2022ರ ವೇಳೆಗೆ ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ಯೋಜನೆ ಪೂರ್ಣ: ಗೋವಿಂದ ಕಾರಜೋಳ
ಬೆಂಗಳೂರು, ಫೆ.3: ಕರ್ನಾಟಕದ ಮಹತ್ವಾಕಾಂಕ್ಷೆಯ ಹತ್ತು ಪಥದ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ 2022ರ ಫೆಬ್ರವರಿಯಲ್ಲಿ ಪೂರ್ಣಗೊಳ್ಳಲಿದೆ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ತಿಳಿಸಿದ್ದಾರೆ.
ಬುಧವಾರ ವಿಧಾನ ಪರಿಷತ್ ಪ್ರಶ್ನೋತ್ತರ ಅವಧಿಯಲ್ಲಿ ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು, 6 ಪಥದ ಹೆದ್ದಾರಿಯ ಜೊತೆಗೆ ಇಕ್ಕೆಲಗಳಲ್ಲಿ ಎರಡು ಪಥದ ಸರ್ವೀಸ್ ರಸ್ತೆಯನ್ನು ಅಭಿವೃದ್ದಿಪಡಿಸಲಾಗುತ್ತಿದೆ. ಮೊದಲ ಪ್ಯಾಕೇಜ್ನಲ್ಲಿ ಬೆಂಗಳೂರಿನಿಂದ ನಿಡಘಟ್ಟದವರೆಗೆ, 2ನೆ ಪ್ಯಾಕೇಜ್ನಲ್ಲಿ ನಿಡಘಟ್ಟದಿಂದ ಮೈಸೂರುವರೆಗೆ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ. ಮೊದಲ ಪ್ಯಾಕೇಜ್ಗೆ 2190 ಕೋಟಿ ರೂ. ಆಗಿದ್ದು, ಶೇ.67.5ರಷ್ಟು ಕಾಮಗಾರಿ ಪೂರ್ಣವಾಗಿದೆ. 2ನೆ ಪ್ಯಾಕೇಜ್ಗೆ 2283 ಕೋಟಿ ರೂ. ಆಗಿದ್ದು, ಶೇ.50.5ರಷ್ಟು ಕಾಮಗಾರಿ ಪೂರ್ಣವಾಗಿದೆ ಎಂದು ತಿಳಿಸಿದರು.
ಕೊರೋನ ಹಿನ್ನೆಲೆಯಲ್ಲಿ ಎರಡೂ ಪ್ಯಾಕೇಜ್ಗೆ ಕಾಮಗಾರಿ ಕಾಲಾವಧಿಯನ್ನು ಮೂರು ತಿಂಗಳು ವಿಸ್ತರಣೆ ಮಾಡಲಾಗಿದೆ. ಎರಡು ಪ್ಯಾಕೇಜ್ಗಳ ಯೋಜನಾ ವರದಿ 30 ತಿಂಗಳಾಗಿರುತ್ತದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವೇ ಇದರ ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ ಎಂದು ತಿಳಿಸಿದರು.