ಅಖಂಡಹಳ್ಳಿ: ಪ್ರೇಮಿಗಳು ಆತ್ಮಹತ್ಯೆ

ಕಲಬುರಗಿ, ಫೆ.16: ಪ್ರೇಮಿಗಳಿಬ್ಬರು ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ಯಡ್ರಾಮಿ ತಾಲೂಕಿನ ಅಖಂಡಹಳ್ಳಿ ಗ್ರಾಮದ ಹೊರವಲಯದಲ್ಲಿ ನಡೆದಿದೆ.
ಮಾನಶಿವಣಗಿ ಗ್ರಾಮದ ಪರಶುರಾಮ ಪೂಜಾರಿ (23) ಮತ್ತು ಭಾಗ್ಯಶ್ರೀ ಒಡೆಯರ್ (18) ಆತ್ಮಹತ್ಯೆ ಮಾಡಿಕೊಂಡವರು. ಇಬ್ಬರೂ ಸಂಬಂಧಿಕರೇ ಆಗಿದ್ದು, ಅಕ್ಕಪಕ್ಕದ ಮನೆಯಲ್ಲಿ ವಾಸವಿದ್ದರು. ಪರುಶುರಾಮ ಕೃಷಿ ಕೆಲಸ ಹಾಗೂ ಭಾಗ್ಯಶ್ರೀ ಪಿಯುಸಿ ಓದುತ್ತಿದ್ದಳು.
ಇವರಿಬ್ಬರು ಪರಸ್ಪರ ಪ್ರೀತಿಸುತ್ತಿದ್ದು ವಿವಾಹ ಮಾಡಿಸಿಕೊಡುವಂತೆ ಮನೆಮಂದಿಯನ್ನು ಒತ್ತಾಯಿಸುತ್ತಿದ್ದರೆನ್ನಲಾಗಿದೆ. ಆದರೆ ಪರಶುರಾಮ ಭಾಗ್ಯಶ್ರೀಯ ಸೋದರತ್ತೆ ಮಗನಾಗಿರುವುದರಿಂದ ಮನೆಮಂದಿ ತಕ್ಷಣ ಇವರಿಬ್ಬರ ಮದುವೆಗೆ ಆಸಕ್ತಿ ಹೊಂದಿರಲಿಲ್ಲ ಎನ್ನಲಾಗಿದೆ. ಇದರಿಂದ ಬೇಸತ್ತ ಪ್ರೇಮಿಗಳಿಬ್ಬರು ಫೆ. 11ರಂದು ಮನೆ ಬಿಟ್ಟು ಹೋಗಿದ್ದರು ಎಂದು ಮೃತಳ ತಂದೆ ದೂರಿನಲ್ಲಿ ತಿಳಿಸಿದ್ದಾರೆ.
ಮದುವೆ ಮಾಡುವುದಾಗಿ ಹೇಳಿ, ಬಳಿಕ ತಮ್ಮನ್ನು ದೂರ ಮಾಡಬಹುದು ಎಂಬ ಸಂದೇಹದಿಂದ ಪ್ರೇಮಿಗಳು ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗುತ್ತಿದೆ. ಇಂದು ಮರಕ್ಕೆ ಹಗ್ಗ ಕಟ್ಟಿ ಕುತ್ತಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಅವರಿಬ್ಬರ ಮೃತದೇಹಗಳು ಪತ್ತೆಯಾಗಿವೆ.
ಘಟನಾ ಸ್ಥಳಕ್ಕೆ ಸ್ಥಳಕ್ಕೆ ಯಡ್ರಾಮಿ ಪೊಲೀಸರು ಭೇಟಿ ನೀಡಿ ಪರೀಶಿಲನೆ ನಡೆಸಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.







