ಬ್ರಾಹ್ಮಣ ಸಮುದಾಯಕ್ಕೆ ಮಾತ್ರ ಅರ್ಚಕ ಉದ್ಯೋಗ ಮೀಸಲಿಡಬೇಕು: ಪೇಜಾವರ ಶ್ರೀ
ಮೈಸೂರು,ಮಾ.2: ರಾಜ್ಯ ಸರ್ಕಾರ ಎಲ್ಲಾ ವರ್ಗದ ಜನರನ್ನು ಅರ್ಚಕರನ್ನಾಗಿ ನೇಮಿಸದೆ ಕೇವಲ ಬ್ರಾಹ್ಮಣ ಸಮುದಾಯಕ್ಕೆ ಮಾತ್ರ ಅರ್ಚಕ ಉದ್ಯೋಗ ಮೀಸಲಿಡಬೇಕು ಎಂದು ಪೇಜಾವರ ಮಠದ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.
ಮೈಸೂರಿನಲ್ಲಿ ಇತ್ತೀಚೆಗೆ ನಡೆದ ಜಿಲ್ಲಾ ಮತ್ತು ನಗರ ಬ್ರಾಹ್ಮಣ ಸಂಘದ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಅರ್ಚಕ ವೃತ್ತಿಯನ್ನು ಬ್ರಾಹ್ಮಣರು ಮಾತ್ರ ಮಾಡುತ್ತಿದ್ದರು. ಅದನ್ನು ಈಗ ಸರ್ಕಾರ ಕಿತ್ತುಕೊಳ್ಳುವ ಪ್ರಯತ್ನ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಮಮಂದಿರ ನಿರ್ಮಾಣಕ್ಕೆ 1,500 ಕೋಟಿ ರೂ. ಅಗತ್ಯವಿದೆ ಎಂದು ಅಂದಾಜಿಸಲಾಗಿತ್ತು. ಆದರೆ ಈಗ 2,100 ಕೋಟಿ ರೂ. ಸಂಗ್ರಹವಾಗಿದೆ. ಮಂದಿರ ನಿರ್ಮಾಣ ಮಾಡುವುದು ದೊಡ್ಡ ವಿಷಯವೇನಲ್ಲ. ಆದರೆ ಇಷ್ಟು ಆಸ್ಥೆಯಿಂದ ನಿರ್ಮಿಸಿದ ಮಂದಿರವನ್ನು ಎಷ್ಟು ದಿವಸ ಉಳಿಸಿಕೊಳ್ಳುತ್ತೇವೆ ಎಂಬುದು ಮುಖ್ಯ. ಶ್ರೀ ರಾಮನ ಹೆಸರಿನಲ್ಲಿ ನಮ್ಮ ಸಂಸ್ಕೃತಿ ಪುನರುತ್ಥಾನವಾಗಬೇಕು. ನೀವು ಕಟ್ಟಿದ ಮಂದಿರ ಅದೆಷ್ಟು ಕಾಲ ನಿಮ್ಮ ಕೈಯಲ್ಲಿ ಉಳಿಯುತ್ತದೆ? ಅದು ಮತ್ತೆ ನಮ್ಮ ಕೈಗೆ ಬಂದೇ ಬರುತ್ತದೆ ಎಂಬ ಹೇಳಿಕೆಗಳನ್ನು ಹುಸಿಗೊಳಿಸಬೇಕು ಎಂದು ಹೇಳಿದರು.