ಪೊಲೀಸರ ಸೋಗಿನಲ್ಲಿ ಕರೆ ಮಾಡಿ 1 ಲಕ್ಷ ರೂ. ವಂಚನೆ

ಬೆಂಗಳೂರು, ಫೆ.27: ವೈವಾಹಿಕ ಜಾಲತಾಣ ಮ್ಯಾಟ್ರಿಮೋನಿಯಲ್ಲಿ ವಧುವನ್ನು ಹುಡುಕಲು ಹೊರಟ ಯುವಕನೊಬ್ಬನನ್ನು ಗುರಿಯಾಗಿಸಿಕೊಂಡು ದುಷ್ಕರ್ಮಿಗಳು ಪೊಲೀಸರ ಸೋಗಿನಲ್ಲಿ ಕರೆ ಮಾಡಿ 1 ಲಕ್ಷ ರೂ. ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ನಗರದ ಖಾಸಗಿ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿರುವ ಶ್ರೀಕೃಷ್ಣ ನಗರದ ವಿನಾಯಕಭಟ್ ಎಂಬುವರು ಮ್ಯಾಟ್ರಿಮೋನಿ ಜಾಲತಾಣದಲ್ಲಿ ಖಾತೆ ಹೊಂದಿದ್ದರು. ಅದರಲ್ಲಿ ಕೆಲವೊಂದು ಯುವತಿಯರಿಗೆ ವಿವಾಹ ಸಂಬಂಧ ಮನವಿ ಸಲ್ಲಿಸಿದ್ದರು ಎನ್ನಲಾಗಿದೆ.
ಫೆ.17ರಂದು ವಿನಾಯಕ್ಗೆ ಅಪರಿಚಿತರು ಕರೆ ಮಾಡಿ ನಾವು ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದು, ನೀವು ಮ್ಯಾಟ್ರಿಮೋನಿ ವೆಬ್ಸೈಟ್ನಲ್ಲಿ ಮನವಿ ಕಳಿಸಿದ ಯುವತಿಯೊಬ್ಬಳು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ನೀವು ನಮ್ಮ ಬ್ಯಾಂಕ್ ಖಾತೆಗೆ ಹಣ ಹಾಕಿದರೆ ಪ್ರಕರಣ ಮುಕ್ತಾಯಗೊಳಿಸುತ್ತೇವೆ ಎಂದು ಬೆದರಿಸಿದ್ದಾರೆ.
ಇದನ್ನು ನಂಬಿದ ವಿನಾಯಕ್ ಒಂದು ಕ್ಷಣ ಆತಂಕಗೊಂಡ ಹಂತ-ಹಂತವಾಗಿ ಅಪರಿಚಿತರು ಸೂಚಿಸಿದ ಬ್ಯಾಂಕ್ ಖಾತೆಗೆ 1 ಲಕ್ಷ ರೂ.ನ್ನು ಆನ್ಲೈನ್ ಮೂಲಕ ಜಮಾ ಮಾಡಿದ್ದರು. ಇದಾದ ಬಳಿಕ ಅಪರಿಚಿತರು ಫೋನ್ ಸಂಪರ್ಕಕ್ಕೆ ಸಿಕ್ಕಿರಲಿಲ್ಲ, ಈ ವೇಳೆ ವಂಚನೆ ಬೆಳಕಿಗೆ ಬಂದಿದೆ ಎನ್ನಲಾಗಿದೆ.
ಈ ಕುರಿತು ದಕ್ಷಿಣ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.





