ಡಿಸೇಲ್ ಬೆಲೆ ಏರಿಕೆಯಿಂದ ಮೀನುಗಾರಿಕೆಗೆ ನಷ್ಟ: ಮುನೀರ್ ಕಾಟಿಪಳ್ಳ
ಉಡುಪಿ ಜಿಲ್ಲಾಮಟ್ಟದ ಮೀನುಗಾರರ ಸಮಾವೇಶ

ಉಡುಪಿ, ಫೆ.1: ಇಂದು ಮತ್ಸಕ್ಷಾಮ ಮತ್ತು ಡಿಸೇಲ್ ಬೆಲೆ ಏರಿಕೆಯಿಂದ ಶೇ.80ರಷ್ಟು ಬೋಟುಗಳು ಮೀನುಗಾರಿಕೆಗೆ ಹೋಗುತ್ತಿಲ್ಲ. ಡಿಸೇಲ್ ದರ ಏರಿಕೆಯಿಂದ ನಷ್ಟ ಅನುಭವಿಸುತ್ತಿರುವ ಮೀನುಗಾರರು, ಸರಕಾರದ ತೈಲನೀತಿ ಯನ್ನು ಪ್ರಶ್ನಿಸಬೇಕಾಗಿದೆ. ವರ್ಗಪ್ರಜ್ಞೆ ಜಾಗೃತ, ಹಕ್ಕು ಗಳಿಗಾಗಿ ಹೋರಾಟ, ಸರಕಾರದ ನೀತಿಗಳ ಬಗ್ಗೆ ಪ್ರಶ್ನೆ ಮಾಡದಿದ್ದರೆ ಸಮಸ್ಯೆ ಬಗೆಹರಿಯುವುದಿಲ್ಲ ಎಂದು ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಹೇಳಿದ್ದಾರೆ.
ಉಡುಪಿ ಜಿಲ್ಲಾ ಮೀನುಗಾರರ ಮತ್ತು ಮೀನು ಕಾರ್ಮಿಕರ ಸಂಘದ ವತಿಯಿಂದ ಸೋಮವಾರ ಬನ್ನಂಜೆ ನಾರಾಯಣಗುರು ಮಂದಿರದ ಶಿವಗಿರಿ ಹಾಲ್ನಲ್ಲಿ ಆಯೋಜಿಸಲಾದ ಉಡುಪಿ ಜಿಲ್ಲಾ ಮಟ್ಟದ ಸಮಾವೇಶವನ್ನುದ್ದೇಶಿಸಿ ಅವರು ಮಾತನಾಡುತಿದ್ದರು.
ಕೇಂದ್ರ ಸರಕಾರ ಇಂದು ಸಿಆರ್ಝೆಡ್ಗೆ ತಿದ್ದುಪಡಿ ತರಲು ಹೊರಟಿರು ವುದು ಪ್ರವಾಸೋದ್ಯಮ ಹೂಡಿಕೆದಾರರ ಲಾಭಕ್ಕಾಗಿಯೇ ಹೊರತು ಮೀನುಗಾರರ ಹಿತದೃಷ್ಠಿಯಿಂದಲ್ಲ. ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ವಿಭಜನೆಯ ಹಿಂದಿನ ಹುನ್ನಾರವನ್ನು ಅರಿತು ಎಲ್ಲ ಜಾತಿ ಧರ್ಮದ ದುಡಿಯುವ ವರ್ಗದವರು ಒಟ್ಟಾಗಿ ಹೋರಾಟ ಮಾಡಿದರೆ ಹಕ್ಕುಗಳನ್ನು ಪಡೆ ಯಲು ಸಾಧ್ಯವಾಗುತ್ತದೆ ಎಂದರು.
ಸಮಾವೇಶವನ್ನು ಉದ್ಘಾಟಿಸಿದ ಸಂಘದ ಜಿಲ್ಲಾಧ್ಯಕ್ಷ ಕೆ.ಶಂಕರ್ ಮಾತನಾಡಿ, ಕೇಂದ್ರ ಸರಕಾರ ಇತರ ಇಲಾಖೆಗಿಂತ ಮೀನುಗಾರಿಕೆ ಇಲಾಖೆಗೆ ಹಂಚಿಕೆ ಮಾಡುವ ಅನುದಾನ ತೀರಾ ಕಡಿಮೆ. ವಸತಿ, ನಿವೇಶನ, ಸಿಆರ್ಝೆಡ್ ಸಮಸ್ಯೆಯಿಂದ ಮೀನುಗಾರರು ಇಂದು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಮೀನು ಗಾರರ ಎಲ್ಲ ರೀತಿಯ ಭದ್ರತೆಗಾಗಿ ಸರಕಾರ ಕಲ್ಯಾಣ ಮಂಡಳಿಯನ್ನು ರಚಿಸಬೇಕು ಎಂದು ಒತ್ತಾಯಿಸಿದರು.
60 ವರ್ಷ ಪ್ರಾಯ ಮೀನುಗಾರರಿಗೆ ಪಿಂಚಣಿ ನೀಡಬೇಕು. ಜೀವನ ಭದ್ರತೆ ಹಾಗೂ ಉದ್ಯೋಗ ಭದ್ರತೆ ನೀಡಬೇಕು. ಕೆಲಸ ಇಲ್ಲದ ಮಳೆಗಾಲದ ಮೂರು ತಿಂಗಳ ಕಾಲ ಉಚಿತ ರೇಷನ್ ನೀಡಬೇಕು ಎಂದ ಅವರು, ದೇಶದಲ್ಲಿ ನಡೆ ಯುತ್ತಿರುವ ದೊಡ್ಡ ಪ್ರಮಾಣದ ರೈತರ ಹೋರಾಟದ ಬಗ್ಗೆ ಸರಕಾರ ಗಮನ ಹರಿಸುತ್ತಿಲ್ಲ. ಐಕ್ಯ ಹೋರಾಟದಿಂದ ಮಾತ್ರ ಸರಕಾರವನ್ನು ಉರುಳಿಸಲು ಸಾಧ್ಯ. ಬಂಡವಾಳಶಾಹಿಗಳಿಂದ ನಡೆಯುವ ಸರಕಾರ ಶಾಶ್ವತ ಅಲ್ಲ ಎಂದರು.
ಅಧ್ಯಕ್ಷತೆಯನ್ನು ಸಿಐಟಿಯು ರಾಜ್ಯ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ವಹಿಸಿ ದ್ದರು. ಸಂಘದ ಜಿಲ್ಲಾ ಕಾರ್ಯದರ್ಶಿ ಕವಿರಾಜ್, ಉಡುಪಿ ತಾಲೂಕು ಕಾರ್ಯದರ್ಶಿ ಯೋಗೀಶ್ ಪೂಜಾರಿ, ಬೈಂದೂರು ತಾಲೂಕು ಅಧ್ಯಕ್ಷ ರಾಮ ಉಪ್ಪುಂದ ಉಪಸ್ಥಿತರಿದ್ದರು.
ಬಂಡವಾಳಶಾಹಿಗಳು ಬರೆದುಕೊಟ್ಟ ಚೀಟಿ !
ಇಂದಿನ ಕೇಂದ್ರದ ಬಜೆಟ್ ಬಗ್ಗೆ ದುಡಿಯುವ ವರ್ಗದವರಿಗೆ ಯಾವುದೇ ಆಸಕ್ತಿ ಹಾಗೂ ಕುತೂಹಲಗಳಿಲ್ಲ. ಯಾಕೆಂದರೆ ವಿತ್ತ ಸಚಿವೆ ಅದಾನಿ ಅಂಬಾನಿ ಯಂತಹ ಬಂಡವಾಳಶಾಹಿಗಳು ಬರೆದುಕೊಟ್ಟ ಚೀಟಿಯನ್ನೇ ಓದುತ್ತಿದ್ದಾರೆ. ಆದುದರಿಂದ ಬಜೆಟ್ನಿಂದ ಬಂಡವಾಳಶಾಹಿಗಳಿಗೆ ಮಾತ್ರ ಲಾಭವಾಗಲಿದೆ ಎಂದು ಮುನೀರ್ ಕಾಟಿಪಳ್ಳ ಟೀಕಿಸಿದರು.
ಲಾಕ್ಡೌನ್ ಅವಧಿಯಲ್ಲಿ ದೇಶದ ದುಡಿಯುವ ವರ್ಗದವರು ಒಪ್ಪೊತ್ತಿನ ಊಟಕ್ಕೂ ಗತಿ ಇಲ್ಲದೆ ಪರದಾಡಿದರೆ, ಅದಾನಿ ಅಂಬಾನಿಯಂತಹ 100 ಶ್ರೀಮಂತರ ಆದಾಯ ದುಪ್ಪಟ್ಟು ಏರಿಕೆ ಕಂಡಿತ್ತು. ಇಂದು ಅಂಬಾನಿಯ ಒಂದು ಗಂಟೆಯ ಆದಾಯ 90 ಕೋಟಿ ರೂ. ಆಗಿದೆ. ಇಷ್ಟು ಮೊತ್ತದ ಹಣ ಪಡೆಯಲು ದುಡಿಯುವ ವರ್ಗದವರು 10 ಸಾವಿರ ವರ್ಷಗಳ ಕಾಲ ದುಡಿಯ ಬೇಕಾಗಿದೆ. ಈ ರೀತಿ ಬಹಳ ದೊಡ್ಡ ಪ್ರಮಾಣದ ತಾರತಮ್ಯ ನಮ್ಮ ದೇಶಲ್ಲಿ ಇದೆ ಎಂದು ಅವರು ದೂರಿದರು.







