ವಿದ್ಯಾರ್ಥಿನಿಗೆ ಕಿರುಕುಳ: ಆಂಧ್ರದ ಪ್ರಾಧ್ಯಾಪಕ ವಿರುದ್ಧ ಪ್ರಕರಣ ದಾಖಲು
ಮಂಗಳೂರು, ಮಾ.10: ಪಿಎಚ್ಡಿ ವಿದ್ಯಾರ್ಥಿನಿಗೆ ಕಿರುಕುಳ ನೀಡಿದ ಆರೋಪದಲ್ಲಿ ಪ್ರಾಧ್ಯಾಪಕರೊಬ್ಬರ ವಿರುದ್ಧ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಂಧ್ರಪ್ರದೇಶದ ಆಚಾರ್ಯ ನಾಗಾರ್ಜುನ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಕೋಂಡೂರು ಸುಧೀರ್ ಕುಮಾರ್ ಎಂಬವರ ವಿರುದ್ಧ ಕೇಸು ದಾಖಲಾಗಿದೆ.
ವಿದ್ಯಾರ್ಥಿನಿಯೊಬ್ಬರು 2019ರಿಂದ ಪಾಂಡೇಶ್ವರ ಶ್ರೀನಿವಾಸ ವಿವಿಯಲ್ಲಿ ಪ್ರಾಧ್ಯಾಪಕಿ ಡಾ. ಶೈಲಶ್ರೀ ಮಾರ್ಗದರ್ಶನದಲ್ಲಿ ಪಿಎಚ್ಡಿ ಮಾಡುತ್ತಿದ್ದಾರೆ. 2018ರಲ್ಲಿ ಪರಿಚಯವಾದ ಡಾ.ಕೋಂಡೂರು ತನ್ನನ್ನು ಸಹ ಮಾರ್ಗದರ್ಶಕನನ್ನಾಗಿ ನೇಮಿಸುವಂತೆ ವಿದ್ಯಾರ್ಥಿನಿಯಲ್ಲಿ ಒತ್ತಾಯ ಮಾಡಿದ್ದ. ಅದಕ್ಕೆ ಒಪ್ಪಿ ವಿಶ್ವವಿದ್ಯಾಲಯಕ್ಕೆ ಅನುಮತಿಗೆ ಕಳುಹಿಸಿದಾಗ ಆತನಿಗೆ ಅರ್ಹತೆ ಇಲ್ಲ ಎನ್ನುವ ಕಾರಣಕ್ಕೆ ಕೋರಿಕೆಯನ್ನು ನಿರಾಕರಿಸಿತ್ತು. ನಂತರ ಈತ ವಿದ್ಯಾರ್ಥಿನಿಗೆ ಹಾಗೂ ಮನೆಯವರಿಗೆ ಕಿರುಕುಳ ನೀಡಲು ಆರಂಭಿಸಿದ್ದಾನೆ. ವಿದ್ಯಾರ್ಥಿನಿಗೆ ತಿಳಿಯದಂತೆ ಆಕೆಯ ಭಾವಚಿತ್ರವನ್ನು ಎಡಿಟ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾನೆ ಎಂದು ಆರೋಪಿಸಿ ಮನೆಯವರು ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.





