ಕೊರೋನ ನಿಯಂತ್ರಣದಲ್ಲಿ ಕೇಂದ್ರದ ನಿರ್ಲಕ್ಷ್ಯ: ರಾಹುಲ್
ಹೊಸದಿಲ್ಲಿ,ಫೆ.17: ಕೊರೋನ ವೈರಸ್ ಸಾಂಕ್ರಾಮಿಕದ ಹಾವಳಿಯ ಬಗ್ಗೆ ಕೇಂದ್ರ ಸರಕಾರವು ತೀವ್ರ ನಿರ್ಲಕ್ಷ್ಯ ವಹಿಸಿದ್ದು, ಅದನ್ನು ನಿಯಂತ್ರಿಸಿರುವುದಾಗಿ ಅತಿಯಾದ ಆತ್ಮವಿಶ್ವಾಸವನ್ನು ಹೊಂದಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬುಧವಾರ ಆಪಾದಿಸಿದ್ದಾರೆ. ಕೋವಿಡ್-19 ಹಾವಳಿಯು ಇನ್ನೂ ಕೊನೆಗೊಂಡಿಲ್ಲವೆಂದು ಅವರು ಎಚ್ಚರಿಕೆ ನೀಡಿದ್ದಾರೆ.
ಕ್ಷಿಪ್ರವಾಗಿ ಹರಡುವ ಕೊರೋನ ವೈರಸ್ನ ದಕ್ಷಿಣ ಆಫ್ರಿಕ ಹಾಗೂ ಬ್ರೆಝಿಲ್ ಪ್ರಭೇದಗಳ ಭಾರತದಲ್ಲಿ ಪತ್ತೆಯಾಗಿರುವುದನ್ನು ಸರಕಾರವು ದೃಢಪಡಿಸಿರುವ ಕುರಿತಾಗಿ ‘ಇಂಡಿಯಾಟುಡೇ’ ಸುದ್ದಿಜಾಲತಾಣದಲ್ಲಿ ಪ್ರಕಟವಾದ ವರದಿಯೊಂದನ್ನು ರಾಹುಲ್ ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದಾರೆ.
ಭಾರತೀಯ ವೈದ್ಯಕೀಯ ಸಂಶೋಧನಾ ಕೇಂದ್ರ (ಐಸಿಎಂಆರ್)ದ ಮಹಾನಿರ್ದೇಶಕ ಬಲರಾಮ್ ಭಾರ್ಗವ ಮಂಗಳವಾರ ನೀಡಿದ ಪತ್ರಿಕಾ ಹೇಳಿಕೆಯಲ್ಲಿ, ದೇಶದಲ್ಲಿ ಕೊರೋನ ವೈರಸ್ನ ಬ್ರೆಝಿಲ್ ಪ್ರಭೇದದ ಒಂದು ಪ್ರಕರಣ ಹಾಗೂ ದಕ್ಷಿಣ ಆಫ್ರಿಕ ಪ್ರಭೇದದ ನಾಲ್ಕು ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತರನ್ನು ಹಾಗೂ ಅವರ ಸಂಪರ್ಕಿತರನ್ನು ಕ್ವಾರಂಟೈನಲ್ಲಿರಿಸಲಾಗಿದೆಯೆಂದು ತಿಳಿಸಿದ್ದಾರೆಂದು ‘ಇಂಡಿಯಾ ಟುಡೇ’ ವರದಿ ಮಾಡಿತ್ತು.