ಯುವತಿಯ ಅಶ್ಲೀಲ ಫೋಟೋ ರವಾನೆ, ಕೊಲೆ ಬೆದರಿಕೆ ಆರೋಪ: ಯುವಕನ ಬಂಧನ

ಚಾಮರಾಜನಗರ, ಮಾ.11: ಕಳೆದ ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದ ಯುವತಿಯ ಅಶ್ಲೀಲ ಫೋಟೋಗಳನ್ನು ಪಡೆದು ಆಕೆಯ ಕುಟುಂಬಸ್ಥರಿಗೆ ರವಾನಿಸಿದಲ್ಲದೆ, ಕೊಲೆ ಬೆದರಿಕೆ ಹಾಕಿದ್ದ ಆರೋಪದ ಮೇಲೆ ಯುವಕನೋರ್ವನನ್ನು ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಪೋಲಿಸರು ಬಂಧಿಸಿರುವ ಘಟನೆ ನಡೆದಿದೆ.
ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಪಟ್ಟಣದ ನಿವಾಸಿ ದೌರ್ಜನ್ಯಕ್ಕೆ ಒಳಗಾದ ಯುವತಿಯಾಗಿದ್ದಾಳೆ. ಮಂಡ್ಯ ಜಿಲ್ಲೆಯ ಮದ್ದೂರಿನ ಟಿ.ಕೆ ಹಳ್ಳಿಯ ಪ್ರಶಾಂತ್ ಬಂಧಿತ ಆರೋಪಿ.
ಈತ ಕಳೆದ ಮೂರು ವರ್ಷಗಳಿಂದ ಯುವತಿಯೋರ್ವಳನ್ನು ಪ್ರೀತಿಸುತ್ತಿದ್ದು, ಮದುವೆಯಾಗುವುದಾಗಿ ನಂಬಿಸಿದ್ದ. ಆದರೆ, ಇಬ್ಬರ ಪ್ರೇಮ ವಿಚಾರ ಮನೆಯವರಿಗೆ ತಿಳಿದು ಮದುವೆ ವಿಚಾರವನ್ನು ನಿರಾಕರಿಸಿದ್ದರು.
ಮನೆಯವರ ಮಾತಿನಂತೆ ಕೆಲ ದಿನಗಳ ಕಾಲ ಸುಮ್ಮನಿದ್ದ ಈತ ಇಷ್ಟಕ್ಕೆ ಸುಮ್ಮನಿರದೆ ಆಕೆಗೆ ಕರೆ ಮಾಡಿ ನಿನ್ನ ಅಶ್ಲೀಲ ಫೋಟೋ ಕಳುಹಿಸು ಇಲ್ಲವಾದರೆ ನಿನ್ನನ್ನು ಮದುವೆಯಾಗುವುದಿಲ್ಲ ಎಂದು ಬೆದರಿಸಿದ್ದ ಎನ್ನಲಾಗಿದೆ. ಬಳಿಕ ಪ್ರಿಯತಮೆ ತನ್ನ ಖಾಸಗಿ ಫೋಟೋಗಳನ್ನು ಕಳುಹಿಸಿದ್ದಾಳೆ. ಕೆಲ ದಿನಗಳ ಬಳಿಕ ಅಶ್ಲೀಲ ಫೋಟೋಗಳನ್ನು ಪ್ರಿಯತಮೆಯ ಮನೆಯವರ ಫೋನ್ ಗಳಿಗೆ ರವಾನಿಸಿಲ್ಲದೆ, ಕೊಲೆ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಲಾಗಿದೆ.
ಈ ಸಂಬಂಧ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಂಡ ಪೊಲೀಸರು, ಆರೋಪಿ ಪ್ರಶಾಂತ್ನನ್ನು ಬಂಧಿಸಿದ್ದಾರೆ.







