‘ಮಾದಕ ವ್ಯಸನದಿಂದ ಯುವ ಸಮುದಾಯ ದೂರವಿರಲಿ’

ಮಂಗಳೂರು, ಫೆ.18: ಸಮಾಜದಲ್ಲಿ ಯುವಕ-ಯುವತಿಯರು ಮಾದಕ ವ್ಯಸನದ ಕಡೆಗೆ ಆಸಕ್ತಿ ತೋರುತ್ತಿದ್ದಾರೆ. ಇದರ ಬಗ್ಗೆ ಪೋಷಕರು ಹಾಗೂ ಶಿಕ್ಷಕರು ಗಮನಹರಿಸಬೇಕಾಗಿದೆ ಎಂದು ಪೊಲೀಸ್ ಅಧಿಕಾರಿ ಶ್ರೀಲತಾ ತಿಳಿಸಿದ್ದಾರೆ.
ನಗರದ ರಥಬೀದಿ ಮಂಗಳೂರು ಡಾ.ಪಿ.ದಯಾನಂದ ಪೈ- ಪಿ.ಸತೀಶ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಮತ್ತು ಮಾದಕ ವಸ್ತು ಅಪರಾಧ ಆರಕ್ಷಕ ಠಾಣೆ ಪಾಂಡೇಶ್ವರ ಸಹಯೋಗದೊಂದಿಗೆ ಮಾದಕ ವ್ಯಸನದ ದುಷ್ಪರಿಣಾಮ ಮತ್ತು ಕಾನೂನು ಸುರಕ್ಷತಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಯುವ ಸಮುದಾಯ ಬದುಕನ್ನು ದುರ್ವ್ಯಸನಗಳಿಂದ ದೂರವಿಟ್ಟು ಬದುಕು ಹಸನಾಗುವಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ. ಮಾದಕ ವ್ಯಸನದಿಂದಾಗುವ ದುಷ್ಪರಿಣಾಮ ಹಾಗೂ ಅದರ ಕಾನೂನಿನ ಬಗ್ಗೆ ಅರಿವು ಮೂಡಿಸಿದರು. ರಸ್ತೆ ಸುರಕ್ಷತೆ ಹಾಗೂ ಸೈಬರ್ ಅಪರಾಧದ ಬಗ್ಗೆ ಮಾಹಿತಿ ನೀಡಿದರು.
ಕಾಲೇಜಿನ ಪ್ರಾಂಶುಪಾಲ ಪ್ರೊ.ರಾಜಶೇಖರ ಹೆಬ್ಬಾರ್ ಸಿ. ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿಗಳಾದ ಪ್ರೊ.ತ್ರಿಶಾಂತ್ ಕುಮಾರ್, ಡಾ.ಶೇಷಪ್ಪ ಅಮೀನ್, ಪ್ರೊ.ಅರುಣ ಕುಮಾರಿ ಮತ್ತು ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂ ಸೇವಕರು ಭಾಗವಹಿಸಿದ್ದರು.







