ಬೆಂಗಳೂರು: ತಂದೆ ಮೇಲಿನ ದ್ವೇಷಕ್ಕೆ ಮಗನ ಕೊಲೆ
ಬೆಂಗಳೂರು, ಮಾ.11: ಹಳೇ ದ್ವೇಷದ ಹಿನ್ನೆಲೆಯಲ್ಲಿ ಡೆಲಿವರಿ ಬಾಯ್ನ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಐವರು ದುಷ್ಕರ್ಮಿಗಳು ಭೀಕರವಾಗಿ ಕೊಲೆ ಮಾಡಿರುವ ಘಟನೆ ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಸಿದ್ದಾಪುರದ ಮೂರು ಮನೆ ಜಂಕ್ಷನ್ ಬಳಿ ಬುಧವಾರ ರಾತ್ರಿ ಈ ಘಟನೆ ನಡೆದಿದ್ದು, ಹೊಂಬೇಗೌಡ ನಗರದ ಆಕಾಶ್(19) ಕೊಲೆಯಾದ ಡೆಲಿವರಿ ಬಾಯ್ ಎಂದು ತಿಳಿದುಬಂದಿದೆ.
ಹೊಂಬೇಗೌಡ ನಗರದ ವೇಲು ಎಂಬಾತನನ್ನು 2 ತಿಂಗಳ ಹಿಂದೆ ವಿಷ ಕುಡಿಸಿ ಕೊಲೆ ಮಾಡಲಾಗಿತ್ತು. ಕೃತ್ಯದಲ್ಲಿ ಆಕಾಶ್ ಅವರ ತಂದೆ ವೇಲು ಭಾಗಿಯಾಗಿದ್ದಾರೆ ಎಂದು ಶಂಕಿಸಿ, ಕೊಲೆಯಾದ ವೇಲುವಿನ ಸಂಬಂಧಿಕರು ಆಕ್ರೋಶಗೊಂಡಿದ್ದರು. ಅದೇ ದ್ವೇಷದಲ್ಲಿ ವೇಲು ಕೊಲೆಗೆ ಸಂಚು ರೂಪಿಸಿ ಬುಧವಾರ ರಾತ್ರಿ 9ರ ವೇಳೆ ತಂದೆ ಮಕ್ಕಳಾದ ವೇಲು ಹಾಗೂ ಆಕಾಶ್ ನನ್ನು ಅಟ್ಟಿಸಿಕೊಂಡು ಬಂದಿದ್ದು, ವೇಲು ತಪ್ಪಿಸಿಕೊಂಡಿದ್ದರೆ, ಆಕಾಶ್ ಪರಾರಿಯಾಗಲು ಯತ್ನಿಸಿದಾಗ ಮೂರು ಮನೆ ಜಂಕ್ಷನ್ನ ಬಳಿ ದುಷ್ಕರ್ಮಿಗಳು ಚಾಕುವಿನಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಪ್ರಕರಣ ದಾಖಲಿಸಿಕೊಂಡ ಸಿದ್ದಾಪುರ ಪೊಲೀಸರು ಕಾರ್ಯಾಚರಣೆ ಕೈಗೊಂಡಿದ್ದಾರೆ ಎಂದು ದಕ್ಷಿಣ ವಿಭಾಗದ ಡಿಸಿಪಿ ಹರೀಶ್ ಪಾಂಡೆ ತಿಳಿಸಿದ್ದಾರೆ.