ಚಿಕಿತ್ಸಾ ಕ್ಷೇತ್ರದಲ್ಲಿ ಹೆಚ್ಚು ಸಂಶೋಧನೆಗಳು ನಡೆಯಲಿ: ಶಾಸಕ ಡಾ.ಭರತ್ ಶೆಟ್ಟಿ
ಕೆವಿಜಿ ಆಯುರ್ವೇದ ಕಾಲೇಜಿನಲ್ಲಿ ರಾಷ್ಟ್ರಮಟ್ಟದ ವಿಚಾರ ಸಂಕಿರಣಕ್ಕೆ ಚಾಲನೆ

ಸುಳ್ಯ: ಆಯುರ್ವೇದ ಚಿಕಿತ್ಸಾ ಕ್ಷೇತ್ರದಲ್ಲಿ ಇಂದು ಸಾಕಷ್ಟು ಸಂಶೋಧನೆಗಳು ನಡೆಯುತ್ತಿವೆ. ಈ ಕ್ಷೇತ್ರದಲ್ಲಿ ಇನ್ನಷ್ಟು ಸಂಶೋಧನೆಗಳು ನಡೆಯಬೇಕಾಗಿದೆ. ಆಯುರ್ವೇದಕ್ಕೆ ಉತ್ತಮ ಭವಿಷ್ಯ ಇದೆ ಎಂದು ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಹಾಗು ಡೆಂಟಲ್ ಕೌನ್ಸಿಲ್ ಆಫ್ ಇಂಡಿಯಾದ ಅಧ್ಯಕ್ಷ ಡಾ.ವೈ.ಭರತ್ ಶೆಟ್ಟಿ ಹೇಳಿದ್ದಾರೆ.
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವ ವಿದ್ಯಾನಿಲಯದ ಬೆಳ್ಳಿ ಹಬ್ಬ ಆಚರಣೆಯ ಪ್ರಯುಕ್ತ ಕೆ.ವಿ.ಜಿ ಆಯುರ್ವೇದ ಕಾಲೇಜಿನ ಸಭಾಭವನದಲ್ಲಿ ಅರಂಭಗೊಂಡ ಎರಡು ದಿನಗಳ ರಾಷ್ಟ್ರ ಮಟ್ಟದ ವಿಚಾರ ಸಂಕಿರಣ 'ಸ್ಪಂದನ' ಉದ್ಘಾಟಿಸಿ ಅವರು ಮಾತನಾಡಿದರು.
ಆಯುರ್ವೇದ ಕ್ಷೇತ್ರಕ್ಕೆ ಇಂದು ದೊಡ್ಡ ಮಹತ್ವ ಇದೆ. ಸರಕಾರಗಳು ಕೂಡ ಆಯುರ್ವೇದದ ಬೆಳವಣಿಗೆಗೆ ನಿರಂತರ ಪ್ರಯತ್ನ ನಡೆಸುತಿದೆ. ರೋಗಗಳು ಬಂದರೆ ಗುಣಮುಖರಾಗಲು ಆಧುನಿಕ ಚಿಕಿತ್ಸಾ ಪದ್ಧತಿ ಸಯಾಯಕ. ಆದರೆ ಆಯುರ್ವೇದವು ರೋಗಗಳು ಬರದಂತೆ ತಡೆಯುತ್ತದೆ.ಕೋವಿಡ್ ಸಂದರ್ಭದಲ್ಲಿ ಆಯುರ್ವೇದದ ಮಹತ್ವ ಪ್ರತಿಯೊಬ್ಬರಿಗೂ ತಿಳಿದಿದೆ. ಎಂದು ಅವರು ಹೇಳಿದರು.
ಅಕಾಡೆಮಿ ಆಪ್ ಲಿಬರಲ್ ಎಜ್ಯುಕೇಶನ್ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ ಅಧ್ಯಕ್ಷತೆ ವಹಿಸಿದ್ದರು. ಮೈಸೂರಿನ ಕರ್ನಾಟಕ ಪೊಲೀಸ್ ಅಕಾಡೆಮಿಯ ಉಪ ನಿರ್ದೇಶಕಿ ಡಾ.ಸುಮನ್ ಡಿ.ಪನ್ನೇಕರ್ ರಾಜೀವ್ ಗಾಂಧಿ ವಿವಿಯ ಸಿಂಡಿಕೇಟ್ ಸದಸ್ಯ ಡಾ.ಕಿರಣ್ ಕುಮಾರ್ ಎನ್, ಸೆಂಟರ್ ಕೌನ್ಸಿಲ್ ಆಫ್ ಇಂಡಿಯನ್ ಮೆಡಿಸಿನ್ ನ ಕಾರ್ಯಕಾರಿ ಸಮಿತಿ ಮಾಜಿ ಸದಸ್ಯ ಡಾ.ಆನಂದ ಕ್ರಿಶಾಲ್, ಇನ್ಸ್ಟಿಟ್ಯೂಟ್ ಆಫ್ ಓರಿಯಂಟಲ್ ಮೆಡಿಸಿನ್ ಆಫ್ ಫೀಪಲ್ಸ್ ಫ್ರಂಡ್ ಶಿಫ್ ಯೂನಿವರ್ಸಿಟಿ ಮೋಸ್ಕೋ ರಷ್ಯ ಇಲ್ಲಿನ ಪ್ರೊಫೆಸರ್ ಡಾ.ಕೆ.ವಿ.ದಿಲೀಪ್ ಕುಮಾರ್, ಕೆ.ವಿ.ಜಿ ಮೆಡಿಕಲ್ ಕಾಲೇಜಿನ ನಿರ್ದೇಶಕರಾದ ಡಾ.ಐಶ್ವರ್ಯ, ಡಾ.ಗೌತಮ್, ಮಣಿಪಾಲದ ಮುನಿಯಾಲ್ ಇನ್ಸ್ಟಿಟ್ಯೂಟ್ ಆಫ್ ಆಯುರ್ವೇದ ಮೆಡಿಕಲ್ ಕಾಲೇಜಿನ ಪ್ರಿನ್ಸಿಪಾಲ್ ಡಾ.ಸತ್ಯನಾರಾಯಣ ಭಟ್ ಮುಖ್ಯ ಅತಿಥಿಗಳಾಗಿದ್ದರು.
ಕೆ.ವಿ.ಜಿ ಆಯುರ್ವೇದ ಕಾಲೇಜಿನ ಪ್ರಿನ್ಸಿಪಾಲ್ ಡಾ.ಲೀಲಾಧರ್ ಡಿ.ವಿ ಸ್ವಾಗತಿಸಿ ಪ್ರಸ್ತಾವನೆಗೈದರು. ಡಾ.ಪುರುಷೋತ್ತಮ ಕೆ.ಜಿ.ವಂದಿಸಿದರು. ಅನುಷಾ ಪುರೋಹಿತ್ ಮತ್ತು ಸೂರ್ಯನ ಗುಪ್ತ ಕಾರ್ಯಕ್ರಮ ನಿರೂಪಿಸಿದರು.







