ಕೆಲವೇ ದಿನಗಳಲ್ಲಿ ವಿಸ್ಟ್ರಾನ್ ಕಂಪೆನಿ ಪುನರ್ ಆರಂಭ: ಸಚಿವ ಜಗದೀಶ್ ಶೆಟ್ಟರ್

ಬೆಂಗಳೂರು, ಫೆ. 18: ಕೋಲಾರದ ವಿಸ್ಟ್ರಾನ್ ಕಂಪೆನಿಯು ಇನ್ನು ಕೆಲವೇ ದಿನಗಳಲ್ಲಿ ಉತ್ಪಾದನಾ ಕಾರ್ಯವನ್ನು ಪುನರಾರಂಭಿಸಲಿರುವುದು ಸಂತಸದ ವಿಷಯ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಇಂದಿಲ್ಲಿ ತಿಳಿಸಿದ್ದಾರೆ.
ಗುರುವಾರ ವಿಧಾನಸೌಧದಲ್ಲಿ ವಿಸ್ಟ್ರಾನ್ ಕಂಪೆನಿಯ ವ್ಯವಸ್ಥಾಪಕ ನಿರ್ದೇಶದ ಸುದಿಪ್ತೊ ಗುಪ್ತಾ ನೇತೃತ್ವದ ತಂಡದ ಜೊತೆ ಸಮಾಲೋಚನೆ ನಡೆಸಿದರು. ಕೋವಿಡ್ ಸಂಕಷ್ಟದ ಸಮಯದಲ್ಲಿ ರಾಜ್ಯ ಸರಕಾರದ ಅದರಲ್ಲೂ ಕೈಗಾರಿಕಾ ಇಲಾಖೆಯ ವತಿಯಿಂದ ದೊರೆತ ಸಹಾಯಕ್ಕೆ ಅವರು ಧನ್ಯವಾದಗಳನ್ನು ತಿಳಿಸಿದರು ಎಂದು ಶೆಟ್ಟರ್ ಹೇಳಿದರು.
ಇದೇ ವೇಳೆ ವಿಸ್ಟ್ರಾನ್ನಲ್ಲಿ ಮರು ನೇಮಕಾತಿಯನ್ನು ಪ್ರಾರಂಭಿಸಲಾಗಿದೆ. ಅಲ್ಲದೆ ಕಂಪೆನಿಯಲ್ಲಿ ಉತ್ಪಾದನೆಗೆ ಬೇಕಾಗಿರುವ ಎಲ್ಲ ರೀತಿಯ ತಯಾರಿಗಳು ನಡೆದಿದ್ದು, ಉತ್ಪಾದನಾ ಕಾರ್ಯ ಸದ್ಯದಲ್ಲೇ ಪುನರಾರಂಭವಾಗಲಿದೆ ಎಂದು ಗುಪ್ತ ತಿಳಿಸಿದ್ದಾರೆ ಎಂದರು.
ವಿಸ್ಟ್ರಾನ್ ಕಂಪೆನಿಯಲ್ಲಿನ ಘಟನೆ ನಡೆದಿದ್ದು ಬಹಳ ವಿಷಾದನೀಯ. ಆದರೆ, ಕೈಗಾರಿಕಾ ಸ್ನೇಹಿ ರಾಜ್ಯವಾಗಿರುವ ಕರ್ನಾಟಕ ರಾಜ್ಯ ಮೊದಲಿನಿಂದಲೂ ಕೈಗಾರಿಕೆಗಳಿಗೆ ಪೂರಕ ವಾತಾವರಣವನ್ನು ನಿರ್ಮಿಸಲು ಶ್ರಮಿಸುತ್ತಿದೆ. ಆ ಘಟನೆಯ ನಂತರ ಮರು ನೇಮಕಾತಿ ಪ್ರಕ್ರಿಯೆಯನ್ನು ಪ್ರಾರಂಭಗೊಳಿಸಿರುವುದು. ಉತ್ಪಾದನೆ ಪುನರಾರಂಭಕ್ಕೆ ಸಿದ್ಧತೆ ನಡೆಸಿರುವುದು ಸಂತಸದ ವಿಷಯವಾಗಿದೆ. ರಾಜ್ಯ ಸರಕಾರ ಹಾಗೂ ಕೈಗಾರಿಕಾ ಇಲಾಖೆಯ ವತಿಯಿಂದ ಎಲ್ಲ ಸಹಕಾರವನ್ನು ಮುಂದುವರೆಸಲಾಗುವುದು ಎಂದರು. ಅಲ್ಲದೆ, ರಾಜ್ಯದ ಇತರೆ ಜಿಲ್ಲೆಗಳಲ್ಲೂ ಉದ್ಯೋಗ ನೇಮಕಾತಿ ಮಾಡಿಕೊಳ್ಳಬೇಕು ಎಂದು ಜಗದೀಶ್ ಶೆಟ್ಟರ್ ಇದೇ ವೇಳೆ ಸಲಹೆ ನೀಡಿದರು.
ಸಭೆಯಲ್ಲಿ ಸರಕಾರದ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ, ಕೈಗಾರಿಕಾಭಿವೃದ್ದಿ ಆಯುಕ್ತೆ ಗುಂಜನ್ ಕೃಷ್ಣ ಹಾಗೂ ವಿಸ್ಟ್ರಾನ್ ಕಂಪೆನಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.







