ರೈತರೇ ನಡೆಸಿಕೊಡುವ ವಿಲೇಜ್ ಕುಕ್ಕಿಂಗ್ ಚಾನೆಲ್ ನಲ್ಲಿ 'ಅಡುಗೆ ಮಾಡಿʼ ಮಿಂಚಿದ ರಾಹುಲ್ ಗಾಂಧಿ
ವೀಡಿಯೋ ವೀಕ್ಷಿಸಿ

ತಿರುಚಿ,ಜ.30: ಪುಡುಕೊಟೈ ಜಿಲ್ಲೆಯ ಚಿನ್ನ ವೀರಮಂಗಲಂನ ರೈತರ ಗುಂಪೊಂದು ನಡೆಸುವ ವಿಲೇಜ್ ಕುಕ್ಕಿಂಗ್ ಚಾನೆಲ್(ವಿಸಿಸಿ)ಚೆಫ್ ಗಳು ಯೂ ಟ್ಯೂಬ್ ನಲ್ಲಿ ಭಾರೀ ಜನಪ್ರಿಯತೆ ಗಳಿಸಿದ್ದಾರೆ. ಇತ್ತೀಚೆಗೆ ಕರೂರ್ ಜಿಲ್ಲೆಗೆ ಭೇಟಿ ನೀಡಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು ತಮ್ಮ ಅಡುಗೆ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದ ವಿಸಿಸಿ ಬಳಗ ಎಲ್ಲರನ್ನು ಅಚ್ಚರಿಗೊಳಿಸಿತ್ತು. ರೈತರೊಂದಿಗೆ ರಾಹುಲ್ ಅಡುಗೆ ಮಾಡುವ ಈ ವೀಡಿಯೊ ಭಾರೀ ವೈರಲ್ ಆಗಿದ್ದು 54 ಲಕ್ಷಕ್ಕೂ ಅಧಿಕ ಜನರು ವೀಡಿಯೊ ವೀಕ್ಷಿಸಿದ್ದಾರೆ.
"ನಮ್ಮನ್ನು ಭೇಟಿಯಾಗಲು ರಾಹುಲ್ ಗಾಂಧಿ ಬಯಸಿದ್ದರು ಎಂಬ ವಿಚಾರ ತಿಳಿದು ನಮಗೆ ರೋಮಾಂಚನವಾಗಿತ್ತು. ಅವರು ನಮ್ಮ ಕೆಲವು ವೀಡಿಯೋಗಳನ್ನು ನೋಡಿದ್ದಾರೆ" ಎಂದು ತನ್ನ ಸಹೋದರ ಸಂಬಂಧಿಗಳಾದ ಮುರುಗೇಸನ್, ಅಯ್ಯನಾರ್, ತಮಿಳ್ ಸೆಲ್ವನ್ ಹಾಗೂ ಟಿ. ಮುತ್ತುಮಣಿಕ್ಕಂ ಜೊತೆಗೆ ವಿಸಿಸಿ ಯನ್ನು ನಡೆಸುತ್ತಿರುವ ವಿ.ಸುಬ್ರಮಣಿಯನ್ ಹೇಳಿದ್ದಾರೆ.
ರಾಹುಲ್ ಅಣ್ಣ ಅಣಬೆ ಬಿರಿಯಾನಿ ತಯಾರಿಕೆಯ ಆರಂಭದಲ್ಲೇ ನಮ್ಮೊಂದಿಗೆ ಇರಬೇಕಾಗಿತ್ತು.ಆದರೆ ಅವರು ಕೆಲಸದ ಒತ್ತಡದಿಂದ ಬೇಗನೆ ಬರಲಿಲ್ಲ. ಆದರೆ ರಾಯ್ತಾ ತಯಾರಿಸಲು ನಮ್ಮೊಂದಿಗೆ ಕೈಜೋಡಿಸಿದರು. ನಮ್ಮೊಂದಿಗೆ ರಾಹುಲ್ ಅಣ್ಣ ಬೇಗನೆ ಬೆರತುಕೊಂಡಿದ್ದನ್ನು ನೋಡಿ ಹೃದಯ ಉಕ್ಕಿಬಂತು ಎಂದು ಸುಬ್ರಹ್ಮಣ್ಯನ್ “ದಿ ಹಿಂದೂ’ಗೆ ತಿಳಿಸಿದರು.
ಶುಕ್ರವಾರ ಯೂಟ್ಯೂಬ್ ನಲ್ಲಿ ಹಂಚಿಕೆಯಾಗಿರುವ 14 ನಿಮಿಷದ ವೀಡಿಯೊದಲ್ಲಿ ರಾಹುಲ್ ಗಾಂಧಿ ರಾಯ್ತಾ ತಯಾರಿಸಿದರು. ಇದನ್ನು ತಯಾರಿಸಲು ಏನೇನು ಪದಾರ್ಥಗಳು ಬೇಕೆನ್ನುವ ಕುರಿತು ಗಾಂಧಿ ತಮಿಳಿನಲ್ಲೇ ಹೇಳಿದರು.
ವೆಂಗಾಯಂ(ಈರುಳ್ಳಿ), ತೈರ್ (ಮೊಸರು) ಹಾಗೂ ಕಲ್ಲು ಉಪ್ಪು ಎಂದು ತಮಿಳಿನಲ್ಲೇ ಹೇಳುತ್ತಾ ರಾಹುಲ್ ಅವುಗಳನ್ನು ಒಂದು ಪಾತ್ರೆಗೆ ಹಾಕುತ್ತಾರೆ. ನಾನು ಅಡುಗೆ ಮಾಡಲು ತುಂಬಾ ಇಷ್ಟಪಡುತ್ತೇನೆ ಎಂದು ರಾಹುಲ್ ಚೆಫ್ ಗಳಿಗೆ ಹೇಳುತ್ತಾರೆ. ಕರೂರಿನ ಕಾಂಗ್ರೆಸ್ ಸಂಸದೆ ಎಸ್. ಜ್ಯೋತಿಮಣಿ ಅವರು ತಮಿಳು ಭಾಷೆಯನ್ನು ಅನುವಾದಿಸಿ ರಾಹುಲ್ ಗೆ ತಿಳಿಸಿದರು.
“ವಿಲೇಜ್ ಕುಕ್ಕಿಂಗ್ ಚಾನೆಲ್ ನ ಹಿಂದಿರುವ ಜನರ ಕಥೆ ಕೇಳಿ ನಾನು ಸ್ಫೂರ್ತಿ ಪಡೆದಿದ್ದೆ. ಆನ್ ಲೈನ್ ಉದ್ಯಮದಿಂದ ಬರುವ ಆದಾಯದಿಂದ ಇತರರಿಗೆ ಹೇಗೆ ಸಹಾಯ ಮಾಡುತ್ತಾರೆ ಎಂಬುದನ್ನು ನೋಡಿ ನನಗೆ ಸಂತೋಷವಾಯಿತು. ರಾಹುಲ್ ಗಾಂಧಿ ಈಗಾಗಲೇ ತಮ್ಮ ಕೆಲಸ ಮೂಲಕ ಯೂಟ್ಯೂಬ್ ನಲ್ಲಿ ಪರಿಚಿತರಾಗಿದ್ದಾರೆ. ಹೀಗಾಗಿ ನಮಗೆ ಭೇಟಿಯಾಗಲು ಇದೊಂದು ಉತ್ತಮ ಮಾರ್ಗವಾಗಿದೆ ಎಂದು ಜ್ಯೋತಿಮಣಿ ಹೇಳಿದರು.
ರಾಹುಲ್ ಗಾಂಧಿ ಸುಮಾರು ಒಂದೂವರೆ ಗಂಟೆ ಕಾಲ ವಿಸಿಸಿ ತಂಡದೊಂದಿಗೆ ಇದ್ದರು. ತೆಂಗಿನಗರಿಯಿಂದ ತಯಾರಿಸಿರುವ ಚಾಪೆಗಳ ಮೇಲೆ ಕುಳಿತ ರಾಹುಲ್ ಗಾಂಧಿ, ರಾಯ್ತಾದೊಂದಿಗೆ ಅಣಬೆ ಬಿರಿಯಾನಿಯ ರುಚಿ ನೋಡಿದರು. ಅಮೆರಿಕದಲ್ಲಿ ವಿಸಿಸಿ ತಂಡ ತಮ್ಮ ಪ್ರದರ್ಶನ ನೀಡಲು ನೆರವಾಗಲು ಚಿಕಾಗೊ ಮೂಲದ ಸ್ಯಾಮ್ ಪಿಟ್ರೋಡಾ(ಮಾಜಿ ಪ್ರಧಾನಿ ರಾಜೀವ್ ಗಾಂದಿ ಹಾಗೂ ಮನಮೋಹನ್ ಸಿಂಗ್ ಅವರ ಸಲಹೆಗಾರರು)ಅವರೊಂದಿಗೆ ಮಾತನಾಡುವುದಾಗಿ ಹೇಳಿದರು. ಈ ಗ್ರೂಪ್ ಇನ್ನಷ್ಟು ದೇಶಗಳಿಗೆ ಪ್ರಯಾಣಿಸಬೇಕೆಂದು ಸಲಹೆ ನೀಡಿದರು.
ಅಣಬೆ ಬಿರಿಯಾನಿ ಸವಿದ ಬಳಿಕ ರಾಹುಲ್ ಗಾಂಧಿ ಅವರು ರೊಂಬಾ ನಲ್ಲಾ ಇರುಕ್ಕು(ಇದು ತುಂಬಾ ಚೆನ್ನಾಗಿದೆ)ಎಂದು ಬರೆದು ತಮ್ಮ ಸಹಿ ಹಾಕಿದರು.







