ಸಾರ್ವಜನಿಕರಲ್ಲಿ ಸಾಂಕ್ರಮಿಕ ರೋಗ ಹರಡದಂತೆ ಜಾಗೃತಿ ಮೂಡಿಸಿ: ಜಿ. ಜಗದೀಶ್

ಉಡುಪಿ, ಫೆ.11: ಜನಸಾಮಾನ್ಯರಿಗೆ ಯಾವುದೇ ರೀತಿಯ ಸಾಂಕ್ರಾಮಿಕ ರೋಗ ಹರಡಿ, ಅವರಿಗೆ ಚಿಕಿತ್ಸೆ ನೀಡುವ ಬದಲು ಆ ರೋಗದ ಬಗ್ಗೆ ಜಾಗೃತಿ ಮೂಡಿಸಿ. ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ರೋಗ ಹರಡದಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಗುರುವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಶ್ರೀಕೃಷ್ಣ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ ಉಡುಪಿ, ಜಿಲ್ಲಾ ಆರೋಗ್ಯ ಇಲಾಖೆ ಹಾಗೂ ಜಿಲ್ಲಾ ಸರ್ವೇಕ್ಷಣ ಘಟಕ ಮತ್ತು ಎನ್ವಿಬಿಡಿಸಿಪಿ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾದ ಮಂಗನ ಕಾಯಿಲೆ ಕುರಿತ ಅಂತರ್-ಇಲಾಖಾ ಕಾರ್ಯಗಾರವ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜದಲ್ಲಿ ಪ್ರತಿಯೊಬ್ಬರೂ ಉತ್ತಮ ಆರೋಗ್ಯವನ್ನು ಹೊಂದುವಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ. ಸಾಂಕ್ರಾಮಿಕ ರೋಗ ಗಳು ಹರಡಿದಾಗ ಆ ಬಗ್ಗೆ ಎಲ್ಲಾ ಇಲಾಖಾ ಅಧಿಕಾರಿಗಳು, ಸಿಬ್ಬಂದಿ ವರ್ಗ ಸಮನ್ವಯದೊಂದಿಗೆ ಕಾರ್ಯನಿರ್ವಹಿಸಿದಾಗ ಮಾತ್ರ ರೋಗ ನಿಯಂತ್ರಿಸಲು ಸಾಧ್ಯವಾಗುತ್ತದೆ ಎಂದರು.
ಮಂಗನ ಕಾಯಿಲೆ ರೋಗ, ಮಂಗಗಳು ಸತ್ತಾಗ ಅವುಗಳ ದೇಹ ಕೊಳೆತು ಉಂಟಾಗುವ ಉಣ್ಣೆಗಳು ಮನುಷ್ಯರಿಗೆ ಕಚ್ಚುವುದರಿಂದ ಬರುತ್ತದೆ ಎಂದ ಅವರು, ಮಂಗನಕಾಯಿಲೆ ಮೊಟ್ಟ ಮೊದಲಿಗೆ ಶಿವಮೊಗ್ಗ ಜಿಲ್ಲೆಯ ಕ್ಯಾಸನೂರು ಗ್ರಾಮದಲ್ಲಿ ಕಂಡುಬಂದ ಹಿನ್ನೆಲೆ ಆ ಹೆಸರನ್ನು ಇಡಲಾಗಿದೆ ಎಂದರು.
ಇತ್ತೀಚಿನ ದಿನಗಳಲ್ಲಿ ಜನ ಸಾಮಾನ್ಯರು ಮಾಸ್ಕ್ಗಳನ್ನು ಧರಿಸುವುದು, ಸಾಮಾಜಿಕ ಅಂತರ ಕಾಪಾಡುವುದು, ಸ್ವಚ್ಛತೆಗೆ ಆದ್ಯತೆ ನೀಡುವು ದನ್ನು ಮರೆತಿರುವಂತೆ ಕಂಡು ಬರುತ್ತಿದೆ. ಈ ರೀತಿಯ ನಿರ್ಲಕ್ಷಣೆಗೆ ಒಳಗಾದಲ್ಲಿ ಸೋಂಕು ಮತ್ತೆ ಉಲ್ಬಣಗೊಳ್ಳುವ ಸಾಧ್ಯತೆಗಳಿವೆ. ಇದಕ್ಕೆ ಯಾರೂ ಆಸ್ಪದ ನೀಡಬಾರದು ಎಂದರು.
ನಮ್ಮ ನೆರೆಯ ಜಿಲ್ಲೆಯ ದಕ್ಷಿಣಕನ್ನಡ ಜಿಲ್ಲೆಗೆ ಕೇರಳದಿಂದ ಬರುವ ವಿದ್ಯಾರ್ಥಿಗಳು ಹಾಗೂ ಜನರಿಂದ ಸೋಂಕು ಅಲ್ಲಲ್ಲಿ ಹರಡುವುದು ಕಂಡು ಬರುತ್ತಿದೆ. ಜಿಲ್ಲೆಯಲ್ಲಿ ಈ ಬಗ್ಗೆ ಎಚ್ಚರ ವಹಿಸಬೇಕು. ವಿದ್ಯಾ ಸಂಸ್ಥೆಗಳು , ಹಾಸ್ಟೆಲ್ಗಳು ಸೇರಿದಂತೆ ಯಾವುದೇ ಪ್ರದೇಶದಲ್ಲಿ ಸೋಂಕು ಇರುವುದು ಕಂಡು ಬಂದಲ್ಲಿ ಅವುಗಳನ್ನು ಕಂಟೈನ್ಮೆಂಟ್ ಝೋನ್ಗಳಾಗಿ ಘೋಷಿಸುವುದರೊಂದಿಗೆ ಸೋಂಕು ಹರಡದಂತೆ ಆರೋಗ್ಯ ಇಲಾಖೆ ಅಧಿಕಾರಿಗಳು ತಡೆಯಬೇಕು ಎಂದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್ಚಂದ್ರ ಸೂಡ ಮಾತನಾಡಿ, ಕೋವಿಡ್ ಸಮಯದಲ್ಲಿ ಅದರ ನಿಯಂತ್ರಣಕ್ಕೆ ಜಿಲ್ಲಾಧಿಕಾರಿಗಳು ಉತ್ತಮ ಮಾರ್ಗದರ್ಶನ ಹಾಗೂ ಸಲಹೆಗಳನ್ನು ನೀಡಿ ಸೋಂಕು ಹೆಚ್ಚು ಹರಡದಂತೆ ತಡೆಯಲು ಸಹಕರಿಸಿದರು. ಇದಕ್ಕೆ ಆರೋಗ್ಯ ಇಲಾಖೆ ವತಿಯಿಂದ ಅಭಿನಂದನೆಗಳನ್ನು ತಿಳಿಸಿದರು.
ಕಾರ್ಯಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ವಾಸುದೇವ್, ‘ಕ್ಯಾಸನೂರ್ ಫಾರೆಸ್ಟ್ ಡಿಸೀಸ್’ ಮಂಗ ಗಳಿಂದ ಹರಡುವ ಕಾಯಿಲೆಯಾಗಿದ್ದು, ಅವುಗಳು ಸತ್ತಾಗ ಅವುಗಳಿಂದ ಉತ್ಪತ್ತಿಯಾಗುವ ಉಣ್ಣೆ ಕಚ್ಚುವುದರಿಂದ ಹರಡುತ್ತದೆ. ಕಾಯಿಲೆಯು ಹಲವಾರು ಲಕ್ಷಣಗಳನ್ನು ಹೊಂದಿದ್ದು ಸರ್ವೇಕ್ಷಣೆಗೆ ಒಳಪಡಿಸುವದರ ಮೂಲಕ ದೃಢಪಡಿಸಿಕೊಳ್ಳಬೇಕು. ಇದಕ್ಕೆ ವೈಜ್ಞಾನಿಕ ಚಿಕಿತ್ಸೆ ಇದೆ ಎಂದರು.
ಕಾರ್ಯಕ್ರಮದಲಿ ಕೆಎಫ್ಡಿ ಉಪನಿರ್ದೇಶಕ ಕಿರಣ್ಕುಮಾರ್, ಡಾ. ಪ್ರಶಾಂತ್ ಭಟ್, ಡಾ.ದರ್ಶನ್, ಕೆಎಂಸಿ ವೈದ್ಯ ಡಾ. ನಿತಿನ್ ಗುಪ್ತ ಮತ್ತಿತರರು ಉಪಸ್ಥಿತರಿದ್ದರು. ಡಾ. ಪ್ರೇಮಾನಂದ ಸ್ವಾಗತಿಸಿ ವಂದಿಸಿದರು.








