ಬಾಬುಲಾಲ್ ಚೌರಾಸಿಯಾ ಮತ್ತೆ ಕಾಂಗ್ರೆಸ್ಗೆ
ಹೊಸದಿಲ್ಲಿ, ಫೆ. 25: ಮಹಾತ್ಮಾ ಗಾಂಧಿ ಅವರ ಹಂತಕ ನಾಥುರಾಮ್ ಗೋಡ್ಸೆ ಸಂದೇಶವನ್ನು ಜನರಿಗೆ ಹಂಚುವುದಾಗಿ ಪ್ರತಿಜ್ಞೆ ಮಾಡಿದ್ದ ರಾಜಕಾರಣಿಯೋರ್ವರು ಸ್ಥಳೀಯ ಸಂಸ್ಥೆಗಳ ಚುನಾವಣೆಯ ಮುನ್ನ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ಗೆ ಸೇರಿದ್ದಾರೆ.
ಪುರಸಭೆಯ ಮಾಜಿ ಕಾರ್ಪೋರೇಟರ್ ಬಾಬುಲಾಲ್ ಚೌರಾಸಿಯಾ ಅವರನ್ನು ರಾಜ್ಯ ಕಾಂಗ್ರೆಸ್ ವರಿಷ್ಠ ಹಾಗೂ ಮಾಜಿ ಮುಖ್ಯಮಂತ್ರಿ ಕಮಲ್ನಾಥ್ ಪಕ್ಷಕ್ಕೆ ಸೇರಿಸಿಕೊಂಡರು. ಬಾಬುಲಾಲ್ ಚೌರಾಸಿಯಾ ಅವರಿಗೆ ಕಮಲ್ನಾಥ್ ಅವರು ಸಂಭ್ರಮದ ಸ್ವಾಗತ ನೀಡುತ್ತಿರುವ ಫೋಟೊವನ್ನು ಮಧ್ಯಪ್ರದೇಶ ಕಾಂಗ್ರೆಸ್ ನಿನ್ನೆ ಸಂಜೆ ಟ್ವೀಟ್ ಮಾಡಿದೆ. ಬಾಬುಲಾಲ್ ಚೌರಾಸಿಯಾ ಈ ಹಿಂದೆ ಕಾಂಗ್ರೆಸ್ ತ್ಯಜಿಸಿದ್ದರು. ಅಲ್ಲದೆ, ಸ್ಥಳೀಯಾಡಳಿತ ಚುನಾವಣೆಯಲ್ಲಿ ಹಿಂದೂ ಮಹಾಸಭಾದಿಂದ ಸ್ಪರ್ಧಿಸಿ ಜಯ ಗಳಿಸಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ಬಬುಲಾಲ್ ಚೌರಾಸಿಯಾ, ತನ್ನನ್ನು ಗೋಡ್ಸೆಯನ್ನು ಗೌರವಿಸುವಂತೆ ಒತ್ತಾಯಿಸಲಾಗಿತ್ತು. ಈ ಹಿಂದೆ ನಾನು ಕಾಂಗ್ರೆಸ್ನಲ್ಲಿದ್ದೆ. ಈಗ ನನ್ನ ಕುಟುಂಬ (ಕಾಂಗ್ರೆಸ್)ವನ್ನು ಮತ್ತೆ ಸೇರಿದ್ದೇನೆ ಎಂದಿದ್ದಾರೆ.





