ವ್ಯಾಪಾರ-ಬಂಡವಾಳ ಆಕರ್ಷಣೆಗೆ ಥೈಲ್ಯಾಂಡ್ ದೇಶದ ಜೊತೆ ಒಡಂಬಡಿಕೆ: ಸಚಿವ ಜಗದೀಶ ಶೆಟ್ಟರ್
ಚೆನ್ನೈನ ರಾಯಲ್ ಥಾಯ್ ಕೌನ್ಸಲ್ ಜೆನೆರಲ್ ನೇತೃತ್ವದ ನಿಯೋಗ ಭೇಟಿ

ಬೆಂಗಳೂರು, ಫೆ. 19: ‘ವ್ಯಾಪಾರ ಹಾಗೂ ಬಂಡವಾಳ ಹೂಡಿಕೆ ಸಂಬಂಧ ಥೈಲ್ಯಾಂಡ್ ವಾಣಿಜ್ಯ ಇಲಾಖೆಯ ಜೊತೆ ಶೀಘ್ರದಲ್ಲೇ ಒಡಂಬಡಿಕೆಗೆ ಸಹಿ ಹಾಕಲಾಗುವುದು' ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಇಂದಿಲ್ಲಿ ತಿಳಿಸಿದ್ದಾರೆ.
ಶುಕ್ರವಾರ ವಿಧಾನಸೌಧದಲ್ಲಿ ತಮ್ಮನ್ನು ಭೇಟಿಯಾದ ಚೆನ್ನೈನಲ್ಲಿರುವ ರಾಯಲ್ ಥಾಯ್ ಕೌನ್ಸಲ್ ಜನರಲ್ ನೇತೃತ್ವದ ನಿಯೋಗಕ್ಕೆ ಈ ಭರವಸೆಯನ್ನು ನೀಡಿ ಮಾತನಾಡಿದ ಅವರು, ಕರ್ನಾಟಕ ರಾಜ್ಯ ಕೈಗಾರಿಕಾ ಸ್ನೇಹಿ ರಾಜ್ಯವಾಗಿದೆ. ರಾಜ್ಯದಲ್ಲಿ ಹೂಡಿಕೆಗೆ ವ್ಯಾಪಕವಾದ ಅವಕಾಶಗಳಿದ್ದು, ಹೂಡಿಕೆಗೆ ಥೈಲ್ಯಾಂಡಿನ ಹೂಡಿಕೆದಾರರಿಗೆ ರಾಜ್ಯದಲ್ಲಿರುವ ಅವಕಾಶಗಳ ಬಗ್ಗೆ ತಿಳಿಸಿಕೊಡುವಂತೆ ಸಚಿವರು ಕೌನ್ಸಲ್ ಜನರಲ್ ಆಫ್ ಥಾಯ್ ಅವರಿಗೆ ತಿಳಿಸಿದರು.
ಥೈಲ್ಯಾಂಡ್ ಹಾಗೂ ಕರ್ನಾಟಕದ ನಡುವೆ ಬಂಡವಾಳ ಹೂಡಿಕೆ, ವ್ಯಾಪಾರ ಮತ್ತು ವಾಣಿಜ್ಯ ವಿನಿಮಯಕ್ಕೆ ಹಲವಾರು ಅವಕಾಶಗಳಿವೆ. ಇವುಗಳಿಗೆ ಸಂಬಂಧಿಸಿದಂತೆ ಒಡಂಬಡಿಕೆ ಮಾಡಿಕೊಳ್ಳುವಂತೆ ಥಾಯ್ ನಿಯೋಗದ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಜಗದೀಶ್ ಶೆಟ್ಟರ್, ಒಡಂಬಡಿಕೆಯನ್ನು ಪರಿಶೀಲಿಸಿ ಶೀಘ್ರ ದಿನಾಂಕ ನಿಗದಿಪಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕೌನ್ಸಲ್ ಜನರಲ್ ನಿಟಿರೋಜೆ ಪೋನೇಪ್ರಾಸೆರ್ಟ್ ಮಾತನಾಡಿ, ಐಟಿ, ಫುಡ್ಪಾರ್ಕ್ ಗಳ ನಿರ್ಮಾಣ, ಶೈಕ್ಷಣಿಕ ಸಂಸ್ಥೆಗಳ ವಿನಿಮಯ, ಸಂಶೋಧನಾ ಕೇಂದ್ರಗಳ ಸ್ಥಾಪನೆ, ಇನ್ಕ್ಯೂಬೇಟರ್ಸ್ ಗಳ ನಿರ್ಮಾಣ ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ಬಂಡವಾಳ ಹೂಡಿಕೆ ಹಾಗೂ ವ್ಯಾಪಾರ ಮತ್ತು ವಾಣಿಜ್ಯ ವಿನಿಮಯ ಮಾಡಬಹುದಾಗಿದೆ ಎಂದು ಹೇಳಿದರು.
ಸಭೆಯಲ್ಲಿ ಅಪರ ಮುಖ್ಯ ಕಾರ್ಯದರ್ಶಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಗೌರವ್ ಗುಪ್ತಾ, ಉದ್ಯೋಗ ಮಿತ್ರ ವ್ಯವಸ್ಥಾಪಕ ನಿರ್ದೇಶಕ ರೇವಣ್ಣ ಗೌಡ ಹಾಗೂ ಕೌನ್ಸಲೇಟ್ನ ಇತರ ಅಧಿಕಾರಿಗಳು ಪಾಲ್ಗೊಂಡಿದ್ದರು.







