ಉಡುಪಿ: ಜ್ಞಾನದೀವಿಗೆ ಯೋಜನೆಯಡಿ ಮಲಬಾರ್ ಗೋಲ್ಡ್ ನಿಂದ 100 ಟ್ಯಾಬ್ ವಿತರಣೆ

ಉಡುಪಿ, ಫೆ.11: ಪಬ್ಲಿಕ್ ಟಿವಿ ಸುದ್ದಿವಾಹಿನಿ ಮತ್ತು ರೋಟರಿ ಇಂಟರ್ನ್ಯಾಷನಲ್ ಸಹಯೋಗದ ಜ್ಞಾನ ದೀವಿಗೆ ಉಚಿತ ಟ್ಯಾಬ್ ವಿತರಣಾ ಅಭಿಯಾನಕ್ಕೆ ಇದೀಗ ಉಡುಪಿಯ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಸಂಸ್ಥೆ ಸಹ ಕೈಜೋಡಿಸಿದ್ದು, ಗುರುವಾರ ಉಡುಪಿ ಜಿಲ್ಲೆಯ ಎರಡು ಸರಕಾರಿ ಶಾಲೆಗಳಿಗೆ 100 ಟ್ಯಾಬ್ ಗಳನ್ನು ವಿತರಿಸಿದೆ.
ಸರಕಾರಿ ಪ್ರೌಢಶಾಲೆ ಸಿದ್ದಾಪುರದ 100 ಮಕ್ಕಳಿಗೆ ಹಾಗೂ ಸರಕಾರಿ ಪ್ರೌಢಶಾಲೆ ಹೆಬ್ರಿಯ 100 ಮಕ್ಕಳಿಗೆ ಉಪಯೋಗವಾಗುವ ಟ್ಯಾಬ್ ಗಳನ್ನು ಮಲಬಾರ್ ಗೋಲ್ಡ್ ಸಂಸ್ಥೆ ನೀಡಿದೆ. ಒಟ್ಟು 3,45,000 ರೂ. ಮೊತ್ತದ ಟ್ಯಾಬ್ಗಳನ್ನು ಸರಕಾರಿ ಶಾಲೆಯ ಮಕ್ಕಳಿಗೆ ವಿತರಣೆ ಮಾಡಲಾಯಿತು.
ಉಡುಪಿಯ ಮಲಬಾರ್ ಗೋಲ್ಡ್ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಜಿಲ್ಲಾಧಿಕಾರಿ ಜಿ. ಜಗದೀಶ್ ಭಾಗವಹಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮಲಬಾರ್ ಗೋಲ್ಡ್ ಮತ್ತು ಡೈಮಂಡ್ಸ್ ಸಮಾಜಮುಖಿ ಕಾರ್ಯ ಶ್ಲಾಘನೀಯ. ಮಕ್ಕಳ ಶಿಕ್ಷಣಕ್ಕೆ ದೊಡ್ಡ ಮಟ್ಟದ ದೇಣಿಗೆ ನೀಡಿದ್ದು, ತಂತ್ರಜ್ಞಾನ ಕೈಗೆಟುಕದ ಮಕ್ಕಳಿಗೆ ಇದರಿಂದ ಬಹಳ ಉಪಯೋಗ ಆಗಲಿದೆ. ಹಳ್ಳಿಯ ಮಕ್ಕಳ ಮುಂದಿನ ವಿದ್ಯಾಭ್ಯಾಸಕ್ಕೆ, ಮಕ್ಕಳ ಏಳಿಗೆಗಾಗಿ ಕೈಗೊಂಡ ಕಾರ್ಯಕ್ರಮ ಯಶಸ್ವಿಯಾಗಬೇಕಾದರೆ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದು ಕೊಳ್ಳಬೇಕು ಎಂದರು.
ಮುಂದಿನ ಎಸೆಸೆಲ್ಸಿ ಫಲಿತಾಂಶಕ್ಕೆ ಟ್ಯಾಬ್ ಗಳು ಪೂರಕವಾಗಲಿ. ಸಮಾಜದಲ್ಲಿ ಯಾರಿಗೆಲ್ಲಾ ಕೊಡುಗೆ ನೀಡಲು ಸಾಧ್ಯವೋ ಅವರು ಈ ಅಭಿಯಾನಕ್ಕೆ ಕೈಜೋಡಿಸಬೇಕು. ವಿದ್ಯಾದಾನ ಬಹಳ ಪುಣ್ಯದ ಕಾರ್ಯ ಎಂದು ಜಿಲ್ಲಾಧಿಕಾರಿ ಹೇಳಿದರು.
ಕೊರೋನ ಕಾಲದಲ್ಲಿ ಅನೇಕ ವಿದ್ಯಾರ್ಥಿಗಳು ವಿದ್ಯಾಭ್ಯಾಸದಿಂದ ವಂಚಿತರಾಗಿದ್ದಾರೆ. ಹಳ್ಳಿಯ ಸರಕಾರಿ ಬಡಮಕ್ಕಳಿಗೆ ಆನ್ಲೈನ್ ತರಗತಿ ಗಳು ಕೈಗೆಟುಕಲಿಲ್ಲ. ಮೊಬೈಲ್, ಟಿವಿ ಇಲ್ಲದ ಸಾಕಷ್ಟು ಕುಟುಂಬಗಳು ನಮ್ಮ ಜಿಲ್ಲೆಯಲ್ಲಿವೆ. ಸಂಕಷ್ಟದ ಸಂದರ್ಭದಲ್ಲಿ ಪಬ್ಲಿಕ್ ಟಿವಿ ಮತ್ತು ರೋಟರಿ ಸಂಸ್ಥೆ ಸಹಯೋಗದ ಜ್ಞಾನದೀವಿಗೆ ಕಾರ್ಯಕ್ರಮಕ್ಕೆ ಮಲಬಾರ್ ಗೋಲ್ಡ್ ಸಂಸ್ಥೆ ಕೈಜೋಡಿಸಿರುವುದು ನಮಗೆ ಸಂತಸ ಮತ್ತು ಹೆಮ್ಮೆಯ ವಿಷಯ ಎಂದು ಸಂಸ್ಥೆಯ ಉಡುಪಿ ಹೆಡ್ ಹಫೀಝ್ ರೆಹಮಾನ್ ಹೇಳಿದರು.
ನಮ್ಮ ಲಾಭಾಂಶದ ಶೇ.ಐದನ್ನು ಸಾಮಾಜಿಕ ಚಟುವಟಿಕೆಗಳಿಗೆ ಆರಂಭದಿಂದಲೂ ನಾವು ನೀಡುತ್ತಾ ಬಂದಿದ್ದೇವೆ. ಶೈಕ್ಷಣಿಕ , ವೈದ್ಯಕೀಯ, ಪರಿಸರ, ಹೆಣ್ಣುಮಕ್ಕಳಿಗೆ ಚಿನ್ನ ಕೊಟ್ಟು ಮದುವೆ ಮಾಡಿಸುವ ಕೆಲಸದಲ್ಲಿ ಮಲಬಾರ್ ಗೋಲ್ಡ್ ತೊಡಗಿಸಿಕೊಂಡಿದೆ. ಈವರೆಗೆ ಮಲಬಾರ್ ಗೋಲ್ಡ್ ಸಂಸ್ಥೆ ಭಾರತದಲ್ಲಿ130 ಕೋಟಿ ರೂ.ಗಳಷ್ಟು ಸಹಾಯ ಮಾಡಿದೆ. ಮುಂದೆಯೂ ನಮ್ಮ ಸಮಾಜಮುಖಿ ಕಾರ್ಯ ವಿಸ್ತರಿಸುತ್ತೇವೆ ಎಂದು ರೆಹಮಾನ್ ನುಡಿದರು.
ಡಿಡಿಪಿಐ ಹೆಚ್.ಎನ್.ನಾಗೂರ, ರೋಟರಿ ಇಂಟರ್ ನ್ಯಾಷನಲ್ ಸಂಸ್ಥೆಯ ಉಡುಪಿ ಅಧ್ಯಕ್ಷೆ ರಾಧಿಕಾ ಲಕ್ಷ್ಮೀನಾರಾಯಣ ಈ ಸಂದರ್ಭದಲ್ಲಿ ಮಾತನಾಡಿದರು. ಕಾರ್ಯಕ್ರಮ ದಲ್ಲಿ ರಾಘವೇಂದ್ರ ನಾಯಕ್, ಪುರಂದರ ತಿಂಗಳಾಯ, ತಂಝೀಮ್ ಉಪಸ್ಥಿತರಿದ್ದರು. ಪಬ್ಲಿಕ್ ಟಿವಿ ಜಿಲ್ಲಾ ವರದಿಗಾರ ದೀಪಕ್ ಜೈನ್ ಕಾರ್ಯಕ್ರಮ ನಿರೂಪಿಸಿದರು.








.jpeg)



