ದಲಿತ ಮೀಸಲು ನಿಧಿಯ ಅಸರ್ಪಕ ನಿರ್ವಹಣೆ ಆರೋಪ : ಪ್ರತಿಭಟನೆ
ಮಂಗಳೂರು, ಮಾ.1: ಮಂಗಳೂರು ಪಾಲಿಕೆಯ ದಲಿತ ಮೀಸಲು ನಿಧಿಯ ಅಸಮರ್ಪಕ ನಿರ್ವಹಣೆ ಹಾಗೂ ದಲಿತ ವಿರೋಧಿ ಧೋರಣೆ ಖಂಡಿಸಿ ದಲಿತ ಹಕ್ಕುಗಳ ಸಮಿತಿ ಮಂಗಳೂರು ನಗರ ಹಾಗೂ ಆದಿವಾಸಿ ಹಕ್ಕುಗಳ ಸಮಿತಿ ನೇತೃತ್ವದಲ್ಲಿ ಮಂಗಳೂರು ಪಾಲಿಕೆ ಕಚೇರಿ ಮುಂಭಾಗ ಸೋಮವಾರ ಪ್ರತಿಭಟನಾ ಧರಣಿ ನಡೆಯಿತು.
ಮುಖಂಡರಾದ ಕೃಷ್ಣಪ್ಪ ಕೊಂಚಾಡಿ ಅವರು ಮಾತನಾಡಿ, ದಲಿತ ಮೀಸಲು ಪೌರಕಾರ್ಮಿಕರಿಗಾಗಿ ಶೇ.20 ಪ್ರತ್ಯೇಕಿಸುವುದನ್ನು ಕೈಬಿಟ್ಟು ಪಾಲಿಕೆಯ ಮೂಲ ಆದಾಯದಿಂದ ಪೌರಕಾರ್ಮಿಕರಿಗೆ ವಿವಿಧ ಸೌಲಭ್ಯಗಳನ್ನು ಒದಗಿಸಬೇಕು. ಆರ್ಥಿಕವಾಗಿ ಹಿಂದುಳಿದವರಿಗೆ ಮೇಲ್ಜಾತಿಯ ಬಂಧುಗಳಿಗೆ ಇರುವಂತೆಯೇ ದಲಿತರಿಗೂ ಇರುವ 10 ಲಕ್ಷ ರೂ. ಮಿತಿಯನ್ನು ದಲಿತರಿಗೂ ಅನ್ವಯಿಸಬೇಕು. ಮನೆ ನಿರ್ಮಾಣಕ್ಕೆ ಸಹಾಯ ಧನವನ್ನು 6 ಲಕ್ಷ ರೂ.ಗೆ ಏರಿಸಬೇಕು ಹಾಗೂ ಅದನ್ನು ದಲಿತ ಮೀಸಲು ನಿಧಿಯಿಂದ ನೀಡಬೇಕು. ಅರ್ಜಿ ಹಾಕಿದ ಎಲ್ಲರಿಗೂ ನೀಡಬೇಕು ಎಂದವರು ಆಗ್ರಹಿಸಿದರು.
ಮುಖಂಡರಾದ ವಸಂತ ಆಚಾರಿ, ತಿಮ್ಮಯ್ಯ ಕೊಂಚಾಡಿ, ಯಾದವ ಶೆಟ್ಟಿ, ನಾರಾಯಣ ತಲಪಾಡಿ, ಅಶ್ರ್ ಕೆ.ಸಿರೋಡ್, ದಲಿತ ಹಕ್ಕುಗಳ ಸಮಿತಿ ಮಂಗಳೂರು ನಗರ ಅಧ್ಯಕ್ಷ ನಾಗೇಂದ್ರ ಉರ್ವಸ್ಟೋರ್, ಕಾರ್ಯದರ್ಶಿ ಕೃಷ್ಣ ಪಿ.ಎ., ಆದಿವಾಸಿ ಹಕ್ಕುಗಳ ಸಮಿತಿ ಅಧ್ಯಕ್ಷ ಭಾಸ್ಕರ್ ಕೆ., ಕಾರ್ಯದರ್ಶಿ ಶಶಿಕಲಾ ನಂತೂರು ಮುಂತಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.