"ಬ್ರಿಟಿಷರನ್ನು ಮರಳಿ ಕಳಿಸಿದಂತೆ, ಮೋದಿಯನ್ನು ನಾಗ್ಪುರಕ್ಕೆ ಕಳುಹಿಸುತ್ತೇವೆ": ರಾಹುಲ್ ಗಾಂಧಿ ಹೇಳಿಕೆ
"ಇದಕ್ಕಿಂತ ದೊಡ್ಡ ಶತ್ರುಗಳನ್ನು ನಾವು ಸೋಲಿಸಿದ್ದೇವೆ"
ಚೆನ್ನೈ: ತಮಿಳುನಾಡಿನಲ್ಲಿ ಚುನಾವಣೆಯ ದಿನಾಂಕ ಘೋಷಣೆಯಾದ ಬಳಿಕ ರಾಜಕೀಯ ಪಕ್ಷಗಳ ನಾಯಕರು ಪ್ರಚಾರದಲ್ಲಿ ಮಗ್ನರಾಗಿದ್ದಾರೆ. ಕಾಂಗ್ರೆಸ್ ಪಕ್ಷದ ಮುಖಂಡ ರಾಹುಲ್ ಗಾಂಧಿ ತಮಿಳುನಾಡು ಮತ್ತು ಕೇರಳದಲ್ಲಿ ಬೀಡು ಬಿಟ್ಟಿದ್ದಾರೆ. ಇದೀಗ ತಮಿಳುನಾಡಿನ ತಿರುನೆಲ್ವೇಲಿಯ ಸೈಂಟ್ ಕ್ಸೇವಿಯರ್ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ ರಾಹುಲ್ ಗಾಂಧಿ ಪ್ರಧಾನಿ ಮೋದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. "ಮೋದಿಗಿಂತ ಅತೀದೊಡ್ಡ ಶತ್ರುವನ್ನು ನಾವು ಸೋಲಿಸಿದ್ದೇವೆ. ಪ್ರೀತಿ ಮತ್ತು ಅಹಿಂಸೆಯ ಮಾರ್ಗದಲ್ಲಿ ಹಾಗೂ ಜನರ ಬೆಂಬಲದೊಂದಿಗೆ ಯಾರನ್ನೂ ಸೋಲಿಸಬಹುದು ಎಂದು ಅವರು ಹೇಳಿದರು.
"ನಾವು ಅಸಾಧಾರಣ ಶತ್ರುವಿನೊಂದಿಗೆ ಸೆಣಸಾಡುತ್ತಿದ್ದೇವೆ. ಹಣದ ಪ್ರಾಬಲ್ಯ ಹೊಂದಿರುವ ಶತ್ರುಗಳ ವಿರುದ್ಧ ನಾವು ಹೋರಾಡುತ್ತಿದ್ದೇವೆ. ವಿರೋಧ ಪಕ್ಷಗಳನ್ನು ಪುಡಿಗಟ್ಟಿಕೊಂಡು ಸಾಗುವ ಶತ್ರುಗಳ ವಿರುದ್ಧ ನಾವು ಹೋರಾಟ ಮಾಡುತ್ತಿದ್ದೇವೆ. ಇದಕ್ಕೂ ಮೊದಲು ನಾವು ಇದನ್ನು ಮಾಡಿ ತೋರಿಸಿದ್ದೆವು. ಈಗಿರುವ ಶತ್ರುವಿಗಿಂತ ದೊಡ್ಡ ಶತ್ರು (ಬ್ರಿಟಿಷರು)ಗಳನ್ನು ನಾವು ಸೋಲಿಸಿದ್ದೇವೆ" ಎಂದು ಹೇಳಿದರು.
ಮುಂದುವರಿದು ಮಾತನಾಡಿದ ಅವರು, "ಬ್ರಿಟಿಷ್ ಸಾಮ್ರಾಜ್ಯಕ್ಕೆ ಹೋಲಿಸಿದರೆ ನರೇಂದ್ರ ಮೋದಿ ಯಾರು? ಯಾರೂ ಅಲ್ಲ. ಈ ದೇಶದ ಜನರು ಬ್ರಿಟಿಷ್ ಸಾಮ್ರಾಜ್ಯವನ್ನು ಹಿಂದಕ್ಕೆ ಕಳುಹಿಸಿದರು ಮತ್ತು ಅದೇ ರೀತಿಯಲ್ಲಿ ನಾವು ನರೇಂದ್ರ ಮೋದಿಯವರನ್ನು ಮತ್ತೆ ನಾಗ್ಪುರಕ್ಕೆ ಕಳುಹಿಸುತ್ತೇವೆ (ಮಹಾರಾಷ್ಟ್ರದ ಆರ್ಎಸ್ಎಸ್ ಪ್ರಧಾನ ಕಚೇರಿ)" ಎಂದು ಅವರು ಹೇಳಿದರು.