ಬಂಗಾಳ ವಿಧಾನಸಭಾ ಚುನಾವಣೆ: ‘ಬಿಜೆಪಿಗೆ ಮತವಿಲ್ಲ’ ಎಂಬ ಕರೆಗಳಿಗೆ ಹೆಚ್ಚುತ್ತಿರುವ ಬೆಂಬಲ
ಕೋಲ್ಕತಾ,ಮಾ.10: ರಾಜ್ಯ ವಿಧಾನಸಭಾ ಚುನಾವಣೆಯು ಸಮೀಪಿಸುತ್ತಿದ್ದಂತೆ ಬಿಜೆಪಿಗೆ ಮತ ನೀಡದಂತೆ ಎರಡು ಪ್ರತ್ಯೇಕ ನಾಗರಿಕ ವೇದಿಕೆಗಳು ನೀಡಿರುವ ಕರೆಗಳು ಹೆಚ್ಚಿನ ಜನಬೆಂಬಲವನ್ನು ಪಡೆದುಕೊಳ್ಳುತ್ತಿವೆ. ಈ ಪೈಕಿ ‘ಫ್ಯಾಸಿಸ್ಟ್ ಬಿಜೆಪಿ-ಆರೆಸ್ಸೆಸ್ ವಿರುದ್ಧ ಬಂಗಾಳ ’ವೇದಿಕೆಯು ಬುಧವಾರ ಕೋಲ್ಕತಾದಲ್ಲಿ ಬಹಿರಂಗ ಸಭೆಯನ್ನು ಏರ್ಪಡಿಸಿದ್ದು,ವಿವಿಧ ಜಿಲ್ಲೆಗಳಿಂದ ಈ ಅಭಿಯಾನದ ಬೆಂಬಲಿಗರು ಮತ್ತು ಸಂಘಟಕರು ಸಹ ಭಾಗವಹಿಸಿದ್ದರು.
ಕಳೆದೊಂದು ತಿಂಗಳಿನಿಂದ ಕೋಲ್ಕತಾ ಅಲ್ಲದೆ ಬಂಗಾಳದ ವಿವಿಧ ಜಿಲ್ಲೆಗಳಲ್ಲಿ ‘ನೋ ವೋಟ್ ಟು ಬಿಜೆಪಿ‘ ಎಂದು ಕೆಂಪು ಕಾಗದದಲ್ಲಿ ಬಿಳಿಯ ಅಕ್ಷರಗಳಿಂದ ಮುದ್ರಿತ ಪೋಸ್ಟರ್ಗಳು ಕಾಣಿಸಿಕೊಳ್ಳುತ್ತಿವೆ. ವೇದಿಕೆಯ ಸಂಘಟಕರು ವಿವಿಧ ಗ್ರಾಮೀಣ ಪ್ರದೇಶಗಳಲ್ಲಿಯೂ ಅಭಿಯಾನಗಳನ್ನು ನಡೆಸಿದ್ದಾರೆ.
ವಿದ್ಯಾರ್ಥಿಗಳು,ಸಾಂಸ್ಕೃತಿಕ ಕಾರ್ಯಕರ್ತರು,ಕಾರ್ಮಿಕ ಒಕ್ಕೂಟಗಳು,ಮಾನವ ಹಕ್ಕುಗಳ ಕಾರ್ಯಕರ್ತರು ಮತ್ತು ಸಾಮಾಜಿಕ ಕಾರ್ಯಕರ್ತರು ವೇದಿಕೆಗೆ ಹೆಚ್ಚಿನ ಶಕ್ತಿಯನ್ನು ನೀಡಿದ್ದಾರೆ. ಈ ಪೈಕಿ ಹೆಚ್ಚಿನವರು ಎಡಪಂಥೀಯ ಒಲವುಗಳನ್ನು ಹೊಂದಿರುವಂತೆ ಕಂಡುಬರುತ್ತಿದ್ದರೂ ಅವರು ಸಿಪಿಎಂ ನೇತೃತ್ವದ ಎಡರಂಗದ ಕಟ್ಟಾ ಬೆಂಬಲಿಗರೇನೂ ಅಲ್ಲ. ಅಭಿಯಾನದ ಹೆಚ್ಚಿನ ಕಾರ್ಯಕರ್ತರು ಸಣ್ಣಪುಟ್ಟ ಎಡಪಕ್ಷಗಳು ಮತ್ತು ಸಂಘಟನೆಗಳಿಗೆ ಸೇರಿದವರರಾಗಿದ್ದಾರೆ.
ಬುಧವಾರ ಈ ಕಾರ್ಯಕರ್ತರು ಮಲೌಲಿಯ ರಾಮಲೀಲಾ ಮೈದಾನದಿಂದ ಜಾಥಾದಲ್ಲಿ ಹೊರಟು ನಗರದ ಹೃದಯಭಾಗವಾದ ಎಸ್ಪ್ಲನೇಡ್ ಪ್ರದೇಶದಲ್ಲಿ ಬಹಿರಂಗ ಸಭೆಯನ್ನು ನಡೆಸಿದ್ದು,ಕೃಷಿ ಕಾನೂನುಗಳ ವಿರುದ್ಧ ರೈತರ ಪ್ರತಿಭಟನೆಯ ನೇತೃತ್ವವನ್ನು ವಹಿಸಿರುವ ಸಂಯುಕ್ತ ಕಿಸಾನ ಮೋರ್ಚಾದ ನಾಯಕರಾದ ಅಭಿಮನ್ಯು ಕೊಹರ್ ಮತ್ತು ಮಂಜಿತ್ ಸಿಂಗ್ ಧಾನೇರ್ ಅವರೂ ಸಭೆಯನ್ನುದ್ದೇಶಿಸಿ ಮಾತನಾಡಿದರು.
‘ಸದ್ಯಕ್ಕೆ ನಮ್ಮ ವೇದಿಕೆಯು ಇಂತಹುದೇ ಪಕ್ಷಕ್ಕೆ ಮತಕ್ಕಾಗಿ ಕರೆಯನ್ನು ನೀಡುತ್ತಿಲ್ಲ. ಬಿಜೆಪಿಗೆ ಮತ ನೀಡದಂತೆ ನಾವು ಜನರನ್ನು ಆಗ್ರಹಿಸುತ್ತಿದ್ದೇವೆ. ಏಕೆಂದರೆ ಬಿಜೆಪಿಯನ್ನು ಇತರ ಯಾವುದೇ ಪಕ್ಷದೊಂದಿಗೆ ಹೋಲಿಸುವಂತಿಲ್ಲ,ಅದು ಅತ್ಯಂತ ಅಪಾಯಕಾರಿಯಾಗಿದೆ ’ ಎಂದು ಅಭಿಯಾನದ ಸಂಚಾಲಕರಲ್ಲೋರ್ವರಾಗಿರುವ ಚಿತ್ರ ನಿರ್ಮಾಪಕ ಅನಿಕೇತ ಚಟ್ಟೋಪಾಧ್ಯಾಯ ಹೇಳಿದರೆ,ಬಿಜೆಪಿ-ಆರೆಸ್ಸೆಸ್ ಉತ್ಕರ್ಷವನ್ನು ತಡೆಯುವುದು ಪ್ರತಿಯೊಬ್ಬ ವಿವೇಕವಂತ ವ್ಯಕ್ತಿಯ ಅತ್ಯುನ್ನತ ಆದ್ಯತೆಯಾಗಬೇಕು ಎಂದು ವಿದ್ವಾಂಸೆ ಮತ್ತು ಸಾಂಸ್ಕೃತಿಕ ಕಾರ್ಯಕರ್ತೆ ಕಸ್ತೂರಿ ಬಸು ಹೇಳಿದರು.
ಈ ಅಭಿಯಾನಕ್ಕಾಗಿ ಡಿಸೆಂಬರ್ 31ರಂದು ಆರಂಭಿಸಲಾಗಿದ್ದ ಫೇಸ್ಬುಕ್ ಗುಂಪಿನಲ್ಲಿ ಈಗಾಗಲೇ 20,000ಕ್ಕೂ ಅಧಿಕ ಸದಸ್ಯರಿದ್ದಾರೆ.