ದಲಿತ, ಹಿಂದುಳಿದ ವರ್ಗಗಳ ವಿರೋಧಿ ಬಜೆಟ್: ಕೆ.ಎಸ್.ಶಿವರಾಮು ಆಕ್ರೋಶ

ಮೈಸೂರು,ಮಾ.10: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಂಡಿಸಿರುವ ಬಜೆಟ್ ದಲಿತ, ಹಿಂದುಳಿದ ವರ್ಗಗಳ ವಿರೋಧಿ ಬಜೆಟ್ ಆಗಿದ್ದು. ಮೇಲ್ವರ್ಗಗಳ ಓಲೈಕೆ ಬಜೆಟ್ ಆಗಿದೆ ಎಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಕೆ.ಎಸ್.ಶಿವರಾಮು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದ ಪತ್ರಕರ್ತರ ಭವನದಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಶೇ.60% ಇರುವ ದಲಿತ, ಹಿಂದುಳಿದವರ್ಗಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ. ಮೇಲ್ವರ್ಗದ ಓಲೈಕೆಗಾಗಿ ವೀರಶೈವ ಅಭಿವೃದ್ಧಿ ನಿಗಮಕ್ಕೆ 500 ಕೋಟಿ, ಒಕ್ಕಲಿಗ ಸಮುದಾಯಕ್ಕೆ 500 ಕೋಟಿ, ಮತ್ತು ಅಲ್ಪಸಂಖ್ಯಾತರಿಗೆ 1500 ಕೋಟಿ ರೂ., ಬ್ರಾಹ್ಮಣ ಅಭಿವೃದ್ಧಿ ನಿಗಮಗಳಿಗೆ ಪ್ರತ್ಯೇಕವಾಗಿ 50 ಕೋಟಿ ರೂ. ನೀಡಲಾಗಿದೆ. ಆದರೆ. ದಲಿತ ಮತ್ತು ಹಿಂದುಳಿದ ವರ್ಗಗಳ ಒಟ್ಟು 15 ನಿಗಮಗಳಿಗೆ ಕೇವಲ 500 ಕೋಟಿ ರೂ. ಮೀಸಲಿಟ್ಟಿರುವುದು ಖಂಡನೀಯ ಎಂದು ಕಿಡಿಕಾರಿದರು.
ಮುಖ್ಯಮಂತ್ರಿ ಯಡಿಯೂರಪ್ಪ ದಲಿತ ಹಿದುಳಿದ ವರ್ಗಗಳಿಗೆ ಖಾಲಿ ಚೊಂಬು ನೀಡಿದ್ದಾರೆ. ಇದು ಸಾಮಾಜಿಕ ನ್ಯಾಯ ವಿರೋಧಿ ಬಜೆಟ್. ಬಸವಣ್ಣ ಅವರ ಅನುಯಾಯಿ ಎಂದು ಹೇಳಿಕೊಳ್ಳಲು ಬಿಎಸ್ ವೈಗೆ ನಾಚಿಕೆ ಆಗಲ್ವಾ?, ಬಸವಣ್ಣನವರ ಹೆಸರು ಹೇಳಲು ಬಿಜೆಪಿಯ ಯಾವ ನಾಯಕರಿಗೂ ಯೋಗ್ಯತೆ ಇಲ್ಲ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೂಡಲೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.





