ಛಾಯಾ ವಾಣಿಜ್ಯೋದ್ಯಮಗಳ ಉದಯ
ಇತ್ತೀಚೆಗೆ ಬಿಝಿನೆಸ್ ಸ್ಕೂಲ್ನ ಪ್ರಾಧ್ಯಾಪಕರೊಬ್ಬರು ವಿದ್ಯಾರ್ಥಿಗಳಿಗೆ ಖೋಟಾ ಸರ್ಟಿಫಿಕೇಟ್ಗಳನ್ನು ನೀಡಲು ತನ್ನ ಪ್ರಾಧ್ಯಾಪಕ ಹುದ್ದೆಯನ್ನು ದುರ್ಬಳಕೆ ಮಾಡಿಕೊಂಡರು: ತಾನೇ ಬೋಧಿಸಿದ ಆನ್ಲೈನ್ ಕೋರ್ಸ್ ಒಂದಕ್ಕೆ ಹಾಜರಾಗುವಂತೆ ಅವರು ಆ ವಿದ್ಯಾರ್ಥಿಗಳಿಗೆ ಬಲವಂತ ಮಾಡಿದರು. ಸಂಸ್ಥೆಯ ಸಂಬಂಧಿತ ಅಧಿಕಾರಿಗಳಿಗೆ ಇದು ತಿಳಿದಾಗ ಅವರು ಪ್ರಾಧ್ಯಾಪಕರನ್ನು ಅಮಾನತುಗೊಳಿಸಿದರು. ಇದು ಶಿಕ್ಷಣ ರಂಗದಲ್ಲಷ್ಟೇ ಅಲ್ಲ, ಬದಲಾಗಿ ಹಣಕಾಸು (ಸುಲಭದ ಸಾಲಗಳಿಗಾಗಿ) ಜೂಜು ಅರ್ಥವ್ಯವಸ್ಥೆ (ಆನ್ಲೈನ್ ಗೇಮ್ಸ್) ಮತ್ತು ಆರೋಗ್ಯ ಸೇವೆ (ಇ-ಫಾರ್ಮಸಿಗಳು)ಇಂತಹ ರಂಗಗಳಲ್ಲಿ ಕೂಡ ಜಾಗತಿಕವಾಗಿ ಕಾಣಿಸಿಕೊಳ್ಳುತ್ತಿರುವ ಛಾಯಾ ವಾಣಿಜ್ಯ ಉದ್ಯಮ, ವ್ಯವಹಾರಗಳ (ಶ್ಯಾಡೋ ಎಂಟರ್ಪ್ರೂನರ್ಷಿಪ್) ರಂಗದಲ್ಲಿ ಜಾಗರೂಕತೆ ವಹಿಸಬೇಕಾದ ಅವಶ್ಯಕತೆಯನ್ನು ಒತ್ತಿ ಹೇಳುತ್ತದೆ. ದೀರ್ಘಾವಧಿಯಲ್ಲಿ ಇವು ಬಳಕೆದಾರರ ಕಿಸೆಗೆ ಕತ್ತರಿ ಹಾಕುವ ‘ಬ್ಲೇಡ್ ಕಂಪೆನಿ’ಗಳಾಗಬಹುದಾದ್ದರಿಂದ ಇಂತಹ ಆನ್ಲೈನ್ ಸೇವೆಗಳ ಮೇಲೆ ನಿಗಾ ಇಡಲು ಸರಕಾರದ ನಿಯಂತ್ರಣ ಅಗತ್ಯವಾಗಿದೆ.
ಇಂತಹ ಛಾಯಾ ಸೇವೆಗಳು ಅಣಬೆಗಳಂತೆ ಹುಟ್ಟಿಕೊಳ್ಳಲು ಏನು ಕಾರಣ ಇರಬಹುದು? ಕೋವಿಡ್-19ರ ನಂತಹ ಪೂರೈಕೆ ಹಾಗೂ ಬೇಡಿಕೆಯ ನಡುವೆ ಏರುಪೇರಾಗುವ ಒಂದು ಆಘಾತಕಾರಿ ಸನ್ನಿವೇಶ ಉಂಟಾದಾಗ, ಗ್ರಾಹಕರ ಅವಶ್ಯಕತೆಗಳನ್ನು ಪೂರೈಸಲು ಒಂದು ಹೊಸ ಮಾರುಕಟ್ಟೆ ಉದಯಿಸಬಹುದು. ಛಾಯಾ ಸೇವೆ ಪೂರೈಕೆದಾರರು ತಂತ್ರಜ್ಞಾನದ ಮೂಲಕ ದೊರಕುವ ಸೇವೆಗಳನ್ನು ಗ್ರಾಹಕರಿಗೆ ನೀಡಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಾರೆ. ಲಾಕ್ಡೌನ್ನ ಪರಿಣಾಮವಾಗಿ ತಮಗೆ ಬೇಕಾದ ಸೇವೆ, ಸವಲತ್ತುಗಳು ಸಿಗದಿದ್ದಾಗ ಹಳೆಯ ಗ್ರಾಹಕರು ತಂತ್ರಜ್ಞಾನದ ಮೂಲಕ ದೊರಕುವ ಈ ಹೊಸ ಮಾರುಕಟ್ಟೆಗಳಿಗೆ ಶರಣಾಗುತ್ತಾರೆ. ಹೀಗಾದಾಗ ಮಾರುಕಟ್ಟೆಯ ಶಕ್ತಿ ಹಲವು ರೀತಿಗಳಲ್ಲಿ ವ್ಯಕ್ತವಾಗುತ್ತದೆ. ಚಿಕ್ಕಚಿಕ್ಕ ಉದ್ಯಮಗಳನ್ನು, ಕಂಪೆನಿಗಳನ್ನು ಬೃಹತ್ ಕಂಪೆನಿಗಳು ಕೊಂಡುಕೊಳ್ಳುತ್ತವೆ. ಆಗ ಗಡಿಯಾಚೆಗಿನ ಹಾಗೂ ರಾಷ್ಟ್ರೀಯ ಭದ್ರತೆಯ ಸಮಸ್ಯೆಗಳೂ ಕಾಣಿಸಿಕೊಳ್ಳಬಹುದು. ಉದಾಹರಣೆಗೆ ಚೀನಾದ ಕೆಲವು ಸಾಲ ಪೂರೈಕೆದಾರರು ಆನ್ಲೈನ್ನಲ್ಲಿ ಅನುಮಾನಾಸ್ಪದ ಸಾಲದ ವ್ಯವಹಾರಗಳನ್ನು ನಡೆಸಿದ ಪ್ರಕರಣ ಇತ್ತೀಚೆಗೆ ವರದಿಯಾಗಿದೆ. ಅಂತಹ ಛಾಯಾ ಉದ್ಯಮ ಪ್ಲಾಟ್ಫಾರ್ಮ್ಗಳು ಭಾರತೀಯ ಟೆಲಿ ಮೆಡಿಸಿನ್ ರಂಗವನ್ನು ಪ್ರವೇಶಿಸಿ ಗ್ರಾಹಕರಿಗೆ ಸಮಸ್ಯೆಗಳನ್ನುಂಟು ಮಾಡಬಹುದು. ಅಲ್ಲದೆ ಸುಳ್ಳು ದಾಖಲೆಗಳನ್ನು ಸೃಷ್ಟಿಸುವಂತಹ ಮಾರ್ಗಗಳ ಮೂಲಕ ಗ್ರಾಹಕರಿಂದ ಹಣ ವಸೂಲಿ ಮಾಡುವಂತಹ ಸೇವಾ ಪೂರೈಕೆದಾರರು ಹುಟ್ಟಿಕೊಳ್ಳಬಹುದು.
ಹಾಗಾದರೆ ಇಂತಹ ಚಟುವಟಿಕೆಗಳನ್ನು ಹೇಗೆ ತಡೆಯುವುದು? ಅಧ್ಯಯನವೊಂದರ ಪ್ರಕಾರ ಛಾಯಾ ಉದ್ಯಮಿಗಳು, ಕಂಪೆನಿಗಳು ನೀಡುವ ಸೇವೆಗಳ ಗುಣಮಟ್ಟದ ಮೇಲೆ ಸರಕಾರ ತೀವ್ರ ನಿಗಾ ಇಡಬೇಕು. ಜತೆಗೆ ತಪ್ಪಿತಸ್ಥರಿಗೆ ಜೈಲು ಶಿಕ್ಷೆ ವಿಧಿಸುವ ಕಾನೂನು ರಚಿಸಬೇಕು. ಛಾಯಾ ಕಂಪೆನಿಗಳು ಕಾನೂನುಬದ್ಧ ಕಂಪೆನಿಗಳನ್ನು ಸೇರಿಕೊಳ್ಳುವ ಅವಕಾಶ ನೀಡಬಹುದಾದರೂ ಸರಕಾರದ ಕಟ್ಟುನಿಟ್ಟಿನ ನಿಯಂತ್ರಣ ಇಲ್ಲದೆ ಹೋದಲ್ಲಿ ಪರಿಸ್ಥಿತಿ ಕೈಮೀರಿ ಹೋಗಬಹುದು. ಆದ್ದರಿಂದ ಸರಕಾರದ ಸಂಬಂಧಿತ ಇಲಾಖೆಗಳ ನಡುವೆ ವಿವಿಧ ಚಟುವಟಿಕೆಗಳ ಸಾಮರಸ್ಯ ಸಾಧ್ಯವಾಗಬೇಕು. ಉದಾಹರಣೆಗೆ, ಭಾರತದಲ್ಲಿ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ ಛಾಯಾ ಸೇವೆಗಳ ರಂಗವನ್ನು ನಿಯಂತ್ರಿಸುವಾಗಲೇ ಅದರ ಜೊತೆ ಆರೋಗ್ಯ ಸೇವೆ, ಶಿಕ್ಷಣ ಅಥವಾ ಹಣಕಾಸು ವಿಭಾಗಗಳು ಕೈಜೋಡಿಸಬೇಕು.
ಒಟ್ಟಿನಲ್ಲಿ ನಮ್ಮೆದುರು ಇರುವ ಒಂದು ದೊಡ್ಡ ಪ್ರಶ್ನೆಯೆಂದರೆ ಕೊರೋನ ರೋಗಾಣುವನ್ನು ನಿಭಾಯಿಸುವ ಒತ್ತಡ ಹಾಗೂ ಆಯಾಸದಲ್ಲಿರುವ ವಿಶ್ವದ ಸರಕಾರಗಳು ಛಾಯಾ ವಾಣಿಜ್ಯ/ಸೇವಾರಂಗ ತಂದಿರುವ ಸಮಸ್ಯೆಗಳನ್ನು ನಿವಾರಿಸುವ ಕಡೆಗೆ ಗಮನಹರಿಸಿಯಾವೇ? ಗಮನ ಹರಿಸದೇ ಇದ್ದಲ್ಲಿ ಕೋವಿಡ್-19 ತಂದಿರುವ ಪರಿಣಾಮಗಳಿಂದಾಗುವ ಕೋವಿಡ್ ನಂತರದ ಅನಿಷ್ಟ ಪರಿಣಾಮಗಳನ್ನು ಎದುರಿಸಲು ನಾವು ಸಿದ್ಧರಾಗಬೇಕಾಗುತ್ತದೆ. ಯಾಕೆಂದರೆ ಭಾರತದಲ್ಲಷ್ಟೇ ಅಲ್ಲ, ವಿಶ್ವಾದ್ಯಂತ ಛಾಯಾ ವಾಣಿಜ್ಯ/ ಉದ್ಯಮ ಸೇವೆಗಳು ಈಗಾಗಲೇ ಅಧಿಕ ಸಂಖ್ಯೆಯಲ್ಲಿ ಉದಯಿಸುತ್ತಿವೆ.
Thehindu
ಕೃಪೆ: (ಲೇಖಕರು ಐಐಎಂ ಹೈದರಾಬಾದ್ನಲ್ಲಿ ಪ್ರಾಧ್ಯಾಪಕರು ಹಾಗೂ ಸ್ಟಾನ್ ಫೋರ್ಡ್ ವಿಶ್ವವಿದ್ಯಾನಿಲಯದ ಹೂವರ್ ಇನ್ಸ್ಟಿಟ್ಯೂಷನ್ನಲ್ಲಿ ಸಂದರ್ಶಕ ಪ್ರಾಧ್ಯಾಪಕರು)