ಅಫಘಾತಗಳಲ್ಲಿ ಹೆಲ್ಮೆಟ್ ಧರಿಸದೆ ಸಾಯುವವರ ಸಂಖ್ಯೆ ಅಧಿಕ: ಜಾಗೃತಿ ಅಭಿಯಾನದಲ್ಲಿ ಹೆಚ್ಚುವರಿ ಎಸ್ಪಿ ಕುಮಾರಚಂದ್ರ

ಉಡುಪಿ, ಫೆ.3: ಅಫಘಾತಗಳ ಪೈಕಿ ದ್ವಿಚಕ್ರ ವಾಹನಗಳ ಅಫಘಾತವೇ ಹೆಚ್ಚಾಗಿದ್ದು ಅದರಲ್ಲಿ ಹೆಲ್ಮೆಟ್ ಧರಿಸದೆ ಸಾವನಪ್ಪುವವರ ಸಂಖ್ಯೆ ಅಧಿಕವಾಗಿದೆ. ಜೀವ ಮತ್ತು ಜೀವನ ಅಮೂಲ್ಯವಾಗಿದ್ದು, ಪ್ರತಿಯೊಬ್ಬ ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು ಎಂದು ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕುಮಾರಚಂದ್ರ ಹೇಳಿದ್ದಾರೆ.
ಉಡುಪಿ ಪೊಲೀಸ್ ಇಲಾಖೆಯ ವತಿಯಿಂದ ಇತರ ಸಂಘಟನೆಗಳ ಸಹಕಾರದೊಂದಿಗೆ ಬುಧವಾರ ಉಡುಪಿ ನಗರದಲ್ಲಿ ಆಯೋಜಿಸಲಾದ ಹೆಲ್ಮೆಟ್ ಧರಿಸುವಿಕೆ ಕಡ್ಡಾಯದ ಬಗ್ಗೆ ಜಾಗೃತಿ ಮೂಡಿಸುವ ಪೊಲೀಸರ ಬೈಕ್ ಜಾಥಾ ಅಭಿಯಾನ ಮತ್ತು ಒಂದೇ ದೇಶ ಒಂದೇ ಕರೆ ಸಂಖ್ಯೆ 112 ವಾಹನಗಳ ಪ್ರಚಾರ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡುತಿದ್ದರು.
ಅಫಘಾತಗಳು ಸಂಭವಿಸಿದಾಗ ಕೈ ಕಾಲುಗಳಿಗೆ ಗಂಭೀರ ಗಾಯವಾದರೂ ಪ್ರಾಣ ಉಳಿಯಬಹುದು. ಆದರೆ ತಲೆಗೆ ಏಟು ಬಿದ್ದರೆ ಉಳಿಯು ವುದು ಕಷ್ಟವಾಗಿದೆ. ಆದುದರಿಂದ ದ್ವಿಚಕ್ರ ವಾಹನ ಸವಾರರು ಜಾಗೃತರಾಗಿ ಹೆಲ್ಮೆಟ್ ಧರಿಸಿ, ಸಂಚಾರ ನಿುಮ ಪಾಲನೆ ಮಾಡಬೇಕು ಎಂದರು.
ಅಪಘಾತ ಸೇರಿದಂತೆ ವಿವಿಧ ತುರ್ತು ಸಂದರ್ಭದಲ್ಲಿ ಸಾರ್ವಜನಿಕರು 112 ಸಂಖ್ಯೆಗೆ ಕರೆ ಮಾಡಬೇಕು. ಕೆಲವೇ ಕ್ಷಣದಲ್ಲಿ ತಾವಿದ್ದ ಸ್ಥಳಕ್ಕೆ 112 ವಾಹನ ಜೊತೆ ಸಿಬ್ಬಂದಿ ತಮ್ಮನ್ನು ರಕ್ಷಣೆಗೆ ಬರಲಿದ್ದಾರೆ. ಆದುದರಿಂದ ಸಾರ್ವಜನಿಕರು ತುರ್ತು ಪರಿಸ್ಥಿತಿಯಲ್ಲಿ ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಅವರು ತಿಳಿಸಿದರು.
ಉಡುಪಿಯ ಜೋಡುಕಟ್ಟೆಯಿಂದ ಆರಂಭವಾದ ಜಾಥಾವು ಉಡಪಿ ಬಸ್ ನಿಲ್ದಾಣ, ಕಲ್ಸಂಕ, ಇಂದ್ರಾಳಿ ಜಂಕ್ಷನ್ ಮೂಲಕ ಸಂತೆಕಟ್ಟೆಯಲ್ಲಿ ಸಮಾಪನ ಗೊಂಡಿತು. ಜಾಥಾದಲ್ಲಿ ಪೋಲಿಸ್, ರೋಟರಿ ಉಡುಪಿ ಸದಸ್ಯರು ಮತ್ತು ಬೈಕರ್ಸ್ ಕ್ಲಬ್ಗಳ ಸದಸ್ಯರು ತಮ್ಮ ದ್ವಿಚಕ್ರ ವಾಹನಗಳಲ್ಲಿ ರಸ್ತೆ ಸುರಕ್ಷತೆಗೆ ಸಂಬಂಧಿಸಿದ ಭಿತ್ತಿ ಪತ್ರಗಳನ್ನು ಪ್ರದರ್ಶಿಸಿ ಜನರಲ್ಲಿ ಜಾಗೃತಿ ಮೂಡಿಸಿದರು.
ಈ ಸಂಧರ್ಭದಲ್ಲಿ ಡಿವೈಎಸ್ಪಿಸದಾನಂದ ನಾಯಕ್, ಉಡುಪಿ ಸಂಚಾರ ಪೊಲೀಸ್ ಠಾಣೆಯ ಉಪನಿರೀಕ್ಷಕ ಅಬ್ದುಲ್ ಖಾದರ್, ಉಡುಪಿ ನಗರ ಠಾಣಾಧಿಕಾರಿ ಶಕ್ತಿವೇಲು, ರೋಟರಿ ಉಡುಪಿ ಅಧ್ಯಕ್ಷ್ಯೆ ರಾಧಿಕಾ ಲಕ್ಷ್ಮೀನಾರಾ ಯಣ, ಕಾರ್ಯದರ್ಶಿ ದೀಪಾ ಭಂಡಾರಿ ಮೊದಲಾದವರು ಉಪಸ್ಥಿತರಿದ್ದರು.







