ಫೆ.14 ರಂದು ಟಿ.ಎಂ.ಶಾಹೀದ್ ತೆಕ್ಕಿಲ್ ಗೆ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮಾನ

ಮಂಗಳೂರು : ಸಾಮಾಜಿಕ, ಸಹಕಾರಿ,ಶೈಕ್ಷಣಿಕ ಮತ್ತು ಕ್ರೀಡಾ ಕ್ಷೇತ್ರದಲ್ಲಿ ಕಳೆದ 3 ದಶಕಗಳಿಂದ ಕ್ರಿಯಾಶೀಲರಾಗಿರುವ ತೆಕ್ಕಿಲ್ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷರಾದ ಟಿ.ಎಂ.ಶಾಹೀದ್ ತೆಕ್ಕಿಲ್ ರವರನ್ನು ಮಂಗಳೂರು ಶಾರದಾ ವಿದ್ಯಾಲಯದಲ್ಲಿ ನಡೆಯುವ 25 ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮಾನಿಸಲಿದ್ದಾರೆ.
ಸಮಾರಂಭದಲ್ಲಿ ಪೇಜಾವರ ಮಠದ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ, ಸಚಿವ ಎಸ್.ಅಂಗಾರ, ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷ ಎಸ್.ಪ್ರದೀಪ್ ಕುಮಾರ ಕಲ್ಕೂರ, ಇತಿಹಾಸ ಸಂಶೋಧಕ ಪುಂಡಿಕ್ಕಾ ಗಣಪತಿ ಭಟ್, ಡಾ. ಪ್ರಭಾಕರ ಜೋಶಿ, ಡಾ. ಮೋಹನ ಅಳ್ವ, ಸೇರಿದಂತೆ ಮುಂತಾದವರ ಗಣ್ಯ ವ್ಯಕ್ತಿಗಳು ಉಪಸ್ಥಿತರಿರುವರು.
ಪ್ರತಿಷ್ಠಿತ ತೆಕ್ಕಿಲ್ ಮನೆತನದ ದಿ. ತೆಕ್ಕಿಲ್ ಮಹಮ್ಮದ್ ಹಾಜಿ ಯವರ ಪುತ್ರ ಟಿ.ಎಂ.ಬಾಬಾ ಹಾಜಿ ತೆಕ್ಕಿಲ್ ಹಾಗೂ ಕ್ಯಾಲಿಕಟ್ ನ ರಾಜಕೀಯ ಮತ್ತು ಜಮಿಂದಾರ ರಾಗಿರುವ ನಾರಾನತ್ ಕುಟುಂಬದ ಆಯಿಷ ಹಜ್ಜುಮ್ಮ ರವರ ಪುತ್ರ ನಾಗಿರುವ ಟಿ.ಎಂ.ಶಾಹೀದ್ ಅವರು ವಿದ್ಯಾರ್ಥಿ ದೆಸೆಯಲ್ಲಿಯೇ ರಾಜಕೀಯಕ್ಕೆ ದುಮುಕಿದವರು. 1988-89 ರಲ್ಲಿ ನೆಹರೂ ಸ್ಮಾರಕ ಕಾಲೇಜಿನ ಎನ್ ಎಸ್ ಯು ಐ ನ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ,1989-90 ರಲ್ಲಿ ಎನ್ ಎಸ್ ಯು ಐ ನ ಸುಳ್ಯ ತಾಲೂಕಿನ ಪ್ರಧಾನ ಕಾರ್ಯದರ್ಶಿಯಾಗಿ,1991-93 ರಲ್ಲಿ ಎನ್ ಎಸ್ ಯು ಐ ನ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ, 1993-94 ರಲ್ಲಿ ಎನ್ ಎಸ್ ಯು ಐ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾಗಿ, 1990-91 ರಲ್ಲಿ ಸುಳ್ಯ ಪಯಸ್ವಿನಿ ಜೆಸೀಸ್ ಯುವ ವಿಭಾಗದ ಉಪಾಧ್ಯಕ್ಷರಾಗಿ,1991-92 ಮತ್ತು 1993-94 ರಲ್ಲಿ ಎರಡು ಬಾರಿ ಕೆವಿಜಿ ಕಾನೂನು ಕಾಲೇಜಿನ ಮಂಗಳೂರು ವಿಶ್ವವದ್ಯಾನಿಲಯದ ವಿದ್ಯಾರ್ಥಿ ಸೆನೆಟ್ ಆಯ್ಕೆ ಸಮಿತಿ ಸದಸ್ಯರಾಗಿ,1994-95 ರಲ್ಲಿ ಕೆವಿಜಿ ಕಾನೂನು ಕಾಲೇಜಿನ ವಿದ್ಯಾರ್ಥಿ ಯೂನಿಯನ್ ನ ಪ್ರಧಾನ ಕಾರ್ಯದರ್ಶಿಯಾಗಿ, 19994-95 ರಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಸರ್ವ ಕಾಲೇಜು ವಿದ್ಯಾರ್ಥಿ ಯೂನಿಯನ್ ನ ಉಪಾಧ್ಯಕ್ಷರಾಗಿ, ಮತ್ತು 1995-2000 ರಾಜೀವ ಗಾಂಧಿ ಯುವ ಶಕ್ತಿ ಮತ್ತು ಗ್ರಾಮೀಣಾಭಿವೃದ್ಧಿ ಸಂಘಟನೆಯ ಜಿಲ್ಲಾಧ್ಯಕ್ಷರಾಗಿ ಸೇವೆ ಸಲ್ಲಿಸಿರುತ್ತಾರೆ.
ಟಿ.ಎಂ.ಶಾಹೀದ್ ಅವರು ಪೇರಡ್ಕ ಮುಹಿಯುದ್ದೀನ್ ಜುಮಾ ಮಸೀದಿ ಹಾಗೂ ದರ್ಗಾ ಶರೀಫ್ ನ ಅಧ್ಯಕ್ಷರಾಗಿ , ಅರಂತೋಡು ಬದ್ರೀಯಾ ಜುಮ್ಮಾ ಮಸೀದಿಯ ಪುನರ್ ರ್ನಿರ್ಮಾಣ ಸಮಿತಿಯ ಅಧ್ಯಕ್ಷರಾಗಿ, ಅರಂತೋಡು ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜಿನ ಬೆಳ್ಳಿ ಹಬ್ಬ ಆಚರಣಾ ಸಮಿತಿಯ ಅಧ್ಯಕ್ಷರಾಗಿ ಮತ್ತು 2000 ನೇ ಇಸವಿಯಲ್ಲಿ ಸುಳ್ಯ ತಾಲೂಕು ಅಲ್ಪ ಸಂಖ್ಯಾತರ ವಿವಿದ್ದೋಶ ಸಹಕಾರಿ ಸಂಘದ ಪ್ರಥಮ ಚುನಾಯಿತ ಅಧ್ಯಕ್ಷರಾಗಿ ಸತತ ಏಳು ವರೆ ವರ್ಷ ಕರ್ತವ್ಯ ನಿರ್ವಹಿಸಿದ್ದರು.
ಕರ್ನಾಟಕ ರಾಜ್ಯ ವಕ್ಫ್ ಕೌನ್ಸಿಲ್ ನ ಸದಸ್ಯರಾಗಿ, ಕಾರ್ಮಿಕ ಕಲ್ಯಾಣ ಮಂಡಳಿಯ ಸದಸ್ಯರಾಗಿ ಕರ್ನಾಟಕ ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ನಿರ್ದೇಶಕರಾಗಿ, ಎರಡು ಬಾರಿ ಕೇಂದ್ರ ನಾರು ಮಂಡಳಿ ಸದಸ್ಯರಾಗಿ ದುಡಿದ್ದಿರುವ ಶಾಹೀದ್ ಅವರು ಪ್ರಸ್ತುತ ಕರ್ನಾಟಕ ರಾಜ್ಯದ ರಾಜೀವ್ ಯೂತ್ ಪೌಂಡೇಷನ್ ನ ಅಧ್ಯಕ್ಷರಾಗಿರುತ್ತಾರೆ. 2002ರಲ್ಲಿ ರಾಜ್ಯ ಯುವ ಪ್ರಶಸ್ತಿಯನ್ನು ಪಡೆದಿರುವ ಶಾಹೀದ್ ಅವರು, ಕಬ್ಬಡ್ಡಿ ಆಟಗಾರನಾಗಿ ರಾಜ್ಯಮಟ್ಟದ ಪ್ರಾಥಮಿಕಾ ಶಾಲಾ ಮಟ್ಟದ ಕಬ್ಬಡ್ಡಿ ಕ್ರೀಡಾ ಕೂಟದಲ್ಲಿ ಭಾಗವಹಿಸಿರುತ್ತಾರೆ.
ಅನೇಕ ಸಂಘ ಸಂಸ್ಥೆಗಳಲ್ಲಿ ದುಡಿಯುತ್ತಿರುವ ಟಿ.ಎಂ.ಶಾಹೀದ್ ರವರಿಗೆ ರಾಜ್ಯ, ದೇಶ ಹಾಗೂ ವಿದೇಶದಲ್ಲಿ ಅನೇಕ ಸನ್ಮಾನಗಳನ್ನು ಸ್ವೀಕರಿಸಿದ್ದಾರೆ. ಉತ್ತಮ ಕೃಷಿಕ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಅವರು ಪ್ರಸ್ತುತ ತೆಕ್ಕಿಲ್ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷರಾಗಿ ತೆಕ್ಕಿಲ್ ಸಮೂಹ ಶಿಕ್ಷಣ ಸಂಸ್ಥೆಯನ್ನು ನಡೆಸುತ್ತಿದ್ದಾರೆ.
2018 ರಲ್ಲಿ ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನಕ್ಕೆ ಸಮಾಜ ಸೇವಾ ಕ್ಷೇತ್ರದಲ್ಲಿ ನೀಡಿದ ಕೊಡುಗೆಗಾಗಿ ದಕ್ಷಿಣ ಕನ್ನಡ ಜಿಲ್ಲಾಡಳಿತವು ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಯ ನೂರಾರು ಮಸೀದಿ ಮದರಸಗಳಿಗೆ, ದೇವಸ್ಥಾನ, ಶಿಕ್ಷಣ ಸಂಸ್ಥೆ , ಶಾದಿ ಮಹಲ್ ಕಟ್ಟಡ , ಯುವಕ ಮಂಡಲ, ಸೇತುವೆಗಳು, ಗ್ರಾಮೀಣ ರಸ್ತೆಗಳಿಗೆ, ಜನಪ್ರತಿನಿಧಿ ಅಲ್ಲದಿದ್ದರು ಕೋಟಿಗಟ್ಟಲೆ ಅನುಧಾನವನ್ನು ವಿವಿಧ ಇಲಾಖೆಗಳಿಂದ ತರಿಸಿಕೊಟ್ಟಿರುತ್ತಾರೆ.







