ಮಂಗಳೂರು ಪೊಲೀಸರನ್ನು ಬಳಸಿ ವ್ಯವಹಾರ ಆರೋಪ ಪ್ರಕರಣ: ಎಡಿಜಿಪಿಗೆ ಮಧ್ಯಂತರ ವರದಿ ಸಲ್ಲಿಕೆ
ಮಂಗಳೂರು, ಫೆ.9: ವಂಚನೆ ಪ್ರಕರಣದ ಆರೋಪಿಗಳ ಕಾರು ಮಾರಾಟ ಆರೋಪ ವಿಚಾರಣೆಯ ಮಧ್ಯಂತರ ವರದಿಯನ್ನು ಮಂಗಳೂರು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಅವರು ರಾಜ್ಯ ಕಾನೂನು ಸುವ್ಯವಸ್ಥಾ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಪ್ರತಾಪ್ ರೆಡ್ಡಿ ಅವರಿಗೆ ಸಲ್ಲಿಸಿದ್ದಾರೆ.
ರಾಜ್ಯ ಎಡಿಜಿಪಿ ಆದೇಶ ಮೇರೆಗೆ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಮಾರ್ಗದರ್ಶನದಂತೆ ನಗರ ಸಂಚಾರ ಮತ್ತು ಅಪರಾಧ ವಿಭಾಗದ ಉಪಪೊಲೀಸ್ ಆಯುಕ್ತ ವಿನಯ್ ಗಾಂವ್ಕರ್ ವಿಚಾರಣಾ ವರದಿ ತಯಾರಿಸಿದ್ದಾರೆ. ಇದರಲ್ಲಿ ನಗರ ಅಪರಾಧ ಪತ್ತೆದಳ ಪೊಲೀಸರು ಆರೋಪಿ ಗಳ ಕಾರುಗಳನ್ನು ವಶಕ್ಕೆ ಪಡೆದು ಮಾರಾಟ ಮಾಡಿ ಹಣದ ವ್ಯವಹಾರ ನಡೆಸಿದ್ದಾರೆ ಎನ್ನಲಾದ ಮಾಧ್ಯಮಗಳ ವರದಿಯಲ್ಲಿ ಸತ್ಯಾಂಶ ಇರುವುದನ್ನು ಬೊಟ್ಟು ಮಾಡಿದ್ದಾರೆಂದು ತಿಳಿದು ಬಂದಿದೆ. ಆರೋಪಕ್ಕೆ ಸಂಬಂಧಿಸಿ ವಿವಿಧ ಆಯಾಮಗಳಲ್ಲಿ ವಿಚಾರಣೆ ನಡೆಸಲಾಗುತ್ತಿದ್ದು, ಮೇಲ್ನೋಟಕ್ಕೆ ಆರೋಪದಲ್ಲಿ ಸತ್ಯಾಂಶವಿರುವುದು ಸ್ಪಷ್ಟವಾಗಿದೆ ಎಂದು ತಿಳಿದು ಬಂದಿದೆ ಎಂದು ಉಲ್ಲೇಖ ಮಾಡಲಾಗಿದೆ.
ಆರೋಪವಿದ್ದರೂ ಪದಕ ಸ್ವೀಕಾರ: ಅವ್ಯವಹಾರ ನಡೆಸಿದ ಆರೋಪದಲ್ಲಿ ಭಾಗಿಯಾಗಿದ್ದಾರೆನ್ನಲಾದ ಸಿಸಿಬಿ ಅಧಿಕಾರಿ ಸೋಮವಾರ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಪದಕ ಸ್ವೀಕರಿಸಿದ್ದಾರೆಂದು ಪೊಲೀಸ್ ಮೂಲಗಳು ತಿಳಿಸಿವೆ.
ಪೊಲೀಸ್ ಇಲಾಖೆಯ ಸಾಧನೆಗಾಗಿ ಅವರಿಗೆ ಮುಖ್ಯಮಂತ್ರಿ ಪದಕ ಘೋಷಣೆಯಾಗಿತ್ತು. ಈ ಮಧ್ಯೆ ಅವ್ಯವಹಾರದ ಆರೋಪ ಸುದ್ದಿಯಾಗುತ್ತಿ ದ್ದಂತೆ ಎಡಿಜಿಪಿ ಅವರಿಂದ ವಿಚಾರಣೆಗೆ ಆದೇಶವಾಗಿತ್ತು. ಈ ಮಧ್ಯೆಯೂ ಅಧಿಕಾರಿ ಬೆಂಗಳೂರಿಗೆ ತೆರಳಿ ಸಿಎಂ ಪದಕ ಸ್ವೀಕರಿಸಿದ್ದಾರೆ. ಪದಕ ಪ್ರದಾನ ಕಾರ್ಯಕ್ರಮದಲ್ಲಿ ತನ್ನ ಜತೆಗೆ ಕೆಲಸ ಮಾಡಿದ ಇತರ ಅಧಿಕಾರಿಗಳಿದ್ದರೂ ಯಾರ ಜತೆಗೂ ಮಾತನಾಡದೆ ಪದಕ ಸ್ವೀಕರಿಸಿದ್ದಾರೆಂದು ಮೂಲಗಳಿಂದ ತಿಳಿದುಬಂದಿದೆ.
ಶೀಘ್ರವೇ ನೋಟಿಸ್ ಸಾಧ್ಯತೆ: ಮಧ್ಯಂತರ ವಿಚಾರಣಾ ವರದಿಯಲ್ಲಿ ಆರೋಪದಲ್ಲಿ ಸತ್ಯಾಂಶವಿದೆ ಎಂದು ಉಲ್ಲೇಖ ಮಾಡಿದ ಕಾರಣ ಆರೋಪಕ್ಕೆ ಗುರಿಯಾಗಿಯಾಗಿರುವ ಸಿಸಿಬಿ ಪೊಲೀಸರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡುವ ಸಾಧ್ಯತೆ ಇದೆ. ಮಧ್ಯಂತರ ವರದಿಯಲ್ಲಿ ಹಿಂದಿನ ಸಿಸಿಬಿ ಅಧಿಕಾರಿಯ ವಿಚಾರಣೆ ಬಾಕಿ ಇದೆ ಎಂದು ಉಲ್ಲೇಖ ಮಾಡಲಾಗಿದೆ. ಹೆಚ್ಚುವರಿ ಮಾಹಿತಿಗೆ ಅಧಿಕಾರಿ ವಿಚಾರಣೆ ಅಗತ್ಯವಿದೆ ಎಂದು ಉಲ್ಲೇಖಿಸಿರುವ ಕಾರಣ ನೋಟಿಸ್ ನೀಡುವುದು ಬಹುತೇಕ ಖಚಿತವಾಗಿದೆ. ಮಧ್ಯಂತರ ವರದಿ ತಲುಪಿದ ಬಳಿಕ ಎಡಿಜಿಪಿ ನಿರ್ದೇಶನದಂತೆ ಮುಂದಿನ ವಿಚಾರಣೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.







