ಬೆಲೆ ಏರಿಕೆ ವಿರುದ್ಧ ಎಸ್ಡಿಟಿಯು ಬಂಟ್ವಾಳ ತಾಲೂಕು ಸಮಿತಿ ವತಿಯಿಂದ ಪ್ರತಿಭಟನೆ

ಬಂಟ್ವಾಳ, ಫೆ. 12: ಇಂಧನ ತೈಲ ಬೆಲೆ, ಆಟೋ ಎಲ್ಪಿಜಿ, ಅಡುಗೆ ಅನಿಲದ ಬೆಲೆ ಏರಿಕೆಯನ್ನು ವಿರೋಧಿಸಿ ಎಸ್ಡಿಟಿಯು ಬಂಟ್ವಾಳ ತಾಲೂಕು ಸಮಿತಿ ವತಿಯಿಂದ ಶುಕ್ರವಾರ ಬಿಸಿರೋಡ್ ಜಂಕ್ಷನ್ ನಲ್ಲಿ ಪ್ರತಿಭಟನೆ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಎಸ್ಡಿಪಿಐ ಜಿಲ್ಲಾ ಕಾರ್ಯದರ್ಶಿ ಅಶ್ರಫ್ ಮಂಚಿ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರಕಾರ ಅಸ್ಥಿತ್ವಕ್ಕೆ ಬಂದ ನಂತರ ಇಲ್ಲಿನ ಬಡ ಮಧ್ಯಮ ವರ್ಗ ವಿವಿಧ ರೀತಿಯಲ್ಲಿ ಸಂಕಷ್ಟ ಅನುಭವಿಸುತ್ತಿದ್ದಾರೆ. ಸರಕಾರದ ತಪ್ಪು ನೀತಿಗಳಿಂದ ಜನರು ದಿನ ನಿತ್ಯ ಬೀದಿಯಲ್ಲಿರುವಂತೆ ಮಾಡಿದೆ, ಕೇವಲ ಸಾಂಕೇತಿಕ ಪ್ರತಿಭಟನೆಗಳಿಂದ ಬಿಜೆಪಿಗೆ ಇಲ್ಲಿನ ಜನಸಾಮಾನ್ಯರ ಕಷ್ಟ ಅರ್ಥವಾಗುವುದಿಲ್ಲ ಹಾಗಾಗಿ ಇಲ್ಲಿನ ಸಮಾನ ಮನಸ್ಕರು ಸೇರಿ ಪ್ರಜಾಸತ್ತಾತ್ಮಕವಾದ ಆಂದೋಲನವನ್ನು ಸಂಘಟಿಸಬೇಕು ಎಂದರು.
ಎಸ್ಡಿಟಿಯು ಬಂಟ್ವಾಳ ತಾಲೂಕು ಸಮಿತಿ ಅಧ್ಯಕ್ಷ ಖಾದರ್ ಆಲಾಡಿ ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ಎಸ್ಡಿಪಿಐ ಜಿಲ್ಲಾ ಕಾರ್ಯದರ್ಶಿ ಅನ್ವರ್ ಸಾದತ್ ಬಜತ್ತೂರು, ಎಸ್ಡಿಟಿಯು ದಕ ಜಿಲ್ಲಾಧ್ಯಕ್ಷ ಕಾದರ್ ಫರಂಗಿಪೇಟೆ, ಎಸ್ಡಿಪಿಐ ಬಂಟ್ವಾಳ ತಾಲೂಕು ಸಮಿತಿ ಅಧ್ಯಕ್ಷ ಕಲಂದರ್ ಪರ್ತಿಪ್ಪಾಡಿ, ಎಪಿಎಂಸಿ ಬಂಟ್ವಾಳ ತಾಲೂಕು ಸಮಿತಿ ಮಾಜಿ ಅಧ್ಯಕ್ಷ ಅಬೂಬಕ್ಕರ್ ಕೆಎಚ್ ಮಾತನಾಡಿದರು. ಪ್ರತಿಭಟನಾಕಾರರು ಕೇಂದ್ರ ಸರಕಾರದ ವಿರುದ್ಧ ಘೋಷಣೆ ಕೂಗಿದರು.
ಆಟೋ ಯೂನಿಯನ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುಸ್ತಫಾ ಪರ್ಲಿಯಾ, ಬಂಟ್ವಾಳ ತಾಲೂಕು ಅಧ್ಯಕ್ಷ ಸಂಶುದ್ದೀನ್ ಪಲ್ಲಮಜಲ್, ಉಪಾಧ್ಯಕ್ಷ ಯಾಕೂಬ್ ಮದ್ದ, ಕಾರ್ಯದರ್ಶಿ ಇಲ್ಯಾಸ್ ವಗ್ಗ ಮತ್ತಿತರರು ಉಪಸ್ಥಿತರಿದ್ದರು.









