ಉಳ್ಳಾಲದಲ್ಲಿ ನಡೆದ ಪಿಎಫ್ಐ ಯುನಿಟಿ ಮಾರ್ಚ್ ವಿರುದ್ಧ ಪ್ರಕರಣ ದಾಖಲು

ಫೈಲ್ ಫೋಟೊ
ಮಂಗಳೂರು : ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಸಂಸ್ಥಾಪನಾ ದಿನದ ಅಂಗವಾಗಿ ಉಳ್ಳಾಲದಲ್ಲಿ ಪಿಎಫ್ಐ ಕಾರ್ಯಕರ್ತರು ನಡೆಸಿದ್ದ ಯುನಿಟಿ ಮಾರ್ಚ್ನಲ್ಲಿ ಕೋಮು ಭಾವನೆ ಕೆರಳಿಸುವ ಹುನ್ನಾರ, ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಮಾಡಿದ್ದಾರೆ ಎಂಬ ಆರೋಪದಲ್ಲಿ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಎರಡು ಪ್ರಕರಣಗಳು ದಾಖಲಾಗಿವೆ.
ಕಾರ್ಯಕ್ರಮದ ದಿನ 400ಕ್ಕೂ ಅಧಿಕ ಸಮವಸ್ತ್ರಧಾರಿ ತಂಡ ಪೊಲೀಸರ ಸೂಚನೆಯನ್ನು ಪಾಲಿಸದೆ ಕರ್ತವ್ಯಕ್ಕೆ ಅಡ್ಡಿಪಡಿಸಿ ಸಾರ್ವಜನಿಕರಿಗೂ ತೊಂದರೆ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಅಲ್ಲದೆ ಮಾರ್ಚ್ ವೇಳೆ ಆರ್ಎಸ್ಎಸ್ ಹಾಗೂ ಬಾಬರಿ ಮಸೀದಿ ತೀರ್ಪಿನ ವಿರುದ್ಧ ಘೋಷಣೆ, ಪರವಾನಿಗೆ ಇಲ್ಲದೇ ಮೆರವಣಿಗೆ ನಡೆಸಿ ಅಶಾಂತಿಯ ವಾತಾವರಣ ಸೃಷ್ಟಿಸಲು ಪ್ರಯತ್ನ ಮಾಡಿದ್ದಾರೆ ಎನ್ನುವ ಆರೋಪದಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಕಾರ್ಪೊರೇಟರ್ ಮುನೀಬ್ ಬೆಂಗ್ರೆ, ಅಬ್ದುಲ್ ಖಾದರ್ ಕುಳಾಯಿ, ಶಾಹಿದ್ ದೇರಳಕಟ್ಟೆ, ಸಫ್ವಾನ್, ಇಮ್ತಿಯಾಝ್ ಕೋಟೆಪುರ, ಖಲೀಲ್ ಕಡಪ್ಪರ, ರಮೀಝ್ ಕೋಡಿ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.
'ತಾರತಮ್ಯ ಎಸಗಿದ್ದಾರೆ'
ಪಿಎಫ್ಐ ಸಂಸ್ಥಾಪನಾ ದಿನ ಮಾಡಿದ ಯುನಿಟಿ ಮಾರ್ಚ್ ಕಾರ್ಯಕ್ರಮಕ್ಕೆ ಪೊಲೀಸರು ಪರವಾನಿಗೆ ಕೊಡದೇ ತಾರತಮ್ಯ ಎಸಗಿದ್ದಾರೆ. ಕೆಲವು ದಿನಗಳ ಹಿಂದೆ ತೊಕ್ಕೊಟ್ಟುವಿನಲ್ಲಿ ಹಿಂದುತ್ವ ಪರ ಸಂಘಟನೆಗಳು ಕಾರ್ಯಕ್ರಮ ನಡೆಸಿ ಉದ್ರೇಕಕಾರಿ ಭಾಷಣ ಮಾಡಿದ್ದರು. ಈ ಬಗ್ಗೆ ದೂರು ನೀಡಿದರೂ ಕ್ರಮ ಕೈಗೊಳ್ಳಲಿಲ್ಲ. ಆದರೆ ನಾವು ಮಾಡುವ ಕಾರ್ಯಕ್ರಮಕ್ಕೆ ಅಡಚಣೆ ಏನಿದೆ ? ನಮಗೆ ಯಾಕಾಗಿ ಪರವಾನಿಗೆ ನೀಡಿಲ್ಲ ? ನಮಗೆ ಕಾರ್ಯಕ್ರಮ ಮಾಡಲು ಸಂವಿಧಾನಾತ್ಮಕವಾಗಿ ಅವಕಾಶ ನೀಡದಿರಲು ಕಾರಣ ಏನು ? ಇಲಾಖೆ ಏನು ತೀರ್ಮಾನ ತೆಗೆದು ಕೊಂಡಿದೆಯೋ ಅದರ ವಿರುದ್ಧ ಕಾನೂನಾತ್ಮಕ ಹೋರಾಟ ಮಾಡುತ್ತೇವೆ
- ಇಜಾಝ್ ಅಹ್ಮದ್, ಜಿಲ್ಲಾಧ್ಯಕ್ಷರು, ಪಿಎಫ್ಐ







