ನೌಕರರಿಗೆ ನೀಡದೆ ಇರುವ ವೇತನವನ್ನು ಶೀರ್ಘದಲ್ಲೇ ನೀಡಲಾಗು ವುದು. ಸಾರಿಗೆ ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯನ್ನು ನೀಗಿಸಲು ಮುಂದಿನ ಮಾರ್ಚ್ ನಂತರ ಹಂತ ಹಂತವಾಗಿ ನೇಮಕಾತಿ ಮಾಡಲಾಗುತ್ತದೆ ಎಂದರು.
ಕೆಎಸ್ಸಾರ್ಟಿಸಿ ಬಸ್ಗಳ ಸಂಚಾರಕ್ಕೆ ಪ್ರಾದೇಶಿಕ ಸಾರಿಗೆ ಇಲಾಖೆಯಿಂದ ರಹದಾರಿ ಪಡೆದು ಬಸ್ಗಳನ್ನು ಪ್ರಾರಂಭಿಸದೇ ಇದ್ದಲ್ಲಿ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತದೆ. ಇದಕ್ಕೆ ಆಸ್ಪದ ನೀಡಬಾರದು. ಇತರ ಖಾಸಗಿ ಬಸ್ಗಳ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದರು.
ದಕ್ಷಿಣ ಕನ್ನಡ ಜಿಲ್ಲೆಗೆ ಹೊರಜಿಲ್ಲೆಗಳಿಂದ ಸಾಮಾನ್ಯವಾಗಿ ಹೆಚ್ಚು ಜನರು ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಲು ಸಂಚರಿಸುತ್ತಾರೆ. ಅವರ ಊಟೋಪಚಾರಗಳಿಗೆ ಅನುಕೂಲವಾಗುವಂತೆ ಸಸ್ಯಹಾರಿ ಹೋಟೆಲ್ಗಳ ಮುಂದೆ ಬಸ್ ನಿಲ್ಲಿಸಲು ಸೂಚನೆ ನೀಡ ಬೇಕೆಂದು ಕೆಎಸ್ಸಾರ್ಟಿಸಿ ಅಧಿಕಾರಿಗಳಿಗೆ ಆದೇಶಿಸಿದರು.
ಟೋಲ್ನಲ್ಲಿ ವಾಹನ ದಟ್ಟಣೆ: ‘ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ರಾಷ್ಟ್ರೀಯ ಹೆದ್ದಾರಿಯಲ್ಲಿ 9 ಕಿ.ಮೀ ಅಂತರದ ಒಳಗೆ 2 ಟೋಲ್ ಗೇಟ್ಗಳು ಇದ್ದು, ಸ್ಥಳೀಯ ಜಿಲ್ಲೆಗಳ ವಾಹನಗಳಿಗೆ ರಿಯಾಯಿತಿ ನೀಡಲಾಗಿದ್ದರೂ ಸಹ ಜನರ ಸುಗಮ ಸಂಚಾರಕ್ಕೆ ವಾಹನ ದಟ್ಟಣೆಯಿಂದ ಸಂಚಾರ ಅಸ್ಥವ್ಯಸ್ಥವಾಗುತ್ತಿದೆ ಎಂಬ ದೂರುಗಳು ಕೇಳಿಬರುತ್ತಿದೆ ಎಂಬ ವಿಷಯವನ್ನು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಅವರು ಸಚಿವರ ಗಮನಕ್ಕೆ ತಂದರು.
ಸಭೆಯಲ್ಲಿ ಶಾಸಕ ವೇದವ್ಯಾಸ ಕಾಮತ್, ಭರತ್ ಶೆಟ್ಟಿ ವೈ., ಸಾರಿಗೆ ಆಯುಕ್ತ ಶಿವಕುಮಾರ್, ಕೆಎಸ್ಸಾರ್ಟಿಸಿ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಡಿಪೋ ಮ್ಯಾನೇಜರ್ಗಳು ಸಭೆಯಲ್ಲಿ ಉಪಸ್ಥಿತರಿದ್ದರು.
‘ವಿದ್ಯಾರ್ಥಿಗಳಿಗೆ ಹಳೆ ವ್ಯವಸ್ಥೇಯಲ್ಲೇ ಬಸ್ಪಾಸ್’
ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಪ್ರಯಾಣಿಸಲು ಅನುಕೂಲವಾಗುವಂತೆ ಬಸ್ಪಾಸ್ಗಳ ವಿತರಣೆಯು ಸೇವಾ ಸಿಂಧುಗಳ ಮೂಲಕ ನೀಡುವುದು ವಿಳಂಬವಾಗುತ್ತಿರುವುದು ಕೇಳಿಬರುತ್ತಿದೆ. ವಿದ್ಯಾರ್ಥಿಗಳಿಗೆ ಈ ಹಿಂದೆ ನೀಡುತ್ತಿದ್ದ ಹಳೆಯ ವ್ಯವಸ್ಥೆಯಲ್ಲೇ ಬಸ್ಪಾಸ್ಗಳನ್ನು ನೀಡಬೇಕು ಎಂದು ಉಪಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಸೂಚನೆ ನೀಡಿದ್ದಾರೆ.
ಭತ್ಯೆ ತಾರತಮ್ಯ ಅಕ್ಷಮ್ಯ:
ಕೆಎಸ್ಸಾರ್ಟಿಸಿ ಚಾಲಕರು ಹಾಗೂ ನಿರ್ವಾಹಕರಿಗೆ ಕರ್ತವ್ಯದ ಮಾರ್ಗ, ಹೆಚ್ಚುವರಿ ಕೆಲಸದ ಭತ್ಯೆ ನೀಡುವುದು ಸೇರಿದಂತೆ ಮತ್ತಿತರ ಕಾರ್ಯಗಳ ಸೂಚನೆ ನೀಡುವಾಗ ಮೇಲಧಿಕಾರಿಗಳು ಯಾವುದೇ ರೀತಿಯ ತಾರತಮ್ಯ ಮಾಡಬಾರದು. ತಪ್ಪಿದಲ್ಲಿ ಅಂತಹ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಖಡಕ್ ಸೂಚನೆ ಹೊರಡಿಸಿದ್ದಾರೆ.
''ಸುಬ್ರಹ್ಮಣ್ಯ ಹಾಗೂ ಬಂಟ್ವಾಳ ಸೇರಿದಂತೆ ಮತ್ತಿತರ ಕಡೆಯಲ್ಲಿ ಹೊಸದಾಗಿ ಬಸ್ ನಿಲ್ದಾಣ ಹಾಗೂ ಡಿಪೋಗಳನ್ನು ತೆರೆಯಲು ಅವಶ್ಯವಿರುವ ಜಾಗವನ್ನು ಗುರುತಿಸಿ ನೀಡಲಾಗುವುದು.''
- ಡಾ.ರಾಜೇಂದ್ರ ಕೆ.ವಿ.,
ಜಿಲಾಧಿಕಾರಿ, ದ.ಕ.







