ಪ.ಗೋ. ಪ್ರಶಸ್ತಿಗೆ ಅರ್ಜಿ ಆಹ್ವಾನ
ಮಂಗಳೂರು, ಫೆ.17: ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಗ್ರಾಮೀಣ ಯುವ ಪತ್ರಕರ್ತರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ನೀಡಲಾಗುತ್ತಿರುವ ಪ್ರತಿಷ್ಠಿತ ಪ.ಗೋ. (ಪದ್ಯಾಣ ಗೋಪಾಲಕೃಷ್ಣ) ಪ್ರಶಸ್ತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ದ.ಕ., ಉಡುಪಿ, ಉ.ಕ., ಕೊಡಗು, ಚಿಕ್ಕಮಗಳೂರು, ಕಾಸರಗೋಡು ಜಿಲ್ಲೆಯ 45 ವರ್ಷ ಪ್ರಾಯ ಮೀರದ ಕಾರ್ಯನಿರತ ಪತ್ರಕರ್ತರು ಅರ್ಜಿ ಸಲ್ಲಿಸಬಹುದಾಗಿದೆ. ಗ್ರಾಮೀಣ, ಅಭಿವೃದ್ಧಿಪರ ಮತ್ತು ಮಾನವೀಯ ವರದಿಗಳನ್ನು ಮಾತ್ರ ಪರಿಗಣಿಸಲಾಗುವುದು. ಪ್ರಶಸ್ತಿ 10,001 ರೂ. ನಗದು, ಪ್ರಶಸ್ತಿ ಫಲಕ ಹಾಗೂ ಸ್ಮರಣಿಕೆ ಒಳಗೊಂಡಿರುತ್ತದೆ. 2020ನೇ ಸಾಲಿನ ಪ್ರಶಸ್ತಿಗೆ 2020ರ ಜನವರಿ 1ರಿಂದ ಡಿಸೆಂಬರ್ 31ರವರೆಗೆ ಕನ್ನಡ ಪತ್ರಿಕೆಗಳಲ್ಲಿ ಪ್ರಕಟಗೊಂಡಿರುವ ವರದಿಗಳಿಗೆ ಸೀಮಿತವಾಗಿರುತ್ತದೆ. ಒಬ್ಬರಿಗೆ ಎರಡು ವರದಿಗಳನ್ನು ಮಾತ್ರ ಕಳುಹಿಸಲು ಅವಕಾಶ ಇರುತ್ತದೆ. ಒಂದು ಬಾರಿ ಪ್ರಶಸ್ತಿ ಪಡೆದವರಿಗೆ ಮತ್ತೊಮ್ಮೆ ಅರ್ಜಿ ಸಲ್ಲಿಸಲು ಅವಕಾಶವಿಲ್ಲ. ಪ್ರಶಸ್ತಿಗಾಗಿ ಅರ್ಜಿ ಸಲ್ಲಿಸುವವರು ವರದಿಯ ನಾಲ್ಕು ಪ್ರತಿಗಳನ್ನು (ಒಂದು ಮೂಲಪ್ರತಿ ಕಡ್ಡಾಯ) ಸಲ್ಲಿಸಬೇಕು. ವರದಿಯಲ್ಲಿ ವರದಿಗಾರರ ಬೈಲೈನ್ ಪ್ರಕಟಗೊಂಡಿರಬೇಕು.
ಅರ್ಜಿಯೊಂದಿಗೆ ಭಾವಚಿತ್ರವಿರುವ ಸ್ವವಿವರವನ್ನು ಸಲ್ಲಿಸತಕ್ಕದ್ದು. ಅರ್ಜಿಗಳನ್ನು ಕಳುಹಿಸಲು ಫೆ.28 ಕೊನೆಯ ದಿನಾಂಕವಾಗಿದೆ ಎಂದು ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ಪ್ರಕಟನೆಯಲ್ಲಿ ತಿಳಿಸಿದ್ದಾರೆ.





