ಹುಣಸೋಡು ಕ್ರಷರ್ನಲ್ಲಿ ಸ್ಫೋಟ ಪ್ರಕರಣ: ಮತ್ತೆ ನಾಲ್ವರ ಬಂಧನ

ಶಿವಮೊಗ್ಗ, ಫೆ.5: ತಾಲೂಕಿನ ಹುಣಸೋಡು ಕ್ರಷರ್ನಲ್ಲಿ ಸಂಭವಿಸಿದ ಸ್ಫೋಟ ಪ್ರಕರಣ ಸಂಬಂಧಪಟ್ಟಂತೆ ಇನ್ನೂ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಜಮೀನಿನ ಮಾಲಕರಾದ ಶಂಕರಗೌಡ ಟಿ.ಕುಲಕರ್ಣಿ(76), ಅವಿನಾಶ್ ಕುಲಕರ್ಣಿ (43) ಹಾಗೂ ಆಂಧ್ರ ಪ್ರದೇಶದ ಅನಂತಪುರಂ ನಿವಾಸಿಗಳಾದ ಪಿ.ಶ್ರೀರಾಮಲು(68) ಪಿ.ಮಂಜುನಾಥ್ ಸಾಯಿ (36) ಎಂಬವರನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಕೆ.ಎಂ ಶಾಂತರಾಜು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಪ್ರಕರಣ ಸಂಬಂಧ ಆರು ತನಿಖಾ ತಂಡಗಳನ್ನು ರಚಿಸಿದ್ದು, ತುಂಗಾನಗರ ಠಾಣೆ ಪಿಐ ದೀಪಕ್ ಮತ್ತು ಸೊರಬ ವೃತ್ತ ಸಿಪಿಐ ಮರುಳಸಿದ್ದಪ್ಪ ಅವರು ಆಂಧ್ರ ಪ್ರದೇಶದ ಆನಂತಪುರಂಗೆ ಭೇಟಿ ನೀಡಿ, ಮಾಹಿತಿ ಸಂಗ್ರಹಿಸಿದ್ದಾರೆ ಎಂದು ತಿಳಿಸಿದರು.
ರಾಯದುರ್ಗದಲ್ಲಿ ಶ್ರೀರಾಮಲು ಅವರಿಗೆ ಸಂಬಂಧಪಟ್ಟ ಸ್ಫೋಟಕಗಳ ದಾಸ್ತಾನು ಗೋದಾಮು ಇದೆ. ಅಲ್ಲಿ ಪರವಾನಗಿ ಪಡೆಯದೇ ಒಂದು ವಾಹನದಲ್ಲಿ ಸ್ಫೋಟಕಗಳನ್ನು ಸಂಗ್ರಹಿಸಿಡಲಾಗಿತ್ತು. ಈ ಬಗ್ಗೆ ಅನಂತಪುರಂ ಜಿಲ್ಲೆಯ ಗುಮ್ಮಟಘಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿದೆ. ಅಕ್ರಮವಾಗಿ ದಾಸ್ತಾನು ಮಾಡಲಾಗಿದ್ದ ಸ್ಫೋಟಕಗಳನ್ನು ವಶಕ್ಕೆ ಪಡೆಯಲಾಗಿದೆ. ಜತೆಗೆ, ಆಂಧ್ರಪ್ರದೇಶದ ಪೊಲೀಸರು ಡೆಪ್ಯೂಟಿ ಕಂಟ್ರೋಲರ್ ಆಫ್ ಎಕ್ಸ್ಪ್ಲೋಸಿವ್ ಈ ಬಗ್ಗೆ ವಿಶಾಖಪಟ್ಟಣಂ ಅವರಿಗೆ ಪಿ.ಶ್ರೀರಾಮುಲು ಅವರು ಲೈಸೆನ್ಸ್ ನಿಯಮವನ್ನು ಉಲ್ಲಂಘಿಸಿರುವ ಬಗ್ಗೆ ಮಾಹಿತಿ ನೀಡಿದ್ದು, ಇವರ ಪರವಾನಗಿಯನ್ನು ರದ್ದುಗೊಳಿಸಲಾಗಿದೆ ಎಂದು ಮಾಹಿತಿ ನೀಡಿದರು.
ಫೆಬ್ರವರಿ 4ರಂದು ಭದ್ರಾವತಿ ಟೌನ್ ಸಿಪಿಐ ರಾಘವೇಂದ್ರ ಕಾಂಡಿಕೆ, ವಿನೋಬನಗರ ಪಿಎಸ್ಐ ಉಮೇಶ್, ಸಿಬ್ಬಂದಿ ನಾಗರಾಜ್, ಸಂದೀಪ್ ಅವರನ್ನು ಒಳಗೊಂಡ ತಂಡವು ಹಾವೇರಿ, ದಾವಣಗೆರೆ, ಜಗಳೂರು, ಚನ್ನಗಿರಿಗೆ ತೆರಳಿ ಮಾಹಿತಿ ಸಂಗ್ರಹಿಸಿದ್ದಾರೆ. ಈ ಪ್ರಕರಣದಲ್ಲಿ ಸ್ಫೋಟವಾದ ಜಮೀನಿನ ಮಾಲಕರಾದ ಶಂಕರ್ಗೌಡ ಮತ್ತು ಅವಿನಾಶ್ ಅವರನ್ನು ದಾವಣಗೆರೆಯಲ್ಲಿ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ.
ಮಹಿಳಾ ಪೊಲೀಸ್ ಠಾಣೆ ಪಿಐ ಅಭಯ್ ಪ್ರಕಾಶ್, ಗ್ರಾಮಾಂತರ ಸಿಪಿಐ ಸಂಜೀವ್ ಕುಮಾರ್, ಎಎಸ್ಐ ವಿಜಯ್, ಸಿಬ್ಬಂದಿ ಕಿರಣ್ ಮೋರೆ ಅವರನ್ನೊಳಗೊಂಡ ತಂಡವು ಅನಂತಪುರಂ, ರಾಯದುರ್ಗ ಮುಂತಾದ ಕಡೆಗಳಿಗೆ ಭೇಟಿ ನೀಡಿ ನಂತರ ಹೈದರಾಬಾದ್ಗೆ ತೆರಳಿದ್ದಾರೆ. ಖಚಿತ ಮಾಹಿತಿ ಮೇರೆಗೆ ಮುಂಬೈಗೆ ತೆರಳಿ ಅಲ್ಲಿ ಶ್ರೀರಾಮುಲು ಮತ್ತು ಮಂಜುನಾಥ್ ಎಂಬುವವರನ್ನು ಬಂಧಿಸಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ಎಸ್.ಪಿ. ಎಚ್.ಟಿ.ಶೇಖರ್ ಇದ್ದರು.
ಹುಣಸೋಡಿನಲ್ಲಿ ಸಂಭವಿಸಿದ ಸ್ಫೋಟಕ್ಕೆ ಸಂಬಂಧಿಸಿದಂತೆ ಸ್ಫೋಟಕಗಳು ಪಿ. ಶ್ರೀರಾಮುಲು ಅವರ ಮಾಲಕತ್ವದಲ್ಲಿರುವ ಆಂಧ್ರಪ್ರದೇಶದ ಅನಂತಪುರಂನ ಗಣೇಶ್ ಟ್ರೇಡರ್ಸ್ ನಿಂದ ಪೂರೈಕೆಯಾಗಿರುವುದು ತನಿಖೆ ವೇಳೆ ತಿಳಿದುಬಂದಿದೆ. ಪ್ರಕರಣದಲ್ಲಿ ಇರುವರೆಗೆ 8 ಜನರನ್ನು ಬಂಧಿಸಲಾಗಿದೆ.
- ಕೆ.ಎಂ.ಶಾಂತರಾಜು, ಎಸ್ಪಿ







