ಕಾಪು: ಮಾ.13ಕ್ಕೆ ಪೊಲಿಪು ಉರೂಸ್ ; ಮಾ.14ರಂದು ಖಾಝಿ ಸ್ವೀಕಾರ

ಕಾಪು: ಪೊಲಿಪು ಜಾಮಿಯಾ ಮಸೀದಿಯ ಮುಂಭಾಗದಲ್ಲಿರುವ ಸಯ್ಯದ್ ಶಂಸುದ್ದೀನ್ ವಲಿಯುಲ್ಲಾಹಿರವರ ದರ್ಗಾದ ಉರೂಸ್ ಕಾರ್ಯಕ್ರಮವು ಮಾ.13 ರಂದು ನಡೆಯಲಿದೆ.
ಮಂಗಳವಾರ ಕಾಪು ಪ್ರೆಸ್ ಕ್ಲಬ್ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಜಮಾತ್ ಕಮಿಟಿ ಉಪಾಧ್ಯಕ್ಷ ಅಮೀರ್ ಹಂಝ ಮಾಹಿತಿ ನೀಡಿದರು.
ಪಿ.ಬಿ ಅಹಮದ್ ಮುಸ್ಲಿಯಾರ್ (ಕಾಪು ಉಸ್ತಾದ್) ಇವರು ಧ್ವಜಾರೋಹಣ ಮಾಡುವ ಮೂಲಕ ಉರೂಸ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಆ ಬಳಿಕ ಸಂದಲ್ ಮೆರವಣಿಗೆ ನಡೆಯಲಿದೆ. ಮಗ್ರಿಬ್ ನಮಾಝಿನ ಬಳಿಕ ಸೈಯದ್ ಶಂಸುದ್ದೀನ್ ವಲಿಯುಲ್ಲಾರವರ ಕುಟುಂಬಸ್ಥರಾದ ಸೈಯದ್ ಸಿರಾಜುದ್ದೀನ್ ಬಾ ಅಲವಿ ತಂಗಲ್ರವರ ನೇತೃತ್ವದಲ್ಲಿ ಸಾಮೂಹಿಕ ಕೂಟು ಝಿಯಾರತ್ ನೆರವೇರಲಿದೆ ಎಂದರು.
ಸಭಾ ಕಾರ್ಯಕ್ರಮವನ್ನು ಪಿ.ಬಿ ಅಹಮದ್ ಮುಸ್ಲಿಯಾರ್ ಉದ್ಘಾಟಿಸಲಿದ್ದಾರೆ. ಹುಸೈನ್ ಅಹ್ಸನಿ ಮೂಈನ್ ಇವರು ಪ್ರವಚನ ನೀಡಲಿದ್ದು, ಪೊಲಿಪು ಜಾಮಿಯಾ ಮಸೀದಿ ಮಸೀದಿಯ ಖತೀಬ್ ಇಝ್ಹ ಮೊಹಮ್ಮದ್ ಇರ್ಷಾದ್ ಸಅದಿ ಭಾಗವಹಿಸಲಿದ್ದಾರೆ.
ಮಾ.14 ಕ್ಕೆ ಖಾಝಿ ಸ್ವೀಕಾರ: ಪೊಲಿಪು ಜಾಮಿಯಾ ಮಸೀದಿಯಲ್ಲಿ ಕಳೆದ ಸುಮಾರು 52 ವರ್ಷಗಳ ಕಾಲ ಧಾರ್ಮಿಕ ಸೇವೆಯನ್ನು ಮಾಡಿರು ವಂತಹ ಪಿ. ಬಿ ಅಹ್ಮದ್ ಮುಸ್ಲಿಯಾರ್ ( ಕಾಪು ಉಸ್ತಾದ್) ಇವರನ್ನು ಕಾಪು ಮೊಹಲ್ಲಾದ ಖಾಝಿ ಯಾಗಿ ನೇಮಕ ಮಾಡಲಿದ್ದು, ಅಂದು ಬೆಳಿಗ್ಗೆ 10 ಗಂಟೆಗೆ ಉಡುಪಿ ಜಿಲ್ಲಾ ಸಂಯುಕ್ತ ಜಮಾಅತ್ ಖಾಝಿ ಝೈನುಲ್ ಉಲಮಾ ಅಬ್ದುಲ್ ಹಮೀದ್ ಮುಸ್ಲಿಯಾರ್ (ಮಾಣಿ ಉಸ್ತಾದ್) ರವರ ನೇತೃತ್ವದಲ್ಲಿ ಖಾಝಿ ಸ್ವೀಕಾರ ನಡೆಯಲಿದೆ.
ಸಯ್ಯದ್ ಜಾಫರ್ ಅಸ್ಸಖಾಫ್ ತಂಙಲ್ ಕೋಟೇಶ್ವರ ದುಆ ಮಾಡಲಿದ್ದು, ಸೈಯದ್ ಕೆ.ಪಿ.ಎಸ್ ಝೈನುಲ್ ಆಬಿದೀನ್ ಜಮಾಲುಲ್ಲೈಲ್ ತಂಙಳ್ ಕಾಜೂರು ಇವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಉಡುಪಿ ಜಿಲ್ಲಾ ಸಂಯುಕ್ತ ಜಮಾತ್ ಸಹಾಯಕ ಖಾಝಿ ಅಬೂ ಶಾಕಿರ್ ಅಬ್ದುಲ್ ರಹಮಾನ್ ಮದನಿ ಮೂಳೂರು ಹಾಗು ಸಂಯುಕ್ತ ಜಮಾತ್ ಅಧ್ಯಕ್ಷರಾದ ಹಾಜಿ ಅಬೂಬಕ್ಕರ್ ನೇಜಾರ್ ಭಾಗವಹಿಸಲಿದ್ದಾರೆ.
ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹಮೀದ್ ಮಾಸ್ಟರ್, ಕೋಶಾಧಿಕಾರಿ ಶೇಖ್ ನಝೀರ್ ಉಪಸ್ಥಿತರಿದ್ದರು.







