ಲಾಲೂ ಪ್ರಸಾದ್ ಜಾಮೀನು ಅರ್ಜಿ ತಿರಸ್ಕೃತ

ರಾಂಚಿ, ಫೆ.19: ಮೇವು ಹಗರಣಕ್ಕೆ ಸಂಬಂಧಿಸಿ ದಾಖಲಾಗಿರುವ ಪ್ರಕರಣದಲ್ಲಿ ಜಾಮೀನು ಕೋರಿ ಆರ್ಜೆಡಿ ವರಿಷ್ಠ ಲಾಲೂಪ್ರಸಾದ್ ಯಾದವ್ ಸಲ್ಲಿಸಿದ್ದ ಅರ್ಜಿಯನ್ನು ಜಾರ್ಖಂಡ್ ಹೈಕೋರ್ಟ್ ಶುಕ್ರವಾರ ತಿರಸ್ಕರಿಸಿದೆ. ಮೇವು ಹಗರಣಕ್ಕೆ ಸಂಬಂಧಿಸಿ ಲಾಲೂಪ್ರಸಾದ್ ಯಾದವ್ ವಿರುದ್ಧ ದಾಖಲಾಗಿರುವ 4 ಪ್ರಕರಣದಲ್ಲಿ ಮೂರರಲ್ಲಿ ದೋಷಿಯೆಂದು ಸಾಬೀತಾಗಿದ್ದು ಈಗಾಗಲೇ ಜಾಮೀನು ಲಭಿಸಿದೆ.
ಆದರೆ 4ನೇ ಹಗರಣವಾದ ದುಮಕ ಸರಕಾರಿ ಖಜಾನೆಯಿಂದ ಅಕ್ರಮವಾಗಿ 3.13 ಕೋಟಿ ರೂ. ಹಣ ಪಡೆದಿರುವ ಪ್ರಕರಣದಲ್ಲಿ ಜಾಮೀನು ಮಂಜೂರುಗೊಳಿಸಲು ನ್ಯಾಯಮೂರ್ತಿ ಅಪರೇಶ್ ಕುಮಾರ್ ನಿರಾಕರಿಸಿದ್ದಾರೆ. ಮೇವು ಹಗರಣದಲ್ಲಿ ಲಾಲೂಪ್ರಸಾದ್ಗೆ ವಿಧಿಸಲಾಗಿರುವ ಶಿಕ್ಷೆಯ ಅವಧಿಯಲ್ಲಿ ಅರ್ಧಾಂಶದಷ್ಟನ್ನು ಪೂರ್ಣಗೊಳಿಸಬೇಕಿದ್ದರೆ ಅವರು ಇನ್ನೂ ಎರಡು ತಿಂಗಳು ಜೈಲಿನಲ್ಲಿ ಇರಬೇಕಾಗುತ್ತದೆ. ಆದ್ದರಿಂದ 2 ತಿಂಗಳ ಬಳಿಕ ಜಾಮೀನು ಕೋರಿ ಹೊಸ ಅರ್ಜಿ ಸಲ್ಲಿಸುವಂತೆ ನ್ಯಾಯಾಧೀಶರು ಸೂಚಿಸಿದ್ದಾರೆ. ಅನಾರೋಗ್ಯಕ್ಕೆ ಒಳಗಾಗಿರುವ ಲಾಲೂಪ್ರಸಾದ್ ಈಗ ದಿಲ್ಲಿ ಎಐಐಎಂಎಸ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.





