ವಿದ್ಯಾರ್ಥಿ ವೇತನಕ್ಕೆ ಆದಾಯ ಮಿತಿ: ವೆಲ್ಫೇರ್ ಪಾರ್ಟಿ ವಿರೋಧ
ಬೆಂಗಳೂರು, ಫೆ.25: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಸರಕಾರ ವಿದ್ಯಾರ್ಥಿ ವೇತನಕ್ಕೆ 2.5 ಲಕ್ಷ ರೂ. ಆದಾಯ ಮಿತಿ ಹಾಕಿರುವುದಕ್ಕೆ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ವಿರೋಧ ವ್ಯಕ್ತಪಡಿಸಿದೆ.
ಈ ಬಗ್ಗೆ ಪ್ರಕಟಣೆ ನೀಡಿರುವ ವೆಲ್ಫೇರ್ ಪಾರ್ಟಿ ರಾಜ್ಯಾಧ್ಯಕ್ಷ ತಾಹಿರ್ ಹುಸೇನ್, ಆದಾಯ ಮಿತಿಯ ಕಾರಣ ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನ ಸೇರಿದಂತೆ ಹಲವು ಸೌಕರ್ಯಗಳಿಂದ ವಂಚಿತರಾಗಲಿದ್ದಾರೆ. ಸಾಮಾಜಿಕ, ಆರ್ಥಿಕ ಹಿಂದುಳಿಯುವಿಕೆ ಹಾಗೂ ಜೀವನ ನಿರ್ವಹಣೆ ವೆಚ್ಚವನ್ನು ವಿದ್ಯಾರ್ಥಿ ವೇತನಕ್ಕೆ ಪರಿಗಣನೆಗೆ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಅಲ್ಪಸಂಖ್ಯಾತರಿಗೆ ನೀಡುತ್ತಿದ್ದ ಫೆಲೋಶಿಪ್ ಹಣದಲ್ಲಿ ಶೇ.70ರಷ್ಟು ಕಡಿತ ಮಾಡಿದ ಬೆನ್ನಲ್ಲೆ, ವಿದ್ಯಾರ್ಥಿ ವೇತನಕ್ಕೆ ಆದಾಯ ಮಿತಿ ಹಾಕಲಾಗಿದೆ. ರಾಜ್ಯದಲ್ಲಿ ಕಳೆದ ಒಂದು ವರ್ಷದಿಂದ ಕೊರೋನ ಅಬ್ಬರಕ್ಕೆ ಜನರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಪರದಾಡುತ್ತಿದ್ದು ಇನ್ನೂವರೆಗೂ ಸರಕಾರ ಸರಿಯಾದ ರೀತಿಯಲ್ಲಿ ಜನರಿಗೆ ಸಹಾಯ ಮಾಡಿಲ್ಲ. ಇಂತಹ ಸಂಧರ್ಭದಲ್ಲಿ ಸರಕಾರ ಶಾಸಕರಿಗೆ, ಸಂಸದರಿಗೆ ಕಾರು ಖರೀದಿಗಾಗಿ ಈ ಹಿಂದೆ ನೀಡುತ್ತಿದ್ದ ಮೊತ್ತವನ್ನು 1 ಲಕ್ಷ ರೂ.ಏರಿಕೆ ಮಾಡಿದ್ದು ದುರದೃಷ್ಟಕರ. 28 ಸಂಸದರು 32 ಸಚಿವರನ್ನೊಳಗೊಂಡ ಒಟ್ಟು 60 ಕಾರು ಖರೀದಿಗೆ 13.80 ಕೋಟಿ ರೂ.ಮೊತ್ತವಾಗಿದೆ ಎಂದು ಅವರು ಹೇಳಿದ್ದಾರೆ.
ಏಕೆಂದರೆ ಒಂದು ವರ್ಷದಿಂದ ಸಾರಿಗೆ ನೌಕರರಿಗೆ, ಶಾಲಾ ಶಿಕ್ಷಕರಿಗೆ, ಬಿಸಿ ಊಟ ತಯಾರಿಸುವ ತಾಯಂದಿರಿಗೆ ಜನಸಾಮಾನ್ಯರಿಗೆ ಇನ್ನೂ ಹಲವಾರು ಸರಕಾರದಿಂದ ಬರಬೆಕಾದ ಹಣವನ್ನು ಸರಕಾರ ನೀಡದೆ ಜನರ ಆರ್ಥಿಕ ಪರಿಸ್ಥಿತಿಯನ್ನು ಮತ್ತಷ್ಟು ಪಾತಾಳಕ್ಕೆ ತಳ್ಳಿದೆ ಎಂದು ತಾಹೀರ್ ಹುಸೇನ್ ದೂರಿದ್ದಾರೆ.
ಜನರ ಆರ್ಥಿಕ ಸಂಕಷ್ಟಕ್ಕೆ ಪರಿಹಾರ ನೀಡಲು ಮುಂದಾಗದೆ ಸರಕಾರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ ಅಂತ ಕಾರಣ ನೀಡಿ ತಮಗೆ ಬೇಕಾದ ರೀತಿಯಲ್ಲಿ ಸವಲತ್ತುಗಳು ಪಡೆದುಕೊಳ್ಳುತ್ತಿರುವುದು ಜನವಿರೋಧಿ ಸರಕಾರದ ನಡೆಯಾಗಿದೆ. ಎಷ್ಟೋ ಕುಟುಂಬಗಳು ಈಗಲೂ ಒಪ್ಪೊತ್ತಿನ ಊಟಕ್ಕೂ ಪರದಾಡುವ ಪರಿಸ್ಥಿತಿಯಲ್ಲಿದೆ. ಆದಾಯ ಮಿತಿಯನ್ನು ಕೂಡಲೇ ಕೈಬಿಡದಿದ್ದರೆ ಹೋರಾಟ ಮಾಡಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ಎಚ್ಚರಿಸಿದ್ದಾರೆ.







