ನಾಗ್ಪುರದಲ್ಲಿ ಮಾ.15ರಿಂದ ಒಂದು ವಾರ ಲಾಕ್ ಡೌನ್
ಏರುತ್ತಿರುವ ಕೊರೋನ ಪ್ರಕರಣ

ಮುಂಬೈ, ಮಾ.11: ಮಹಾರಾಷ್ಟ್ರದ ಹಲವೆಡೆ ಕೊರೋನ ಸೋಂಕು ಮತ್ತೆ ಹೆಚ್ಚಿರುವ ಹಿನ್ನೆಲೆಯಲ್ಲಿ ಸೋಂಕು ಹರಡದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿರುವ ರಾಜ್ಯ ಸರಕಾರ ನಾಗಪುರದಲ್ಲಿ ಮಾರ್ಚ್ 15ರಿಂದ 21ರವರೆಗೆ ಲಾಕ್ಡೌನ್ ವಿಧಿಸಿದೆ ಹಾಗೂ ಕೆಲವೆಡೆ ಕಟ್ಟುನಿಟ್ಟಿನ ರಾತ್ರಿ ಕರ್ಫ್ಯೂ ಜಾರಿಗೊಳಿಸಿದೆ ಎಂದು ವರದಿಯಾಗಿದೆ. ನಾಗಪುರದಲ್ಲಿ ಬುಧವಾರ ಒಂದೇ ದಿನ ಕೊರೋನ ಸೋಂಕಿನ 1,710 ಹೊಸ ಪ್ರಕರಣ ದಾಖಲಾಗಿರುವುದರಿಂದ ಲಾಕ್ಡೌನ್ ಅನಿವಾರ್ಯವಾಗಿದೆ. ಇಲ್ಲಿ ಅಗತ್ಯ ಸೇವೆಗಳಿಗೆ ಮಾತ್ರ ಅವಕಾಶವಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಮಹಾರಾಷ್ಟ್ರದ ವಿವಿಧೆಡೆ ಜಾರಿಗೊಳಿಸಿರುವ ನಿರ್ಬಂಧಗಳು ಹೀಗಿವೆ.
► ಕಲ್ಯಾಣ್-ದೊಂಬಿವಿಲಿ ಅವಳಿ ನಗರಗಳಲ್ಲಿ ಅತ್ಯಗತ್ಯವಲ್ಲದ ಸೇವೆ ಒದಗಿಸುವ ಅಂಗಡಿ, ಮುಂಗಟ್ಟುಗಳನ್ನು ವಾರದ 6 ದಿನ, ರಾತ್ರಿ 7ರವರೆಗೆ ಮಾತ್ರ ತೆರೆಯಬೇಕು. ಪ್ರತೀ ಶನಿವಾರ ಅಥವಾ ರವಿವಾರ ಅಂಗಡಿಗಳನ್ನು ಕಡ್ಡಾಯವಾಗಿ ಮುಚ್ಚಬೇಕು. ಅಗತ್ಯದ ಸೇವೆ ಒದಗಿಸುವ ಅಂಗಡಿ, ಮುಂಗಟ್ಟುಗಳನ್ನು ರಾತ್ರಿ 9ಕ್ಕೆ ಮುಚ್ಚಬೇಕು(ಈಗ 11ರವರೆಗೆ ತೆರೆದಿಡಲು ಅವಕಾಶವಿದೆ). ಹೋಟೆಲ್ಗಳು ಹಾಗೂ ರೆಸ್ಟಾರೆಂಟ್ಗಳು ರಾತ್ರಿ 11ರವರೆಗೆ ತೆರೆದಿರಬಹುದು. ಆಹಾರ ಒದಗಿಸುವ ಪೆಟ್ಟಿಗೆ ಅಂಗಡಿಗಳು(ಗೂಡಂಗಡಿ) ರಾತ್ರಿ 7ಕ್ಕೇ ಮುಚ್ಚಬೇಕು.
► ನಾಂದೇಡ್ನಲ್ಲಿ ಕೊರೋನ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಾರ್ಚ್ 12ರಿಂದ 21ರವರೆಗೆ ಹೆಚ್ಚುವರಿ ನಿರ್ಬಂಧಗಳನ್ನು ವಿಧಿಸಲಾಗಿದೆ. ಎಲ್ಲಾ ಕೋಚಿಂಗ್ ಕ್ಲಾಸ್ಗಳನ್ನು ಮುಚ್ಚಬೇಕು, ಅಂಗಡಿಗಳನ್ನು ಬೆಳಿಗ್ಗೆ 7ರಿಂದ ರಾತ್ರಿ 7ರವರೆಗೆ ಮಾತ್ರ ತೆರೆದಿಡಬೇಕು. ವಾರದ ಸಂತೆ, ಮಾರುಕಟ್ಟೆ ನಡೆಸುವಂತಿಲ್ಲ. ಮಾರ್ಚ್ 16ರಿಂದ 21ರವರೆಗೆ ವಿವಾಹ ಸಮಾರಂಭಕ್ಕೆ ಅವಕಾಶವಿಲ್ಲ.
► ಥಾಣೆ ಜಿಲ್ಲೆಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ಮಾರ್ಚ್ 15ರಿಂದ 5ರಿಂದ 8ನೇ ತರಗತಿವರೆಗಿನ ಶಾಲೆಗಳು ಮುಂದಿನ ಆದೇಶದವರೆಗೆ ಮುಚ್ಚಿರುತ್ತದೆ. ಥಾಣೆ ನಗರದಲ್ಲಿ ಕೊರೋನ ಹಾಟ್ಸ್ಪಾಟ್ ಎಂದು ಗುರುತಿಸಲಾದ 11 ಸ್ಥಳಗಳಲ್ಲಿ ಮಾರ್ಚ್ 13ರಿಂದ 31ರವರೆಗೆ ಲಾಕ್ಡೌನ್ ಜಾರಿಯಲ್ಲಿರುತ್ತದೆ.
► ನಾಶಿಕ್ ಜಿಲ್ಲೆಯಲ್ಲಿ ಮಾರ್ಚ್ 15ರಿಂದ ಒಂದು ವಾರದ ಅವಧಿಗೆ ಲಾಕ್ಡೌನ್ ಜಾರಿಯಲ್ಲಿರುತ್ತದೆ. ಈ ಹಿಂದೆ ಅನುಮತಿ ಪಡೆದ ವಿವಾಹ ಸಮಾರಂಭವನ್ನು ಮಾರ್ಚ್ 15ರವರೆಗೆ ನಡೆಸಬಹುದು. ಆ ಬಳಿಕ ಹೊಸ ವಿವಾಹ ಕಾರ್ಯಕ್ರಮಕ್ಕೆ ಅನುಮತಿ ನೀಡಲಾಗುವುದಿಲ್ಲ. ನಾಶಿಕ್ ನಗರದಲ್ಲಿ ಶಾಲೆ, ಕಾಲೇಜು, ಕೋಚಿಂಗ್ ಕ್ಲಾಸ್ಗಳನ್ನು ಮುಚ್ಚಲಾಗುವುದು. ಆದರೆ ಪ್ರಾರ್ಥನಾ ಮಂದಿರ, ದೇವಸ್ಥಾನ, ಮಸೀದಿಗಳನ್ನು ರಾತ್ರಿ 7 ಗಂಟೆಯವರೆಗೆ ತೆರೆಯಲು ಅವಕಾಶವಿದೆ. ವಾರಾಂತ್ಯದಲ್ಲಿ ಪ್ರಾರ್ಥನಾ ಮಂದಿರಗಳನ್ನು ತೆರೆಯಲು ಅವಕಾಶವಿಲ್ಲ. ಯುಪಿಎಸ್ಸಿ, ಎಂಪಿಎಸ್ಸಿ ಮುಂತಾದ ನಿಗದಿತ ಪರೀಕ್ಷೆ ಎಂದಿನಂತೆಯೇ ನಡೆಯುತ್ತದೆ.
► ಔರಂಗಾಬಾದ್ ಜಿಲ್ಲೆಯಲ್ಲಿ ಮಾರ್ಚ್ 11ರಿಂದ ಎಪ್ರಿಲ್ 4ರವರೆಗೆ ರಾತ್ರಿ ಕರ್ಫ್ಯೂ ಜಾರಿಯಲ್ಲಿರುತ್ತದೆ. ವಾರಾಂತ್ಯದ ದಿನದಲ್ಲಿ ಸಂಪೂರ್ಣ ಲಾಕ್ಡೌನ್ ಜಾರಿಯಲ್ಲಿರುತ್ತದೆ. ಮಾಲ್ಗಳು ಹಾಗೂ ವಾರದ ಸಂತೆ ಮುಚ್ಚಿರುತ್ತದೆ, ರೆಸ್ಟಾರೆಂಟ್ಗಳನ್ನು ರಾತ್ರಿ 7 ಗಂಟೆಗೆ ಮುಚ್ಚಬೇಕು. ಮದುವೆ ಹಾಗೂ ಇತರ ಸಾರ್ವಜನಿಕ ಸಮಾರಂಭ ನಡೆಸಲು ಅವಕಾಶವಿಲ್ಲ ಎಂದು ಜಿಲ್ಲಾಧಿಕಾರಿಗಳ ಆದೇಶ ತಿಳಿಸಿದೆ.
ಮಹಾರಾಷ್ಟ್ರದಲ್ಲಿ ಸೋಂಕು ಹೆಚ್ಚಳ: ಕೇಂದ್ರದ ಆತಂಕ
ಮಹಾರಾಷ್ಟ್ರ ಹಾಗೂ ದೇಶದ ಇತರೆಡೆ ಕೊರೋನ ಸೋಂಕಿನ ಪ್ರಕರಣ ದಿನೇ ದಿನೇ ಹೆಚ್ಚುತ್ತಿರುವ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿರುವ ಕೇಂದ್ರ ಆರೋಗ್ಯ ಇಲಾಖೆ, ಇದೊಂದು ಅತ್ಯಂತ ಗಂಭೀರ ವಿಷಯವಾಗಿದೆ ಎಂದಿದೆ. ದೇಶದ 10 ನಗರಗಳಲ್ಲಿ (ಪುಣೆ, ನಾಗಪುರ, ಥಾಣೆ, ಮುಂಬೈ, ಅಮರಾವತಿ, ನಾಶಿಕ್, ಔರಂಗಾಬಾದ್, ಬೆಂಗಳೂರು ಗ್ರಾಮಾಂತರ, ಎರ್ನಾಕುಳಂ) ಕೊರೋನ ಸೋಂಕಿನ ಅತ್ಯಧಿಕ ಪ್ರಕರಣ ದಾಖಲಾಗಿದೆ. ಮಹಾರಾಷ್ಟ್ರದ ಹಲವು ಜಿಲ್ಲೆಗಳಲ್ಲಿ ಸೋಂಕು ಹೆಚ್ಚಿರುವುದು ಆತಂಕದ ವಿಷಯವಾಗಿದೆ. ನಾಗಪುರದಲ್ಲಿ ಅತ್ಯಂತ ಕಟ್ಟುನಿಟ್ಟಿನ ಲಾಕ್ಡೌನ್ ಜಾರಿಗೊಳಿಸಿರುವ ಮಾಹಿತಿ ಲಭಿಸಿದೆ. ಈಗ ನಾವು ಮತ್ತೆ ಲಾಕ್ಡೌನ್, ಕರ್ಫ್ಯೂ, ನಿರ್ಬಂಧದ ಉಪಕ್ರಮಗಳಿಗೆ ಮರಳುವ ಪರಿಸ್ಥಿತಿಯಲ್ಲಿದ್ದೇವೆ. ಇದು ಅತ್ಯಂತ ಕಳವಳದ ವಿಷಯವಾಗಿದೆ ಎಂದು ನೀತಿ ಆಯೋಗದ ಸದಸ್ಯ ವಿಕೆ ಪಾಲ್ ಹೇಳಿದ್ದಾರೆ. ಈ ಪರಿಸ್ಥಿತಿಯಿಂದ ಎರಡು ಪಾಠ ಕಲಿಯಬಹುದು. ಸೋಂಕು ಯಾವಾಗ ಬೇಕಾದರೂ, ಅನಿರೀಕ್ಷಿತವಾಗಿ ಹರಡಬಹುದು. ಸೋಂಕಿನ ಗತಿವಿಧಿಯ ಅಂಶದ ಬಗ್ಗೆ ಇನ್ನೂ ನಮಗೆ ತಿಳಿದುಬಂದಿಲ್ಲ, ಎರಡನೆಯದು- ಕೊರೋನ ಸೋಂಕಿನಿಂದ ಮುಕ್ತವಾಗಿರಬೇಕಿದ್ದರೆ ಕೊರೋನ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸಬೇಕು. ಇದರಲ್ಲಿ ಲಸಿಕೆ ಪಡೆಯುವುದೂ ಸೇರಿದೆ ಎಂದು ಪಾಲ್ ಹೇಳಿದ್ದಾರೆ.







