ನಾಗರಿಕ ಸೇವೆಗಳ ಕಾಯ್ದೆ-2018 ಪ್ರಶ್ನಿಸಿ ಅರ್ಜಿ: ಕೇಂದ್ರ, ರಾಜ್ಯ ಸರಕಾರಕ್ಕೆ ಹೈಕೋರ್ಟ್ ನೋಟಿಸ್

ಬೆಂಗಳೂರು, ಫೆ. 14: ಕರ್ನಾಟಕ ನಾಗರಿಕ ಸೇವೆಗಳ(ನೇಮಕಾತಿ ಸಮಯದಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ವಿಧಾನ) ಕಾಯ್ದೆ-2018ರ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ಸಂಬಂಧ ಹೈಕೋರ್ಟ್ ರಾಜ್ಯ ಮತ್ತು ಕೇಂದ್ರ ಸರಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
1998, 1999 ಮತ್ತು 2004ರ ಬ್ಯಾಚ್ಗಳ ಗೆಜೆಟೆಡ್ ಪ್ರೊಬೆಷನರ್ ಪರೀಕ್ಷೆಗಳಲ್ಲಿ ಅಭ್ಯರ್ಥಿಗಳಾಗಿದ್ದ ಎ.ಆರ್. ಖಲೀಲ್ ಅಹ್ಮದ್ ಮತ್ತು ಇತರರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.
ಈ ತಿದ್ದುಪಡಿಯು 1994ರ ಮೇ 3ರಿಂದ ಹೊಸ ಕಾಯ್ದೆ ಜಾರಿಗೆ ಬರುವವರೆಗೆ ಮಾಡಿದ ಎಲ್ಲ ಆಯ್ಕೆಗಳನ್ನು ಸಕ್ರಮಗೊಳಿಸುತ್ತದೆ. ಆಯ್ಕೆ ವಿಧಾನದಲ್ಲಿ ಅಕ್ರಮಗಳು ನಡೆದಿದ್ದರೆ ಅದನ್ನು ಪ್ರಶ್ನಿಸಿ ನ್ಯಾಯಾಲಯ ಅಥವಾ ನ್ಯಾಯಮಂಡಳಿ ಮುಂದೆ ಹೋಗಲು ಹೊಸ ಕಾಯ್ದೆ ಪ್ರಕಾರ ಅವಕಾಶ ಇರುವುದಿಲ್ಲ ಎಂದು ವಾದಿಸಿದ್ದಾರೆ.
ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ನ್ಯಾಯಪೀಠ, ನೋಟಿಸ್ ನೀಡಲು ಆದೇಶಿಸಿತು. ಅರ್ಜಿಯಲ್ಲಿರುವ ಇತರೆ ವಿಷಯಗಳ ಹೊರತಾಗಿ ಕಾಯ್ದೆಯ ಸಿಂಧುತ್ವ ಪ್ರಶ್ನಿಸಿರುವ ವಿಷಯವನ್ನಷ್ಟೇ ವಿಚಾರಣೆ ನಡೆಸಲಾಗುವುದು. ಹೀಗಾಗಿ, ತಿದ್ದುಪಡಿ ಅರ್ಜಿ ಸಲ್ಲಿಸುವಂತೆ ಅರ್ಜಿದಾರರಿಗೂ ನಿರ್ದೇಶನ ನೀಡಿತು.





