ಕಂಬಳದ ಓಟದಲ್ಲಿ ದಾಖಲೆ ನಿರ್ಮಿಸಿದ ಓಟಗಾರರಿಗೆ ಎಸ್.ಸಿ.ಡಿ.ಸಿ.ಸಿ. ಬ್ಯಾಂಕ್ ವತಿಯಿಂದ ಸನ್ಮಾನ

ಮಂಗಳೂರು, ಫೆ.12:ಕಂಬಳದ ದಾಖಲೆಯ ಓಟಗಾರರಾದ ಶ್ರೀನಿವಾಸ ಗೌಡ, ವಿಶ್ವನಾಥ ಗೌಡರಿಗೆ ಕೇಂದ್ರ ಸಹಕಾರಿ ಬ್ಯಾಂಕ್ ವತಿಯಿಂದ ಎಸ್ ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್ .ರಾಜೇಂದ್ರ ಕುಮಾರ್ ಅವರ ನೇತೃತ್ವದಲ್ಲಿ ಸನ್ಮಾನ ಕಾರ್ಯಕ್ರಮ ನಡೆಯಿತು.
ಕಂಬಳದ ಗದ್ದೆಯಲ್ಲಿ ಓಡುವ ಓಟಗಾರರಿಗೆ ಸೂಕ್ತ ಪ್ರೋತ್ಸಾಹದ ಅಗತ್ಯವಿದೆ. ಈ ನಿಟ್ಟಿನಲ್ಲಿ ಅವರನ್ನು ಗೌರವಿಸುವ ಮೂಲಕ ಕಂಬಳ ಕ್ರೀಡೆಗೂ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಅವರು ಇನ್ನಷ್ಟು ಸಾಧನೆ ಮಾಡುವಂತಾಗಲಿ ಎಂದು ಓಟಗಾರರನ್ನು ಸನ್ಮಾನಿಸುತ್ತಿರುವುದಾಗಿ ಡಾ.ರಾಜೇಂದ್ರ ಕುಮಾರ್ ಓಟಗಾರರನ್ನು ಅಭಿನಂದಿಸಿದರು.
ಸಮಾರಂಭದಲ್ಲಿ ಕಂಬಳ ಕ್ರೀಡಾ ಅಕಾಡೆಮಿಯ ಅಧ್ಯಕ್ಷ ಗುಣಪಾಲ ಕದಂಬ, ಕಂಬಳ ಸಮತಿಯ ಸಂಘಟಕರಾದ ಬಿ.ಆರ್.ಶೆಟ್ಟಿ, ಸಂತೋಷ್ ಶೆಟ್ಟಿ ಬೋಳಗುತ್ತು, ವೆಂಕಟ ಪೂಜಾರಿ, ವಿಜಯ ಕುಮಾರ್, ಎಸ್.ಸಿ.ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕ ಶಶಿಕುಮಾರ್, ಕೆ.ಎಂ.ಎಫ್ ಉಪಾಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಗ್ರಾಮೀಣ ಕ್ರೀಡಾ ಸಾಧಕರು: ಕಂಬಳ ಗದ್ದೆಯಲ್ಲಿ ವಿಶ್ವನಾಥ ದೇವಾಡಿಗ (9.15 ಸೆ. ನೂರು ಮೀಟರ್ ಓಟ) ಮತ್ತು ಶ್ರೀನಿವಾಸ ದೇವಾಡಿಗ(9.31 ಸೆ.) ದಾಖಲೆ ನಿರ್ಮಿಸಿದ್ದಾರೆ. ರಾಜ್ಯ ಕ್ರೀಡಾ ಪ್ರಾಧಿಕಾರದ ಮೂಲಕ ಕ್ರೀಡಾರತ್ನ ಪ್ರಶಸ್ತಿಯನ್ನು ನೀಡುತ್ತಿರುವುದು ಶ್ಲಾಘನೀಯ ಎಂದು ಕಂಬಳ ಕ್ರೀಡಾ ಸಮಿತಿಯ ಅಧ್ಯಕ್ಷ ಗುಣಪಾಲ ಕದಂಬ ತಿಳಿಸಿದ್ದಾರೆ.







