ಬಂಡವಾಳಶಾಹಿಗಳಿಂದ ನೇಮಕಗೊಂಡ ವಂಚಕ ರಾಜಕಾರಣಿಗಳು ಸರಕಾರ ನಡೆಸುತ್ತಿದ್ದಾರೆ: ದೇವನೂರ ಮಹಾದೇವ

ಚಾಮರಾಜನಗರ, ಫೆ.13: ಜನರಿಂದ ಆಯ್ಕೆಯಾದವರು ಸರಕಾರ ನಡೆಸುತ್ತಿಲ್ಲ. ಬಂಡವಾಳಶಾಹಿಗಳಿಂದ ನೇಮಕಗೊಂಡ ವಂಚಕ ರಾಜಕಾರಣಿಗಳು ಸರಕಾರ ನಡೆಸುತ್ತಿದ್ದಾರೆ ಎಂದು ಹಿರಿಯ ಸಾಹಿತಿ ದೇವನೂರ ಮಹಾದೇವ ಅವರು ಟೀಕಿಸಿದ್ದಾರೆ.
ಅವರು ಚಾಮರಾಜನಗರದಲ್ಲಿ ಪ್ರೋ.ಎಂ.ಡಿ.ನಂಜುಂಡಸ್ವಾಮಿರವರ 85ನೇ ಜನ್ಮದಿನಾಚರಣೆ ಹಾಗು ಕೃಷಿ ಕಾಯ್ದೆಗಳ ವಿರುದ್ಧ ಜಾಗೃತಿ ದಿನಾಚರಣೆಯಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯ ಪೂರ್ವದಲ್ಲಿ ಒಂದು ಕಂಪನಿಯ ಸರ್ಕಾರವಿತ್ತು. ಆದರೆ ಈಗ ಹತ್ತಾರು ಕಂಪನಿಗಳ ಸರ್ಕಾರವಿದೆ. ಪ್ರಜಾಪ್ರಭುತ್ವದ ಲಕ್ಷಣ ಮೋದಿ ಸರ್ಕಾರದಲ್ಲಿ ಕಾಣುತ್ತಿಲ್ಲ. ಇಂದು ಜನರಿಂದ ಆಯ್ಕೆಯಾದವರು ಸರಕಾರ ನಡೆಸುತ್ತಿಲ್ಲ. ಬಂಡವಾಳಶಾಹಿಗಳಿಂದ ನೇಮಕಗೊಂಡ ವಂಚಕ ರಾಜಕಾರಣಿಗಳು ಸರಕಾರ ನಡೆಸುತ್ತಿದ್ದಾರೆ ಎಂದು ಅವರು ವಾಗ್ದಾಳಿ ನಡೆಸಿದರು.
ರೈತ ಚೇತನ ಪ್ರೊ.ಎಂ.ಡಿ. ನಂಜುಂಡಸ್ವಾಮಿ ರವರ ವಿಚಾರ ಧಾರೆಗಳು ಇಂದು ನಿಜವಾಗುತ್ತಿವೆ. ವಿಶ್ವ ವಾಣಿಜ್ಯ ಒಪ್ಪಂದದಿಂದ ಕೃಷಿ ಕ್ಷೇತ್ರದ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ 30 ವರ್ಷಗಳ ಹಿಂದೆಯೇ ಹೇಳಿದ್ದ ಮಾತುಗಳು ಇಂದು ನಿಜವಾಗುತ್ತಿವೆ ಎಂದು ಅವರು ಹೇಳಿದರು.
ಪ್ರೊ.ಎಂ.ಡಿ. ನಂಜುಂಡಸ್ವಾಮಿ ಬದುಕಿದ್ದರೆ ಒಂದೋ ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟದ ಮುಂಚೂಣಿಯಲ್ಲಿರುತ್ತಿದ್ದರು ಇಲ್ಲವೇ ದೇಶದ್ರೋಹಿ ಎನಿಸಿಕೊಂಡು ಕಾನೂನು ಬಾಹಿರ ತಡೆ ಕಾಯ್ದೆಯನ್ವಯ ಜೈಲಿಗೆ ತಳ್ಳಲ್ಪಡುತ್ತಿದ್ದರು ಎಂದು ಕೇಂದ್ರ ಸರ್ಕಾರದ ನಡೆ ವಿರುದ್ಧ ಅಸಹನೆ ವ್ಯಕ್ತಪಡಿಸಿದರು.
ಕನಿಷ್ಠ ಬೆಂಬಲ ಬೆಲೆ ಹಿಂದೆಯೂ ಇತ್ತು, ಈಗಲೂ ಇದೆ, ಮುಂದೆಯೂ ಇರುತ್ತೆ ಎಂದು ಪ್ರಧಾನಿ ಮೋದಿ ಪ್ರವಾದಿಯಂತೆ ಹೇಳುತ್ತಿದ್ದಾರೆ. ಹಾಗಿದ್ದರೆ ಲಕ್ಷಾಂತರ ರೈತರು ಯಾಕಾಗಿ ಹೋರಾಟ ನಡೆಸುತ್ತಿದ್ದಾರೆ. ರೈತರೇನು ಮೂಢಾತ್ಮರೇ ಎಂದು ದೇವನೂರು ಮಹದೇವ ಪ್ರಶ್ನಿಸಿದರು. ಕೃಷಿ ಕಾಯ್ದೆ ವಿರೋಧಿ ಹೋರಾಟದಲ್ಲಿ ನೂರಾರು ರೈತರು ಮೃತಪಟ್ಟಿದ್ದರೂ ಸಹ ಪ್ರಧಾನಿ ಮೋದಿ ಹಾಗು ಅಮಿತ್ ಶಾ ಅವರ ಹೃದಯ ಕಲ್ಲಾಗಿದೆ. ಅವರ ನಡೆನುಡಿ ಗಮನಿಸಿದರೆ ಇದು ಜನರಿಂದ ಆಯ್ಕೆಯಾದ ಸರ್ಕಾರದಂತೆ ಕಾಣಿಸುತ್ತಿಲ್ಲ ಎಂದು ಅವರು ಹೇಳಿದರು.
2011ರಲ್ಲಿ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಅಂದಿನ ಕೇಂದ್ರ ಯುಪಿಎ ಸರ್ಕಾರ ಮೋದಿ ಅವರನ್ನು ಕೃಷಿ ಮಾರುಕಟ್ಟೆ ಸುಧಾರಣಾ ಸಮಿತಿಯ ಅಧ್ಯಕ್ಷರನ್ನಾಗಿ ನೇಮಕ ಮಾಡಿತ್ತು. ಆಗ ಕನಿಷ್ಠ ಬೆಂಬಲ ಬೆಲೆಯನ್ನ ಕಾನೂನಾತ್ಮಕವಾಗಿ ಕಡ್ಡಾಯಗೊಳಿಸಬೇಕು ಎಂದು ವರದಿ ನೀಡಿದ್ದರು. ಈಗ ರೈತರು ಅದನ್ನೇ ಕೇಳುತ್ತಿದ್ದಾರೆ. ಆದರೆ ಮೋದಿಯವರೇ, ನಿಮ್ಮ ಮಾತನ್ನು ನೀವೇ ಕೇಳಿಸಿಕೊಳ್ಳುತ್ತಿಲ್ಲ ಎಂದು ಅವರು ಟೀಕಿಸಿದರು.
ರಾತ್ರಿ ಕಂಡ ಬಾವಿಗೆ ಹಗಲು ಬೀಳಿಸುವ ಕಾನೂನುಗಳು ಬರುತ್ತಿವೆ. ಬಣ್ಣಬಣ್ಣದ ಮಾತುಗಳು ಜನಸಾಮಾನ್ಯರಿಗೆ, ಬಂಡವಾಳ ಮಾತ್ರ ಕಾರ್ಪೊರೇಟ್ ಕಂಪನಿಗಳಿಗೆ ಹರಿದು ಹೋಗುತ್ತದೆ. ಹೀಗೆ ಲಂಗುಲಗಾಮು ಇಲ್ಲದೆ ಕಾನೂನುಗಳು ಜಾರಿಯಾದರೆ, ರೈತ ಬೆಳೆದ ಬೆಳೆಗಳ ಕೃತಕ ಅಭಾವ ಸೃಷ್ಠಿಯಾಗುತ್ತದೆ. ಎಲ್ಲಾ ಪದಾರ್ಥಗಳ ಬೆಲೆ ಗಗನಕ್ಕೇರುತ್ತವೆ. ಮಧ್ಯಮ ವರ್ಗದವರು ಬಡತನದತ್ತ ದೂಡಲ್ಪಡುತ್ತಾರೆ. ಬಡವರು ಹಸಿವಿನ ದವಡೆಗೆ ಸಿಲುಕುತ್ತಾರೆ ಎಂದು ದೇವನೂರ ಮಹಾದೇವ ಎಚ್ಚರಿಸಿದರು.
ಕೃಷಿ ಕಾಯ್ದೆ ಕೇವಲ ರೈತರಿಗೆ ಅನ್ವಯಿಸುವುದಿಲ್ಲ. ಇದು ಎಲ್ಲಾ ವರ್ಗದ ಜನರಿಗೆ ಸಂಬಂಧಪಟ್ಟ ವಿಷಯವಾಗಿದೆ. ಈ ನೆಲದ ಮೇಲೆ ಬದುಕುತ್ತಿರುವ ಪ್ರತಿಯೊಬ್ಬರೂ ಇದನ್ನು ಮನಗಾಣಬೇಕು ಎಂದರು.
ಕೋವಿಡ್ ಹಾವಳಿಯ ಜರ್ಜರಿತವಾದ ಕಾಲಮಾನದಲ್ಲೇ ಕೇವಲ ನೂರು ಜನ ಶತಕೋಟ್ಯಾಧೀಶರು 12.5 ಲಕ್ಷ ಕೋಟಿ ಲಾಭ ಗಳಿಸಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ ಅವರು, ಲಂಗು-ಲಗಾಮಿಲ್ಲದ ಕಾನೂನುಗಳು ಜಾರಿಗೆ ಬಂದರೆ ಕೃತಕ ಅಭಾವ ಸೃಷ್ಟಿಸಿ, ಬೆಲೆ ಹೆಚ್ಚಾದ ಈರುಳ್ಳಿಯಂತೆ ಎಲ್ಲಾ ದವಸ-ಧಾನ್ಯಗಳಿಗಾಗುತ್ತದೆ ಎಂದು ಅವರು ಕೃಷಿ ಕಾಯ್ದೆಗಳ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದರು.







