ಸುರತ್ಕಲ್ ಟೋಲ್ನಲ್ಲಿ ಫಾಸ್ಟ್ಟ್ಯಾಗ್ ಕಡ್ಡಾಯಗೊಳಿಸಿದರೆ ತಡೆ: ಟೋಲ್ಗೇಟ್ ವಿರೋಧಿ ಹೋರಾಟ ಸಮಿತಿ ಎಚ್ಚರಿಕೆ

ಮಂಗಳೂರು, ಫೆ.12: ಸುರತ್ಕಲ್ ಟೋಲ್ಗೇಟ್ ತಾತ್ಕಾಲಿಕ ನೆಲೆಯಲ್ಲಿ ಮುಂದುವರಿದಿದ್ದು, ಇಲ್ಲಿ ಫೆ. 15ರಿಂದ ಫಾಸ್ಟ್ಟ್ಯಾಗ್ ಕಡ್ಡಾಯಗೊಳಿಸಿದರೆ ತಡೆಯೊಡ್ಡಲಾಗುವುದು ಎಂದು ಟೋಲ್ಗೇಟ್ ವಿರೋಧಿ ಹೋರಾಟ ಸಮಿತಿ ಎಚ್ಚರಿಸಿದೆ.
ಸುದ್ದಿಗೋಷ್ಠಿಯಲ್ಲಿಂದು ವಿವಿಧ ಸಂಘಟನೆಗಳ ನೇತೃತ್ವದ ಟೋಲ್ಗೇಟ್ ವಿರೋಧಿ ಹೋರಾಟ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ ಮಾತನಾಡಿ, ಹೆಜಮಾಡಿ ಟೋಲ್ ಕೇಂದ್ರ ಕಾರ್ಯಾರಂಭದ ಬಳಿಕ ತೆರವುಗೊಳಿಸುವ ಷರತ್ತಿನೊಂದಿಗೆ ಆರು ವರ್ಷಗಳ ಹಿಂದೆ ಸುರತ್ಕಲ್ ಟೋಲ್ ಆರಂಭವಾಗಿತ್ತು. ಆರು ತಿಂಗಳ ಅವಧಿಗೆ ತಾತ್ಕಾಲಿಕ ನೆಲೆಯಲ್ಲಿ ಅನುಮತಿ ಪಡೆದು ಕಾರ್ಯಾರಂಭಗೊಂಡ ಈ ಟೋಲ್ ಈಗಲೂ ಮುಂದುವರಿಯುತ್ತಿರುವುದು ಅಕ್ರಮ ಎಂದರು.
2018ರಲ್ಲಿ ಸಾರ್ವಜನಿಕರ ತೀವ್ರ ಪ್ರತಿಭಟನೆಯ ಹಿನ್ನೆಲೆಯಲ್ಲಿ ಹೆದ್ದಾರಿ ಪ್ರಾಧಿಕಾರ ಸುರತ್ಕಲ್ ಟೋಲ್ ಮುಚ್ಚಿ ಹೆಜಮಾಡಿ ಟೋಲ್ ಕೇಂದ್ರ ಜತೆ ವಿಲೀನಗೊಳಿಸುವ ನಿರ್ಧಾರ ಕೈಗೊಂಡು ರಾಜ್ಯ ಸರಕಾರದ ಅನುಮೋದನೆ ಪಡೆದಿದೆ. ಆದರೆ ವಿಲೀನ ನಿರ್ಧಾರ ಅನುಷ್ಠಾನವಾಗದೆ ಬಲವಂತದ ಟೋಲ್ ಸಂಗ್ರಹ ಮುಂದುವರಿದಿದೆ. ಹೆದ್ದಾರಿ ಪ್ರಾಧಿಕಾರ ವಿಲೀನ ಪ್ರಕ್ರಿಯೆಯ ನಿರ್ಧಾರದ ಬಳಿಕವೂ ಮೂರು ತಿಂಗಳು, ಆರು ತಿಂಗಳ ಅವಧಿಗೆ ತಾತ್ಕಾಲಿಕ ನೆಲೆಯಲ್ಲಿ ಈ ಟೋಲ್ ಕೇಂದ್ರದ ಗುತ್ತಿಗೆಯನ್ನು ನವೀಕರಿಸುತ್ತಾ ಬಂದಿದೆ. ಇದೀಗ ಫಾಸ್ಟ್ ಟ್ಯಾಗ್ ಕಡ್ಡಾಯದ ನೆಪವೊಡ್ಡಿ ಫೆ. 15ರಿಂದ ಸ್ಥಳೀಯ ವಾಹನಗಳ ಉಚಿತ ಪ್ರಯಾಣ ಸಹಿತ ಎಲ್ಲಾ ರಿಯಾಯಿತಿಗಳನ್ನು ಹಿಂಪಡೆಯಲು ಮುಂದಾಗಿದೆ. ಈಗಾಗಲೇ ಸ್ಥಳೀಯ ಖಾಸಗಿ ಸಿಟಿ, ಸರ್ವಿಸ್ ಬಸ್ಗಳು, ಗೂಡ್ಸ್, ಟೂರಿಸ್ಟ್ ವಾಹನಗಳ ರಿಯಾಯಿತಿ ಪಾಸ್ಗಳನ್ನು ಹಿಂಪಡೆದು ಫಾಸ್ಟ್ಟ್ಯಾಗ್ ಕಡ್ಡಾಯಗೊಳಿಸಲಾಗಿದೆ. ಆದ್ದರಿಂದ ಸುರತ್ಕಲ್ ಅಕ್ರಮ ಟೋಲ್ ಕೇಂದ್ರವನ್ನು ಈಗಾಗಲೇ ಆಗಿರುವ ತೀರ್ಮಾನದಂತೆ ತೆರವುಗೊಳಿಸಿ ಹೆಜಮಾಡಿ ಟೋಲ್ ಕೇಂದ್ರದ ಜತೆ ವಿಲೀನಗೊಳಿಸಬೇಕು. ಅಲ್ಲಿಯವರೆಗೆ ಸ್ಥಳೀಯ ಸಾರ್ವಜನಿಕ ಬಸ್ಸು, ಗೂಡ್ಸ್ ವಾಹನಗಳ ರಿಯಾಯಿತಿ, ಖಾಸಗಿ ವಾಹನಗಳ ಉಚಿತ ಪ್ರಯಾಣ ವ್ಯವಸೆಯನ್ನು ಈಗಿನಂತೆ ಮುಂದುವರಿಸಬೇಕು. ಬಲವಂತದಿಂದ ಫಾಸ್ಟ್ಟ್ಯಾಗ್ ಕಡ್ಡಾಯಗೊಳಿಸಿದರೆ ತಡೆಯ ಸಹಿತ ವ್ಯಾಪಕ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಹೇಳಿದರು.
ಹೆಜಮಾಡಿ ಟೋಲ್ ಕೇಂದ್ರದಲ್ಲಿ ಐದು ಕಿ.ಮೀ. ದೂರದವರೆಗೆ ಹರಡಿರುವ ಸ್ಥಳೀಯ ಪಡುಬಿದ್ರೆ ಗ್ರಾಮಸ್ಥರ ವಾಹನಗಳಿಗೆ ಉಚಿತ ಪ್ರಯಾಣ ಕಲ್ಪಿಸಲಾಗಿದೆ. ಈ ಶುಲ್ಕ ವಿನಾಯಿತಿಯನ್ನು ಫಾಸ್ಟ್ ಟ್ಯಾಗ್ ಕಡ್ಡಾಯದ ನಂತರವೂ ಮುಂದುವರಿಸಬೇಕು. ಅದೇ ಸಂದರ್ಭ ಹೆಜಮಾಡಿ ಟೋಲ್ ಕೇಂದ್ರದಿಂದ ಕೇವಲ ಅರ್ಧ ಕಿ.ಮೀ. ದೂರದಲ್ಲಿರುವ ಮುಲ್ಕಿ ಗ್ರಾಮಸ್ಥರ ವಾಹನಗಳಿಗೆ ಉಚಿತ ಪ್ರಯಾಣ ಕಲ್ಪಿಸಬೇಕು ಎಂದು ಅವರು ಆಗ್ರಹಿಸಿದರು.
ಗೋಷ್ಠಿಯಲ್ಲಿ ಹೋರಾಟ ಸಮಿತಿಯ ಮುಖಂಡರಾದ ಹರೀಶ್ ಪುತ್ರನ್, ಎಂ. ದೇವದಾಸ್, ಶೇಖರ್ ಹೆಜಮಾಡಿ, ದಿನೇಶ್ ಕುಂಪಲ, ಪುರುಷೋತ್ತಮ ಚಿತ್ರಾಪುರ, ದಯಾನಂದ ಶೆಟ್ಟಿ, ರಮೇಶ್ ಟಿ.ಎನ್., ಕನಕದಾಸ್ ಕೂಳೂರು, ವಿನ್ಸೆಂಟ್ ಪಿರೇರಾ, ಅಬೂಬಕರ್ ಬಾವಾ, ರಶೀದ್ ಮುಕ್ಕ, ಧನ್ರಾಜ್ ಸಸಿಹಿತ್ಲು, ಶಶಿ ಅಮೀನ್, ಮಧು ಆಚಾರ್ಯ, ಸದಾಶಿವ ಹೊಸದುರ್ಗ, ಇಕ್ಬಾಲ್ ಅಹಮ್ಮದ್ ಮುಲ್ಕಿ, ಸಂತೋಷ್ ಬಜಾಲ್ ಮೊದಲಾದವರು ಉಪಸ್ಥಿತರಿದ್ದರು.
ಸಂಸದರೇ ನೇರ ಹೊಣೆ
2018ರಲ್ಲಿ ನಡೆದ ಹೋರಾಟದ ಹಿನ್ನೆಲೆಯಲ್ಲಿ ಸುರತ್ಕಲ್ನ ತಾತ್ಕಾಲಿಕ ಟೋಲ್ ಹೆಜಮಾಡಿ ಟೋಲ್ನೊಂದಿಗೆ ವಿಲೀನಗೊಳಿಸುವ ಪ್ರಕ್ರಿಯೆ ನಡೆದಿದ್ದರೂ ಅದನ್ನು ಅನುಷ್ಠಾನಗೊಳಿಸುವಲ್ಲಿ ವಿಫಲವಾಗುವಲ್ಲಿ ಸ್ಥಳೀಯ ಸಂಸದರೇ ನೇರ ಹೊಣೆ. ಪ್ರಸ್ತುತ ಅವರು ರಾಜ್ಯ ಹಾಗೂ ಕೇಂದ್ರದಲ್ಲಿ ಆಡಳಿತದಲ್ಲಿರುವ ಬಿಜೆಪಿಯ ರಾಜ್ಯಾಧ್ಯಕ್ಷರಾಗಿದ್ದರೂ, ಕೇಂದ್ರ ಸಚಿವ ಗಡ್ಕರಿಯವರಿಗೆ ಮನವಿ ನೀಡುವ ಕಾರ್ಯ ಜನರ ಕಣ್ಣೊರೆಸುವ ತಂತ್ರ ಮಾತ್ರ. ಈಗಾಗಲೇ ಆಗಿರುವ ತೀರ್ಮಾನಕ್ಕೆ ಮತ್ತೆ ಸಭೆ ನಡೆಸುವ ಅಗತ್ಯವಿಲ್ಲ. ಬದಲಾಗಿ ಅದನ್ನು ಅನುಷ್ಠಾನಗೊಳಿಸಿದರೆ ಸಾಕು ಎಂದು ಮುನೀರ್ ಕಾಟಿಪಳ್ಳ ಹೇಳಿದರು.







