2ಎ ಮೀಸಲಾತಿಗೆ ಪಟ್ಟು: ಎಂಟನೆ ದಿನಕ್ಕೆ ಕಾಲಿಟ್ಟ ಪಂಚಮಸಾಲಿ ಸತ್ಯಾಗ್ರಹ
ಧರಣಿಯಲ್ಲಿ ಭಜನೆ, ಸಂಗೀತ, ಭಾವಗೀತೆ

ಬೆಂಗಳೂರು, ಫೆ. 28: ಪಂಚಮಸಾಲಿ ಸಮಾಜವನ್ನು ಪ್ರವರ್ಗ 2ಎಗೆ ಸೇರಿಸುವಂತೆ ಆಗ್ರಹಿಸಿ ಕೂಡಲ ಸಂಗಮ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ನಡೆಸುತ್ತಿರುವ ಧರಣಿ ಸತ್ಯಾಗ್ರಹ ರವಿವಾರ ಎಂಟನೆ ದಿನಕ್ಕೆ ಕಾಲಿಟ್ಟಿದ್ದು, ಮೀಸಲಾತಿ ಕುರಿತು ಸರಕಾರದಿಂದ ಸ್ಪಷ್ಟ ಭರವಸೆ ಇಲ್ಲದೇ ಧರಣಿ ವಾಪಸ್ ಪಡೆಯುವ ಪ್ರಶ್ನೆಯೇ ಇಲ್ಲ ಎಂದು ಶ್ರೀಗಳು ಪ್ರಕಟಿಸಿದ್ದಾರೆ.
ಕೂಡಲ ಸಂಗಮದಿಂದ ಬೆಂಗಳೂರುವರೆಗೆ ಪಾದಯಾತ್ರೆ ನಡೆಸಿದ್ದ ಬಸವ ಜಯಮೃತ್ಯುಂಜಯ ಶ್ರೀಗಳು ಕಳೆದ ಎಂಟು ದಿನದಿಂದ ನಗರದ ಫ್ರೀಡಂ ಪಾರ್ಕ್ ನಲ್ಲಿ ಧರಣಿ ನಡೆಸುತ್ತಿದ್ದಾರೆ. ಸಮುದಾಯದ ಮುಖಂಡರೊಂದಿಗೆ ಪ್ರತಿದಿನ ಬೆಳಗ್ಗೆ 10 ರಿಂದ ಸಂಜೆ 6 ಗಂಟೆವರೆಗೆ ಸತ್ಯಾಗ್ರಹ ನಡೆಸುತ್ತಿದ್ದಾರೆ.
ಸರಕಾರಕ್ಕೆ ಮಾ.4ರವರೆಗೆ ಗಡುವು ವಿಧಿಸಿದ್ದು, ಅದೇ ದಿನ ಸಂಜೆ 4ಗಂಟೆಯೊಳಗೆ ಸರಕಾರ ಮೀಸಲಾತಿ ಘೋಷಣೆ ಮಾಡದೇ ಇದ್ದಲ್ಲಿ ಫೆ.5ರಂದು ಆಮರಣಾಂತ ಉಪವಾಸ ಸತ್ಯಾಗ್ರಹಕ್ಕೆ ಕುಳಿತುಕೊಳ್ಳುವ ಕುರಿತು ಸಮುದಾಯದ ಮುಖಂಡರೊಂದಿಗೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳಲಿದ್ದಾರೆ.
ಸಂಗೀತದೊಂದಿಗೆ ಧರಣಿ: ಇನ್ನು ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತಿರುವ ಧರಣಿ ಸತ್ಯಾಗ್ರಹ ಬರೀ ಘೋಷಣೆಗಳಿಗೆ ಸೀಮಿತವಾಗದೆ ಭಜನೆ, ಸಂಗೀತದೊಂದಿಗೆ ನಡೆಯುತ್ತಿದೆ. ಪಾದಯಾತ್ರೆಯಲ್ಲಿ ಭಾಗಿಯಾಗಿದ್ದ ಕೊಪ್ಪಳದ ಕಲಾವಿದರು ಶ್ರೀಗಳ ಅಪೇಕ್ಷೆ ಮೇರೆಗೆ ಫ್ರೀಡಂ ಪಾರ್ಕ್ ಗೆ ಆಗಮಿಸಿ ಇಡೀ ದಿನ ಸಂಗೀತ, ಭಜನೆ ಮೂಲಕ ಧರಣಿಯ ದಣಿವು ಕಾಣದಂತೆ ಮಾಡಿದ್ದಾರೆ. ಇದಕ್ಕೆ ಬಸವ ಜಯಮೃತ್ಯುಂಜಯ ಶ್ರೀಗಳು ಸಂತಸ ವ್ಯಕ್ತಪಡಿಸಿದ್ದಾರೆ.







