ಅವಿಭಜಿತ ದ.ಕ. ಜಿಲ್ಲಾಮಟ್ಟದ ಪ್ರಥಮ ಕೊರಗರ ಕ್ರೀಡೋತ್ಸವ ಸಮಾಪ್ತಿ
ಉಡುಪಿ, ಫೆ.7: ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಜನ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಹಯೋಗದಲ್ಲಿ ಹಮ್ಮಿಕೊಳ್ಳಲಾದ ಮೂರು ದಿನಗಳ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಮಟ್ಟದ ಪ್ರಥಮ ಅಂತರ ಜಿಲ್ಲಾ ಕೊರಗರ ಕ್ರೀಡೋತ್ಸವ ಮತ್ತು ಸಾಂಸ್ಕೃತಿ ಉತ್ಸವ ಇಂದು ಸಮಾಪ್ತಿಗೊಂಡಿತು.
ಉಡುಪಿ ಅಜ್ಜರಕಾಡಿನಲ್ಲಿರುವ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಸಮಾ ರೋಪ ಸಮಾರಂಭದಲ್ಲಿ ಕ್ರಿಕೆಟ್, ವಾಲಿಬಾಲ್, ಹಗ್ಗಜಗ್ಗಾಟ, ಕಬಡ್ಡಿ, ತ್ರೋ ಬಾಲ್ನಲ್ಲಿ ಜಯಗಳಿಸಿದ ತಂಡಗಳಿಗೆ ಹಾಗೂ ಅಥ್ಲೆಟಿಕ್ಸ್ನಲ್ಲಿ ವಿಜೇತರಾದವ ರಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಮುಖ್ಯ ಅತಿಥಿಗಳಾಗಿ ಉಡುಪಿ ಶಾಸಕ ಕೆ.ರಘುಪತಿ ಭಟ್, ಜಿಪಂ ಅಧ್ಯಕ್ಷ ದಿನಕರ ಬಾಬು ಮಾತನಾಡಿದರು. ಕೊರಗ ಸಂಘಟನೆಗಳ ಮುಖಂಡರಾದ ಸುಶೀಲಾ ನಾಡ, ಲಕ್ಷ್ಮಣ್ ಬೈಂದೂರು, ಗಣೇಶ್ ಕುಂದಾಪುರ, ಕುಡ್ಪು ಕಾರ್ಕಳ, ಸುಂದರ ಬೆಳವಾಯಿ, ರವಿ ಅಲೆವೂರು, ಡಾ.ಬಾಬು ಉಡುಪಿ, ಪುತ್ರನ್ ಹೆಬ್ರಿ ಮೊದಲಾದವರು ಉಪಸ್ಥಿತರಿದ್ದರು.
ಉಡುಪಿ ಯುವಜನ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರೋಶನ್ ಕುಮಾರ್ ಶೆಟ್ಟಿ ಸ್ವಾಗತಿಸಿದರು. ವಿನಿತಾ ಬಾರಕೂರು ಕಾರ್ಯಕ್ರಮ ನಿರೂಪಿಸಿದರು.
ಕ್ರಿಕೆಟ್ನಲ್ಲಿ 46, ವಾಲಿಬಾಲ್ನಲ್ಲಿ 32 ಮತ್ತು ಸಾಂಸ್ಕೃತಿಕ ಉತ್ಸವದಲ್ಲಿ 10 ಕಲಾ ತಂಡಗಳು ಪಾಲ್ಗೊಂಡಿದ್ದವು. ಶನಿವಾರ ಕ್ರೀಡಾಂಗಣದಲ್ಲಿ ಜಿಲ್ಲೆಯ 52 ಮಂದಿ ಕೊರಗ ಸಮುದಾಯದವರು ಪ್ರಾತ್ಯಕ್ಷಿಕೆಯಾಗಿ ತಯಾರಿಸಿದ ಬುಟ್ಟಿ, ಸಿಬ್ಲು ಸಹಿತ ವಿವಿಧ ಸಲಕರಣೆಗಳನ್ನು ಇಂದು ಪ್ರದರ್ಶಿಸಲಾಯಿತು.







