ಜಾತಿ, ಸಂಪ್ರದಾಯಗಳ ವಿಚಾರದಲ್ಲಿ ಜನರ ದ್ವಂದ್ವ ನಿಲುವು: ಹಿರಿಯ ಕವಿ ಡಾ.ಸಿದ್ಧಲಿಂಗಯ್ಯ
ಬೆಂಗಳೂರು, ಜ.31: ಜಾತಿ, ಸಂಪ್ರದಾಯಗಳು ನಮ್ಮಲ್ಲಿ ಹಾಸು ಹೊಕ್ಕಿದ್ದರೂ ಜನರು ಈಗಲೂ ಬೇಕು, ಬೇಡಗಳ ದ್ವಂದ್ವ ನಿಲುವು ಅನುಭವಿಸುತ್ತಿದ್ದಾರೆ ಎಂದು ಹಿರಿಯ ಕವಿ ಡಾ. ಸಿದ್ಧಲಿಂಗಯ್ಯ ಹೇಳಿದ್ದಾರೆ.
ರವಿವಾರ ನಗರದ ನಯನ ಸಭಾಂಗಣದಲ್ಲಿ ಪಲ್ಲವ ಪ್ರಕಾಶನ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಂಜಮ್ಮ ಜೋಗತಿಯವರ ‘ನಡುವೆ ಸುಳಿವ ಹೆಣ್ಣು' ಆತ್ಮಕಥನ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಜನರು ಒಲ್ಲದ ಮನಸ್ಸಿನಿಂದ ಸಂಪ್ರದಾಯ, ಜಾತಿಗಳನ್ನು ಅನುಸರಿಸುವುದನ್ನು ಕಂಡಿದ್ದೇನೆ. ಕೃತಿಯಲ್ಲಿ ಮಂಜಮ್ಮ ಅವರು ಜೋಗತಿ ಸಂಪ್ರದಾಯಕ್ಕೆ ಹೋಗುವಾಗ ಅವರ ಪೋಷಕರಲ್ಲಿನ ದ್ವಂದ್ವವನ್ನು ಕೃತಿ ಅನಾವರಣಗೊಳಿಸುತ್ತದೆ. ಜಾತಿ ಜಾತಿಗಳ ನಡುವಿನ ಕೋಮು ಸಾಮರಸ್ಯವನ್ನು ಕೃತಿ ಆರಂಭದಲ್ಲೇ ಕಾಣಬಹುದು ಎಂದು ಕೃತಿಯನ್ನು ವಿವರಿಸಿದರು.
ಜೋಗತಿ ಸಂಪ್ರದಾಯ ಕೇವಲ ತಳಸಮುದಾಯಕ್ಕೆ ಸೀಮಿತವಾಗಿದೆ ಎಂಬ ತಪ್ಪು ಪರಿಕಲ್ಪನೆ ಇದೆ. ಆದರೆ ಮೇಲ್ವರ್ಗದವರು, ಮುಸಲ್ಮಾನರೂ ಜೋಗತಿಯರಾಗಿದ್ದು ಘೋರ್ಪಡೆ ಮಹಾರಾಜರ ವಂಶಸ್ಥರು ಜೋಗತಿಯಾಗಿದ್ದರು ಎಂಬುದು ಉಲ್ಲೇಖನೀಯ ಎಂದು ವಿವರಿಸಿದರು.
ಜಾನಪದ ಕಲಾವಿದರಿಲ್ಲದೆ ವಿದ್ವಾಂಸರಿಲ್ಲ, ಬಿ.ಎಂ.ಶ್ರೀಕಂಠಯ್ಯ ಅವರ ‘ನುಡಿ ಜನವಾಣಿ ಬೇರು, ಕವಿವಾಣಿ ಹೂವು' ಮಾತಿನಂತೆ ಎಲ್ಲದಕ್ಕೂ ಜಾನಪದ ಮೂಲವಾಗಿದೆ. ಕೃತಿಯು ಓದುವ ಮನಸ್ಸಿನಲ್ಲಿ ಮಾನವೀಯ ಸಂಸ್ಕೃತಿಯ ಬೀಜಗಳನ್ನು ಬಿತ್ತುತ್ತದೆ. ಅವಮಾನ ಮೀತಿ ವ್ಯಕ್ತಿಯೊಬ್ಬ ಜೀವನದಲ್ಲಿ ಹೇಗೆ ಗಟ್ಟಿಯಾಗಿ ನಿಲ್ಲಬಹುದು ಎಂಬುದನ್ನು ಕೃತಿ ತೆರೆದಿಡುತ್ತದೆ ಎಂದು ತಿಳಿಸಿದರು.
ಮಂಜಮ್ಮ ಜೋಗತಿಯವರಿಗೆ ಪದ್ಮಶ್ರೀ ದೊರೆತಿರುವುದು ಸಮಸ್ತ ಜೋಗತಿ ಸಮುದಾಯ, ಶೋಷಿತ ಸಮುದಾಯಕ್ಕೆ ದೊರೆತ ಮಹಾಗೌರವ. ಮಂಜಮ್ಮ ಅವರಿಗೆ ರಾಜ್ಯೋತ್ಸವ ಸೇರಿದಂತೆ ಇತರ ಪ್ರಶಸ್ತಿಗಳನ್ನು ನೀಡಿ ನಾಡು ತನ್ನನ್ನು ಗೌರವಿಸಿಕೊಂಡಂತಾಗಿದೆ ಎಂದು ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ರಂಗಪ್ಪ ಮಾತನಾಡಿ, ಮಂಜಮ್ಮ ಜೋಗತಿ ಧ್ವನಿ ಇಲ್ಲದವರ ಧ್ವನಿಯಾಗಿದ್ದಾರೆ. ಜೀವನದಲ್ಲಿ ನೊಂದು ಬೆಂದು ಎತ್ತರಕ್ಕೆ ಬೆಳೆದಿದ್ದಾರೆ. ಅವರ ಆತ್ಮಶಕ್ತಿ, ಛಲ ಯುವಪೀಳಿಗೆಗೆ, ತುಳಿತಕ್ಕೆ ಒಳಗಾದವರಿಗೆ ದಾರಿದೀಪವಾಗಲಿದೆ ಎಂದು ಹೇಳಿದರು.
ಕರ್ನಾಟಕ ಜಾನಪದ ಅಕಾಡಮಿ ಅಧ್ಯಕ್ಷೆ ಮಂಜಮ್ಮ ಜೋಗತಿ ಮಾತನಾಡಿ, ನನ್ನ ಸಮುದಾಯದ ನೋವು, ಬದುಕಿನ ದಾರಿ ಕೃತಿಯಲ್ಲಿ ಹೇಳಿದ್ದೇನೆ. ನನ್ನ ಸೇವೆ ಗುರುತಿಸಿ ನೀಡಿರುವ ಪದ್ಮಶ್ರೀ ಪ್ರಶಸ್ತಿ ನನ್ನ ತಂದೆ-ತಾಯಿ, ಕನ್ನಡ ಜನತೆಗೆ ಅರ್ಪಿಸುತ್ತೇನೆ. ಪ್ರಶಸ್ತಿಯಿಂದ ನನಗೆ ಅಹಂ ಇಲ್ಲ. ಕೊನೆಯವರೆಗೂ ನೊಂದವರ ಜೊತೆ ಇರುತ್ತೇನೆ ಎಂದರು.
ಈ ಕಾರ್ಯಕ್ರಮದಲ್ಲಿ ಪಲ್ಲವ ಪ್ರಕಾಶನದ ಪ್ರಕಾಶಕ ವೆಂಕಟೇಶ್, ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ.ಅರುಣ್ ಜೋಳದ ಕೂಡ್ಲಿಗಿ, ನಾಟಕ ಅಕಾಡಮಿ ಅಧ್ಯಕ್ಷ ಭೀಮಸೇನ, ಹಿರಿಯ ರಂಗಕರ್ಮಿ ಕಪ್ಪಣ್ಣ, ವಿವಿಧ ಅಕಾಡಮಿ ಪದಾಧಿಕಾರಿಗಳಿದ್ದರು.
ಟೀ ಕುಡಿದವರು ಕ್ರಾಂತಿಕಾರಿಗಳಾಗುತ್ತಾರೆ
‘ಮೊದಲೇ ನನಗೆ ಮಂಜಮ್ಮ ಜೋಗತಿ ಅವರು ಟೀ ಚೆನ್ನಾಗಿ ಮಾಡುತ್ತಾರೆಂದು ಗೊತ್ತಿದ್ದರೇ ನನ್ನ ಟೀ ಪುರಾಣ ಲೇಖನದಲ್ಲಿ ಅವರ ಹೆಸರೂ ಸೇರಿಸುತ್ತಿದ್ದೆ. ಟೀ ಇಲ್ಲದಿದ್ದರೆ ನನಗೆ ಕ್ರಿಯಾಶೀಲತೆ ಬರುವುದಿಲ್ಲ. ಟೀ ಕುಡಿದವನು ಕ್ರಾಂತಿಕಾರಿಯಾಗುತ್ತಾನೆ. ಬ್ರಾಹ್ಮಣರು ಕಾಫಿಗೆ ಹೆಸರಾದರೆ ಕಾಕಾಗಳು ಟೀಗೆ ಹೆಸರುವಾಸಿ. ದಿಲ್ ಖುಷ್ ಟೀ, ಜುಂಜುಂ ಟೀ ರೀತಿ ತರಹೇವಾರಿ ಟೀಗಳಿವೆ. ನನ್ನ ಟೀ ಅಭ್ಯಾಸ ಕುರಿತ ಲೇಖನವನ್ನು ಹೊಸದಿಲ್ಲಿಯ ವಿವಿಯ ಕ್ಯಾಂಟೀನ್ನಲ್ಲಿ ಇಡಲಾಗಿದೆ'
-ಡಾ.ಸಿದ್ದಲಿಂಗಯ್ಯ, ಹಿರಿಯ ಕವಿ







