ಲೋಕಸಭೆಯಲ್ಲಿ ಕಾಂಗ್ರೆಸ್ ಹಂಗಾಮಿ ನಾಯಕನಾಗಿ ರವನೀತ್ ಸಿಂಗ್ ಬಿಟ್ಟು ನೇಮಕ

Photo: facebook
ಹೊಸದಿಲ್ಲಿ: ಕಾಂಗ್ರೆಸ್ ನಾಯಕ ರವನೀತ್ ಸಿಂಗ್ ಬಿಟ್ಟು ಅವರನ್ನು ಗುರುವಾರ ಲೋಕಸಭೆಯಲ್ಲಿ ಕಾಂಗ್ರೆಸ್ ಹಂಗಾಮಿ ನಾಯಕನನ್ನಾಗಿ ನೇಮಿಸಲಾಗಿದೆ. ಈಗ ಸಂಸತ್ ನಲ್ಲಿ ನಡೆಯುತ್ತಿರುವ ಬಜೆಟ್ ಅಧಿವೇಶನದಲ್ಲಿ ಅಧೀರ್ ರಂಜನ್ ಚೌಧುರಿ ಬದಲಿಗೆ ಬಿಟ್ಟು ಕಾಂಗ್ರೆಸ್ ನಾಯಕನಾಗಿ ಕಾರ್ಯನಿರ್ವಹಿಸಲಿದ್ದಾರೆ.
ಬಿಟ್ಟು ಪ್ರಸ್ತುತ ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಮುಖ್ಯ ಸಚೇತಕರಾಗಿದ್ದಾರೆ.
ಬಂಗಾಳದ ಕಾಂಗ್ರೆಸ್ ಘಟಕದ ಅಧ್ಯಕ್ಷರಾಗಿರುವ ಚೌಧುರಿ ಮುಂದಿನ ಎರಡು ತಿಂಗಳ ಕಾಲ ಚುನಾವಣಾ ಪ್ರಚಾರದಲ್ಲಿ ವ್ಯಸ್ತರಾಗಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಲೋಕಸಭೆಯಲ್ಲಿ ಕಾಂಗ್ರೆಸ್ ನ ಉಪ ನಾಯಕನಾಗಿರುವ ಗೌರವ್ ಗೊಗೊಯ್ ಕೂಡ ಅಸ್ಸಾಂನಲ್ಲಿ ನಡೆಯಲಿರುವ ಚುನಾವಣೆ ತಯಾರಿಯಲ್ಲಿ ನಿರತರಾಗಿರುವ ಕಾರಣ 45ರ ವಯಸ್ಸಿನ ಬಿಟ್ಟು ಲೋಕಸಭೆಯಲ್ಲಿ ಪಕ್ಷದ ರಣನೀತಿಯನ್ನು ರೂಪಿಸುವ ಉಸ್ತುವಾರಿ ವಹಿಸಲಿದ್ದಾರೆ.
ಮೂರು ಬಾರಿ ಸಂಸದರಾಗಿ ಆಯ್ಕೆಯಾಗಿರುವ ಬಿಟ್ಟು 2009ರಲ್ಲಿ ಆನಂದಪುರ್ ಸಾಹಿಬ್ ಹಾಗೂ 2014 ಹಾಗೂ 2019ರಲ್ಲಿ ಲುಧಿಯಾನದಿಂದ ಸಂಸತ್ ಸದಸ್ಯರಾಗಿ ಚುನಾಯಿತರಾಗಿದ್ದಾರೆ.





